ಅಖಾಡಕ್ಕಿಳಿದ ಸೋನಿಯಾ: ಬಿಜೆಪಿಗೆ ಸಂಖ್ಯಾಬಲದ ತಲೆಬಿಸಿ
ಕಳೆದ ಎರಡು ವರ್ಷಗಳಿಂದ ರಾಜಕೀಯ ಚಟುವಟಿಕೆಯಿಂದ ದೂರವಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತೆ ಸಕ್ರಿಯ ರಾಜಕಾರಣದ ಆಖಾಡಕ್ಕಿಳಿದಿದ್ದಾರೆ. ಮುಂಬರುವ ರಾಷ್ಟಪತಿ ಚುನಾವಣೆಯಲ್ಲಿ ಸೋನಿಯಾ ಮಹತ್ವದ ಪಾತ್ರ ವಹಿಸುವ ಸಾಧ್ಯತೆ.
ದೇಶದ ಪ್ರಭಾವಿ ನಾಯಕಿಯರಲ್ಲಿ ಒಬ್ಬರಾಗಿರುವ ಸೋನಿಯಾ ಗಾಂಧಿ ಎಲ್ಲಿ? ರಾಷ್ಟ್ರ ರಾಜಕಾರಣದಲ್ಲಿ ಎಷ್ಟೊಂದು ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದರೂ ಸೋನಿಯಾ ಏಕೆ ತೆರೆಮರೆಯಲ್ಲಿದ್ದಾರೆ? ಯಾಕೆ ಯಾವುದೇ ಸಭೆಗಳಲ್ಲಾಗಲಿ, ಚುನಾವಣಾ ಪ್ರಚಾರದಲ್ಲಾಗಲಿ ಭಾಗಿಯಾಗುತ್ತಿಲ್ಲ ಎಂಬ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ದೊರೆಯುವ ಸೂಚನೆಗಳು ಕಾಣಿಸುತ್ತಿವೆ.
ಅನಾರೋಗ್ಯದಿಂದಾಗಿ ಕೆಲಕಾಲ ದೂರವೇ ಉಳಿದಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಇಳಿಯಲಿದ್ದಾರೆ. ಬಿಜೆಪಿಗೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಅವರು ಪ್ರಮುಖ ಪಾತ್ರವಹಿಸಲಿದ್ದಾರೆ. ವಿರೋಧ ಪಕ್ಷಗಳೆಲ್ಲವೂ ಸೋನಿಯಾ ಗಾಂಧಿ ನೇತೃತ್ವದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲಾರಂಭಿಸಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.
ಒಂದೆಡೆ ಎನ್ಡಿಎ ಮೈತ್ರಿಕೂಟದ ಕೆಲವೊಂದು ಸದಸ್ಯರ ಅಪಸ್ವರ, ಇನ್ನೊಂದೆಡೆ ಚುನಾವಣೆ ಗೆಲ್ಲಲು ಉಂಟಾಗಿರುವ ಸುಮಾರು 17 ಸಾವಿರ ಮತಗಳ ಕೊರತೆಯನ್ನು ಹೇಗೆ ನಿಭಾಯಿಸುವುದು ಎಂದು ಬಿಜೆಪಿ ಲೆಕ್ಕಾಚಾರ ಹಾಕುತ್ತಿರುವ ಹೊತ್ತಲ್ಲೇ ವಿರೋಧ ಪಕ್ಷಗಳು ಚುರುಕಿನ ರಾಜಕೀಯ ನಡೆಯಿಡುತ್ತಿದೆ.
ಪ್ರಮುಖವಾಗಿ ಉತ್ತರಪ್ರದೇಶದ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಅಭೂತಪೂರ್ವ ಜನಾದೇಶದ ನಂತರ, ಡು ಆರ್ ಡೈ ನಿರ್ಧಾರಕ್ಕೆ ಬಂದಂತಿರುವ ಯುಪಿಎ ಮತ್ತು ತೃತೀಯ ರಂಗದ ಸದಸ್ಯರು , ರಾಷ್ಟ್ರಪತಿ ಚುನಾವಣೆಗೆ ಒಗ್ಗಟ್ಟಾಗಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬ್ಯಾಕ್ ಗ್ರೌಂಡ್ ವರ್ಕ್ ಶುರುಮಾಡಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದಲ್ಲಿ ಬಿಜೆಪಿ ಭದ್ರ ಬುನಾದಿ ಹಾಕುವಲ್ಲಿ ಯಶಸ್ವಿಯಾಗಿತ್ತಿರುವುದರಿಂದ ಮಮತಾ ಬ್ಯಾನರ್ಜಿ ಮತ್ತು ನವೀನ್ ಪಟ್ನಾಯಕ್ ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಬದಲಾಯಿಸಿಕೊಳ್ಳುವ ಅನಿರ್ವಾತೆಯಲ್ಲಿದ್ದಾರೆ. ಮುಂದೆ ಓದಿ
ಊಹಿಸಲೂ ಅಸಾಧ್ಯವಾದ ಬಿಜೆಪಿ ಸಾಧನೆ
ಒರಿಸ್ಸಾದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಬಿಜೆಪಿ ತೋರಿದ ಸಾಧನೆ ಮತ್ತು ದೇಶದೆಲ್ಲಡೆ ಹೆಚ್ಚುತ್ತಿರುವ ಮೋದಿ ಜನಪ್ರಿಯತೆಯಿಂದಾಗಿ ನವೀನ್ ಪಟ್ನಾಯಕ್ ಮತ್ತು ಮಮತಾ ಬ್ಯಾನರ್ಜಿ ಮುಂದಿನ ರಾಜಕೀಯ ನಡೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ವಿರುದ್ದ ಒಮ್ಮತದ ಮಂತ್ರ
ಎನ್ಡಿಎಗೆ ವಿರುದ್ದವಾಗಿ ವಿರೋಧ ಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಇದಕ್ಕೆ ಸೋನಿಯಾ ಮುಂದಾಳುತ್ವ ವಹಿಸಿಕೊಳ್ಳುವಂತೆ ಒತ್ತಡ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕಮ್ಯೂನಿಸ್ಟ್ ಮುಖಂಡ ಸೀತಾರಾಂ ಯೆಚೂರಿ, ಸೋನಿಯಾ ಅವರನ್ನು ಭೇಟಿಯಾಗಿದ್ದಾರೆ.
