ಗೋವಾ ವಿಧಾನಸಭೆ: ವಿಶ್ವಾಸ ಮತ ಗೆದ್ದ ಸಿಎಂ ಮನೋಹರ್ ಪಾರಿಕ್ಕರ್
ಸುಪ್ರೀಂ ಕೋರ್ಟ್ ವಿಧಿಸಿದ್ದ ಅಗ್ನಿ ಪರೀಕ್ಷೆಯಲ್ಲಿ ಪಾಸಾದ ಮನೋಹರ್ ಪಾರಿಕ್ಕರ್; ಸ್ಥಳೀಯ ಪಕ್ಷಗಳ ಶಾಸಕರ ಬಲವನ್ನು ಪಡೆದು ಗೋವಾದಲ್ಲಿ ಸರ್ಕಾರ ರಚಿಸುವಲ್ಲಿ ಯಶಸ್ವಿ; ಕಾಂಗ್ರೆಸ್ ಗೆ ನಿರಾಸೆ
ಪಣಜಿ, ಮಾರ್ಚ್ 16: ಗೋವಾದಲ್ಲಿ ಇತ್ತೀಚೆಗಷ್ಟೇ ಅಧಿಕಾರ ಗದ್ದುಗೆಯೇರಿದ್ದ ಮನೋಹರ್ ಪಾರಿಕ್ಕರ್ ನೇತೃತ್ವದ ಸರ್ಕಾರಕ್ಕೆ ವಿಶ್ವಾಸ ಮತ ಪ್ರಾಪ್ತವಾಗಿದೆ. ಈ ಹಿನ್ನೆಲೆಯಲ್ಲಿ ಗೋವಾದಲ್ಲಿ ಪಾರಿಕ್ಕರ್ ಅವರ ಸರ್ಕಾರಕ್ಕೆ ಸ್ಥಿರತೆ ಸಿಕ್ಕಿದೆ.
ಗೋವಾ ವಿಧಾನಸಭೆಯು ಒಟ್ಟು 40 ಜನ ಶಾಸಕ ಬಲವನ್ನು ಹೊಂದಿದೆ. ಗುರುವಾರ (ಮಾರ್ಚ್ 16) ನಡೆದ ವಿಶ್ವಾಸ ಮತ ಯಾಚನೆ ವೇಳೆ, 22 ಶಾಸಕರು ಮನೋಹರ್ ಪಾರಿಕ್ಕರ್ ಸರ್ಕಾರದ ಪರವಾಗಿ ಮತ ಚಲಾಯಿಸಿದರೆ, 17 ಶಾಸಕರು ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದರು. ಕಾಂಗ್ರೆಸ್ ಶಾಸಕ ವಿಶ್ವಜಿತ್ ರಾಣೆ ಮತದಾನ ಬಹಿಷ್ಕರಿಸಿ ಹೊರನಡೆದಿದ್ದರು.
ಹೀಗೆ, ಹೆಚ್ಚು ಮತ ಸಿಕ್ಕಿದ್ದರಿಂದಾಗಿ ಪಾರಿಕ್ಕರ್ ಸರ್ಕಾರ ಗೋವಾ ರಾಜ್ಯದಲ್ಲಿ ಸಂವಿಧಾನಾತ್ಮಕವಾಗಿ ಸ್ಥಿರವಾಗಿ ನಿಲ್ಲಲಿದೆ.
ಇತ್ತೀಚೆಗಷ್ಟೇ, ಗೋವಾ ಮುಖ್ಯಮಂತ್ರಿ ಗಾದಿಗೇರಿದ್ದ ಮನೋಹರ್ ಪಾರಿಕ್ಕರ್ ಅವರಿಗೆ ಮಾರ್ಚ್ 16ರಂದು ವಿಶ್ವಾಸ ಮತ ಯಾಚಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರಂತೆ ಇಂದು (ಮಾರ್ಚ್ 16) ಗೋವಾ ವಿಧಾನಸಭೆಯಲ್ಲಿ ವಿಶ್ವಾಸ ಮತಕ್ಕಾಗಿ ವಿಶೇಷ ಅಧಿವೇಶನ ಕರೆಯಲಾಗಿತ್ತು. ಈ ಅಧಿವೇಶನದಲ್ಲಿ ಪಾರಿಕ್ಕರ್ ಸರ್ಕಾರವು ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ.
