ಭಾರತದೊಳಗೆ ಅಕ್ರಮವಾಗಿ ನುಸುಳಲು ಯತ್ನಿಸಿದ ವೃದ್ಧೆ ಬಲಿ
ಪಂಜಾಬಿನ ಗುರದಾಸ್ಪುರ್ ಅಂತಾರಾಷ್ಟ್ರೀಯ ಗಡಿ ರೇಖೆ ದಾಟಿ ಒಳ ಪ್ರವೇಶಿಸಲು ಯತ್ನಿಸುತ್ತಿದ್ದ ಓರ್ವ ವೃದ್ಧೆಯನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಸೋಮವಾರ ಬೆಳಗ್ಗೆ ಗುಂಡಿಟ್ಟು ಕೊಂದು ಹಾಕಿದ್ದಾರೆ.
ಅಮೃತ್ ಸರ್, ಮೇ 15:ಮೇ 15: ಪಂಜಾಬಿನ ಗುರುದಾಸ್ಪುರ್ ಬಳಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿ ಮೂಲಕ ಅಕ್ರಮವಾಗಿ ನುಸುಳಲು ಯತ್ನಿಸಿದ ಪಾಕಿಸ್ತಾನ ಮೂಲದ ವೃದ್ಧೆಯೊಬ್ಬರನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಸೋಮವಾರ ಮುಂಜಾನೆ ಕೊಂದು ಹಾಕಿದ್ದಾರೆ.
ಗಡಿಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಪಾಕಿಸ್ತಾನಿ ಪ್ರಜೆ ಈ ಮಹಿಳೆ(60ವರ್ಷ)ಗೆ ಅನೇಕ ಬಾರಿ ಎಚ್ಚರಿಕೆ ನೀಡಲಾಯಿತು. ಆದರೆ, ಎಚ್ಚರಿಕೆಯನ್ನು ಲೆಕ್ಕಿಸದೆ ಗಡಿ ಬೇಲಿ ದಾಟಲು ಮುಂದಾಗಿದ್ದಕ್ಕೆ ಆಕೆಯನ್ನು ಹೊಡೆದುರುಳಿಸಬೇಕಾಯಿತು ಎಂದು ಬಿಎಸ್ಎಫ್ ಹೇಳಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಇಂಥದ್ದೇ ಘಟನೆ ಸಂಭವಿಸಿತ್ತು, ಕಳೆದ ಮೂರು ತಿಂಗಳಿನಲ್ಲಿ ಈ ಭಾಗದಲ್ಲಿ ಇಬ್ಬರು ನುಸುಳುಕೋರರನ್ನು ಕೊಂದು ಹಾಕಲಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಭಾರತ-ನೇಪಾಳ ಗಡಿಯಲ್ಲಿ ಹಿಜ್ಬುಲ್ ಮುಜಾಹೀದ್ದೀನ್ ಉಗ್ರನನ್ನು ಭಾನುವಾರದದು ಸೆರೆ ಹಿಡಿಯಲಾಯಿತು. ಇದರ ಬೆನ್ನಲ್ಲೇ ಪಾಕ್ ನುಸುಳುಕೋರರ ಮೇಲೆ ತೀವ್ರ ನಿಗಾವಹಿಸಲಾಗಿದೆ.
ಕಳೆದ ಶನಿವಾರ, ಲಷ್ಕರ್ ಎ ತೊಯ್ಬಾ ಸಂಘಟನೆಯ ಐವರು ಉಗ್ರರನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಬಂಧಿತ ಉಗ್ರರು ಮೇ 7ರಂದು ಪೊಲೀಸ್ ಠಾಣೆ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದರು.