ನಾಳೆಯಿಂದ ಸಂಸತ್ ಅಧಿವೇಶನ, ಸರ್ಕಾರವನ್ನು ಹಣಿಯಲು ವಿಪಕ್ಷಗಳು ಸಜ್ಜು
ನವದೆಹಲಿ, ಜುಲೈ 16: ನಾಳೆಯಿಂದ (ಸೋಮವಾರ) ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಅಧಿವೇಶನದಲ್ಲಿ ಎನ್.ಡಿಎ ಸರಕಾರಕ್ಕೆ ಚಾಟಿ ಬೀಸಲು ವಿಪಕ್ಷಗಳು ಸಜ್ಜಾಗಿವೆ.
ಭಾರತ-ಚೀನಾ ಗಡಿ ಬಿಕ್ಕಟ್ಟು, ಅಮರನಾಥ ಯಾತ್ರಿಕರ ಮೇಲಿನ ದಾಳಿಯೂ ಸೇರಿದಂತೆ ಕಾಶ್ಮೀರದಲ್ಲಿ ಮುಂದುವರಿದ ಭಯೋತ್ಪಾದಕರ ಅಟ್ಟಹಾಸ, ದೇಶದ ವಿವಿಧೆಡೆ ನಡೆಯುತ್ತಿರುವ ಗೋರಕ್ಷಕರ ದೌರ್ಜನ್ಯ, ರೈತರ ಸರಣಿ ಆತ್ಮಹತ್ಯೆ, ಮೋದಿ ಇಸ್ರೇಲ್ ಭೇಟಿ, ಜಿಎಸ್ಟಿ ಜಾರಿಯಿಂದ ಉಂಟಾಗಿರುವ ಸಮಸ್ಯೆಗಳು, ಮುಂಗಾರು ಕೊರೆತೆಯಿಂದ ಕರ್ನಾಟಕವೂ ಸೇರಿದಂತೆ ಹಲವೆಡೆ ಬರದ ಆತಂಕ ಸೇರಿದಂತೆ ಹಲವು ವಿಚಾರಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ.
ಜುಲೈ 17ರಿಂದ ಆಗಸ್ಟ್ 11ರ ವರೆಗೆ ಅಧಿವೇಶನ ನಡೆಯಲಿದೆ. ಮೊದಲ ದಿನ ಚಿತ್ರನಟ ಮತ್ತು ಲೋಕಸಭಾ ಸದಸ್ಯ ವಿನೋದ್ ಖನ್ನಾ ಮತ್ತು ರಾಜ್ಯಸಭೆ ಸದಸ್ಯೆ ಪಲ್ಲವಿ ರೆಡ್ಡಿ ನಿಧನಕ್ಕೆ ಸಂತಾಪ ಸೂಚಿಸುವುದರೊಂದಿಗೆ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳ ಮೊದಲ ದಿನದ ಕಲಾಪ ಕೊನೆಗೊಳ್ಳಲಿದೆ.
ಮಂಗಳವಾರದಿಂದ ಅಧಿಕೃತ ಕಲಾಪ ಆರಂಭವಾಗಲಿದೆ. ಈ ವೇಳೆ ಪ್ರಮುಖ ವಿಷಯಗಳು ಚರ್ಚೆಗೆ ಬರಲಿದ್ದು ಎರಡೂ ಸದನಗಳಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.
16 ಮಸೂದೆಗಳ ಮಂಡನೆ
ಈ ಬಾರಿಯ ಅಧಿವೇಶನದಲ್ಲಿ 16 ವಿಧೇಯಕಗಳು ಮಂಡನೆಯಾಗಲಿವೆ. ಬ್ಯಾಂಕಿಂಗ್ ನಿಬಂಧನೆ ತಿದ್ದುಪಡಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಿದ್ದುಪಡಿ ಮಸೂದೆ, ಪೌರತ್ವ ತಿದ್ದುಪಡಿ ಮಸೂದೆ, ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ತಿದ್ದುಪಡಿ ಮಸೂದೆ, ಜಿಎಸ್ಟಿ ಸೇರಿದಂತೆ ಅನುಮೋದನೆಗಾಗಿ ವಿಧೇಯಕಗಳು ಉಭಯ ಸದನಗಳಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.
ಸಂಜೆ ಸರ್ವಪಕ್ಷ ಸಭೆಗೆ ಜೆಡಿಯು ಗೈರು
ಎಂದಿನಂತೆ ಅಧಿವೇಶನದ ಹಿಂದಿನ ದಿನ ಅಂದರೆ ಇಂದು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಸರ್ವಪಕ್ಷಗಳ ಸಭೆ ಕರೆದಿದ್ದರು. ಬಿಹಾರ ಬಿಕ್ಕಟ್ಟಿನ ಸಲುವಾಗಿ ಸಭೆಯಿಂದ ಜೆಡಿಯು ಹೊರಗುಳಿದಿತ್ತು. ಆದರೆ ತಾವು ಸಭೆಯನ್ನು ಬಹಿಷ್ಕರಿಸಿಲ್ಲ ಎಂದು ಜೆಡಿಯು ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಸಭೆಯಲ್ಲಿ ಪ್ರಮುಖ ವಿಷಯಗಳ ಕುರಿತು ಗಂಭೀರ ಚರ್ಚೆಯ ವೇಳೆ ಗಲಭೆ ಮತ್ತು ಕಲಾಪಕ್ಕೆ ಅಡ್ಡಿಯುಂಟು ಮಾಡಬೇಡಿ. ಈ ಮೂಲಕ ಕಾಲಹರಣ ಮಾಡದಂತೆ ವಿರೋಧ ಪಕ್ಷಗಳ ಮುಖಂಡರಿಗೆ ಸುಮಿತ್ರಾ ಮಹಾಜನ್ ಮನವಿ ಮಾಡಿದರು.