ಶಿವಸೇನೆ ಮತ್ತು ತೆಲುಗುದೇಶಂ ಪಕ್ಷದ ಸವಾಲು
ಪ್ರಮುಖವಾಗಿ ಬಿಜೆಪಿಗೆ ಎನ್ಡಿಎ ಮೈತ್ರಿಕೂಟದ ಸದಸ್ಯರಾದ ಶಿವಸೇನೆ ಮತ್ತು ತೆಲುಗುದೇಶಂ ಪಕ್ಷಗಳು ತಲೆನೋವಾಗಿ ಪರಿಣಮಿಸುತ್ತಿದೆ. ಸಿಕ್ಕಾಗಲೆಲ್ಲಾ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವ ಶಿವಸೇನೆ ಒಂದೆಡೆಯಾದರೆ, ರೈತರ ಸಾಲದ ಮನ್ನಾ ವಿಚಾರದಲ್ಲಿ ಚಂದ್ರಬಾಬು ನಾಯ್ಡು ಬಿಜೆಪಿ ವಿರುದ್ದ ಮುನಿಸಿಕೊಂಡಿರುವುದು ತಲೆನೋವಾಗಿ ಪರಿಣಮಿಸಿದೆ.
ಸೋನಿಯಾ ಭೇಟಿಯಾಗುತ್ತಿರುವ ಲಾಲೂ
ಆರ್ಜೆಡಿಯ ಲಾಲೂ ಪ್ರಸಾದ್ ಸದ್ಯದಲ್ಲೇ ಸೋನಿಯಾ ಗಾಂಧಿಯವರನ್ನು ಭೇಟಿಯಾಗುತ್ತಿರುವುದು ಒಮ್ಮತದ ಅಭ್ಯರ್ಥಿಗಳನ್ನು ನಿಲ್ಲಿಸುವ ವಿರೋಧ ಪಕ್ಷಗಳ ನಿರ್ಧಾರಕ್ಕೆ ಹೊಸಬಲ ಬಂದಂತೆ. ಇದಲ್ಲದೇ ಜೆಡಿಎಸ್ ಮತ್ತು ತೆಲಂಗಾಣದ ಸಿಎಂ ಕೆಸಿಆರ್ ಕೂಡಾ ಎನ್ಡಿಎ ವಿರೋಧಿ ಮೈತ್ರಿಕೂಟದಲ್ಲಿ ಕಾಣಿಸಿಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ.
ವಿರೋಧಿಗಳಿಗೆ ತಲೆನೋವಾಗುತ್ತಿರುವ ಮೋದಿ ಜನಪ್ರಿಯತೆ
ಮೋದಿಯ ಜನಪ್ರಿಯತೆ ಇದೇ ರೀತಿ ಮುಂದುವರಿದರೆ ನಮಗೆ ಉಳಿಗಾಲವಿಲ್ಲ ಎನ್ನುವ ಕಾರಣಕ್ಕಾಗಿ ಎನ್ಡಿಎ ಹೊರತಾದ ಎಲ್ಲಾ ಪಕ್ಷಗಳನ್ನು ಒಗ್ಗೂಡಿಸುವುದು ಸೋನಿಯಾಗೆ ಭಾರೀ ಕಷ್ಟದ ಕೆಲಸವೇ ಸರಿ. ತಮಿಳುನಾಡಿನಲ್ಲಿ ಎಐಎಡಿಎಂಕೆ, ಡಿಎಂಕೆ, ಜೊತೆಗೆ ಬಂಗಾಳದಲ್ಲಿ ಎಡಪಕ್ಷಗಳು ಮತ್ತು ಟಿಎಂಸಿ ಪಕ್ಷವನ್ನು ಒಂದಾಗಿಸುವುದು ಸೋನಿಯಾಗೆ ಸವಾಲಿನ ಕೆಲಸವೇ ಸರಿ.
ಜುಲೈ 2017ರಲ್ಲಿ ನಡೆಯಬೇಕಾಗಿರುವ ರಾಷ್ಟ್ರಪತಿ ಚುನಾವಣೆ
ಒಟ್ಟಾರೆಯಾಗಿ ರಾಷ್ಟ್ರಪತಿ ಚುನಾವಣೆಗೆ ಚಲಾವಣೆಯಾಗುವ ಮತಗಳ ಮೌಲ್ಯ 10,98,882. ಇದರಲ್ಲಿ ಗೆಲ್ಲಲು ಬೇಕಾದ ಮತಗಳ ಮೌಲ್ಯ 549,442, ಎನ್ಡಿಎ ಮೈತ್ರಿಕೂಟಕ್ಕೆ ಈಗಿರುವ ಮತಗಳ ಮೌಲ್ಯ 532,195. ಚುನಾವಣೆ ಗೆಲ್ಲಲು ಬಿಜೆಪಿಗಿರುವ ಕೊರತೆ 17,247.