ಇಸ್ಕಾನ್ ದೇಗುಲದಲ್ಲಿ ಸಾಧು ವೇಷದಲ್ಲಿದ್ದ ಪಾಕಿಸ್ತಾನಿ ಬಂಧನ
ದೆಹಲಿ-ಹರ್ಯಾಣ ಗಡಿಭಾಗದ ಬಹಾದುರ್ಘರ್ ಎಂಬ ಊರಿನಲ್ಲಿರುವ ಇಸ್ಕಾನ್ ದೇಗುಲವೊಂದರಲ್ಲಿ ಸಾಧುವಿನಂತೆ ವೇಷ ಧರಿಸಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿಯೊಬ್ಬನನ್ನು ಬಂಧಿಸಲಾಗಿದೆ.
ರೋಹ್ಟಕ್, ಮೇ 26: ದೆಹಲಿ-ಹರ್ಯಾಣ ಗಡಿಭಾಗದ ಬಹಾದುರ್ಘರ್ ಎಂಬ ಊರಿನಲ್ಲಿರುವ ಇಸ್ಕಾನ್ ದೇಗುಲವೊಂದರಲ್ಲಿ ಸಾಧುವಿನಂತೆ ವೇಷ ಧರಿಸಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿಯೊಬ್ಬನನ್ನು ಬಂಧಿಸಲಾಗಿದೆ. 'ನಾನು ಪಾಕಿಸ್ತಾನಿಯಾದರೂ ನಾನೊಬ್ಬ ಹಿಂದೂ, ಭಾರತದಲ್ಲಿ ನೆಲೆಸರು ಇಷ್ಟ, ಹೀಗಾಗಿ ಇಲ್ಲೇ ಉಳಿದೆ' ಎಂದು ಹೇಳಿದ್ದಾನೆ.
ಬಂಧಿತನ ಬಳಿ ಇದ್ದ ಪಾಕಿಸ್ತಾನಿ ಪಾಸ್ಪೋರ್ಟನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಆತನ ಹೆಸರು ರಾಜಾ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನದಲ್ಲಿನ ಹಿಂದೂ ಬಡಾವಣೆಯ ನಿವಾಸಿ ಎಂದು ತಿಳಿದು ಬಂದಿದೆ. ಆತನಿಗೆ ನೀಡಲಾದ ಭಾರತೀಯ ವೀಸಾದ ಅವಧಿ 2016ರಲ್ಲಿ ಅಂತ್ಯಗೊಂಡಿದೆ.
ಆದರೆ, ವೀಸಾ ನವೀಕರಣದ ಬಗ್ಗೆ ಚಿಂತಿಸದೆ, ಹರಿ ಭಜನೆ ಮಾಡುತ್ತಾ ಕಳೆದ 9 ತಿಂಗಳುಗಳಿಂದ ಇಸ್ಕಾನ್ ದೇಗುಲದಲ್ಲಿ ಸಾಧುವಿನಂತೆ ಉಳಿದುಕೊಂಡಿದ್ದಾನೆ.
ಪಾಸ್ ಪೋರ್ಟ್ ಅಲ್ಲದೆ, ಆತನ ಬಳಿ ಸ್ಥಳೀಯ ಆಧಾರ್ ಕಾರ್ಡ್, ಪ್ಯಾನ್ ಇನ್ನಿತರ ಗುರುತಿನ ಚೀಟಿಗಳು ಕಂಡು ಬಂದಿದ್ದು, ಎಲ್ಲವನ್ನು ವಶಪಡಿಸಿಕೊಳ್ಳಲಾಗಿದೆ.
ಗುರುತಿನ ಚೀಟಿಗಳಲ್ಲಿ ರಾಜಾ ಎಂಬ ಹೆಸರಿನ ಬದಲಿಗೆ ರಸರಾಜ್ ಎಂದು ಮುದ್ರಿತವಾಗಿದೆ. ವಿಳಾಸ ಇಸ್ಕಾನ್ ದೇವಾಲಯ, ಬಹಾದುರ್ಘರ್ ಎಂದಿದೆ. ಪಾಸ್ ಪೋರ್ಟ್ ನಲ್ಲಿರುವ ಜನನ ದಿನಾಂಕಕ್ಕೂ ಆಧಾರ್, ಪ್ಯಾನ್ ಕಾರ್ಡಿನಲ್ಲಿರುವ ಜನನ ದಿನಾಂಕಕ್ಕೂ ವ್ಯತ್ಯಾಸವಿರುವುದು ಕಂಡು ಬಂದಿದೆ. ಸದ್ಯ ಹರ್ಯಾಣ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಎಸ್ ಪಿ ಸತೀಶ್ ಬಾಲನ್ ಹೇಳಿದ್ದಾರೆ.