ಪಕ್ಷಗಳ ಬಲಾಬಲ ಮೀರಿಯೂ ಅಧಿಕಾರಕ್ಕೆ
ಇತ್ತೀಚೆಗೆ ನಡೆದಿದ್ದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 17 ಸ್ಥಾನಗಳನ್ನು ಗೆದ್ದಿತ್ತು. ಅತ್ತ, ಬಿಜೆಪಿ 13 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಇನ್ನು, ಸ್ಥಳೀಯ ಪಕ್ಷಗಳಿಂದ ಒಟ್ಟು 10 ಜನರು ಜಯ ಗಳಿಸಿದ್ದರು. ಒಟ್ಟು 40 ಬಲದ ಗೋವಾ ವಿಧಾನಸಭೆಯಲ್ಲಿ ಯಾವುದೇ ಪಕ್ಷವು ಸರ್ಕಾರ ರಚಿಸಲು ಬಹುಮತ ಪಡೆಯಲು 21 ಸ್ಥಾನಗಳನ್ನು ಪಡೆಯಬೇಕು.
ರಾಜ್ಯಪಾಲರ ಜಾಣ್ಮೆಯ ನಡೆ
ಹಾಗೆ ನೋಡಿದರೆ, ಕಾಂಗ್ರೆಸ್ ಪಕ್ಷವು ಅತಿ ಹೆಚ್ಚು ಸ್ಥಾನಗಳಿರುವುದರಿಂದ ಆ ಪಕ್ಷವು ರಾಜ್ಯಪಾಲರಲ್ಲಿ ಸರ್ಕಾರ ರಚಿಸುವ ಹಕ್ಕನ್ನು ಮಂಡಿಸಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ಬಿಜೆಪಿ ಪಕ್ಷದ ಮುಖಂಡರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸುವ ಹಕ್ಕನ್ನು ಮಂಡಿಸಿದ್ದರಿಂದ ರಾಜ್ಯಪಾಲರಾಗಿರುವ ಮೃದುಲಾ ಸಿನ್ಹಾ ಅವರು, ಬಿಜೆಪಿಗೇ ಮೊದಲು ಸರ್ಕಾರ ರಚಿಸುವ ಅವಕಾಶ ನೀಡಿದರು.
ಸುಪ್ರೀಂಗೆ ಮೊರೆ
ಇದರಿಂದ ಕೆರಳಿದ ಕಾಂಗ್ರೆಸ್ ಪಕ್ಷವು, ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೊರೆಹೋಗಿತ್ತು. ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ತನಗೇ ಸರ್ಕಾರ ರಚಿಸಲು ಮೊದಲ ಪ್ರಾಶಸ್ತ್ರ ಸಿಗಬೇಕು, ಈ ಮೂಲಕ ಸ್ಥಳೀಯ ಪಕ್ಷಗಳ ಬೆಂಬಲ ಪಡೆದು ಅಧಿಕಾರ ಗದ್ದುಗೆ ಏರಲು ಹೊರಟಿರುವ ಮನೋಹರ್ ಪಾರಿಕ್ಕರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ತಡೆ ನೀಡಬೇಕೆಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಕಾಂಗ್ರೆಸ್ ಅಹವಾಲು ಸಲ್ಲಿಸಿತ್ತು.
ಕಾಂಗ್ರೆಸ್ ಪಕ್ಷಕ್ಕೆ ನಿರಾಸೆ
ಆದರೆ, ಸುಪ್ರೀಂ ಕೋರ್ಟ್ ''ಕೇವಲ ಅಂಕಿ ಸಂಖ್ಯೆ ಆಧಾರದ ಮೇಲೆ ಸರ್ಕಾರ ರಚನೆಗೆ ಅವಕಾಶ ಸಿಗುವುದಿಲ್ಲ. ರಾಜ್ಯಪಾಲರ ಬಳಿ ಯಾರು ಮೊದಲು ಸರ್ಕಾರ ರಚಿಸುವ ಹಕ್ಕನ್ನು ಮಂಡಿಸುವರೋ ಅವರಿಗೆ ಮೊದಲ ಪ್ರಾಶಸ್ತ್ಯ ಸಿಗುತ್ತದೆ' ಎಂದು ಸ್ಪಷ್ಟಪಡಿಸಿತು.
ವಿಶ್ವಾಸಮತದ ಅಗ್ನಿ ಪರೀಕ್ಷೆ ನಿಗದಿ
ಇದಲ್ಲದೆ, ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪಾರಿಕ್ಕರ್ ಪದಗ್ರಹಣ ಸಮಾರಂಭಕ್ಕೆ ತಡೆಯೊಡ್ಡುವುದಿಲ್ಲ ಎಂದಿತ್ತಲ್ಲದೆ, ಮಾರ್ಚ್ 16ರಂದು ಪಾರಿಕ್ಕರ್ ಅವರು ಗೋವಾ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸಬೇಕೆಂದೂ ಸವಾಲು ಹಾಕಿತ್ತು. ಅದರಂತೆ, ಮಾರ್ಚ್ 16ರಂದು ವಿಶ್ವಾಸ ಮತ ನಡೆದು ಪಾರಿಕ್ಕರ್ ಅದರಲ್ಲಿ ಜಯ ಸಾಧಿಸಿದ್ದಾರೆ.