ಅತ್ಯಂತ ಪ್ರಾಚೀನ ಸಮುದಾಯ ಜಾಟ್ ಗಳ ಸಮಸ್ಯೆ ಏನು?
ಹಿಂದುಳಿದ ವರ್ಗಕ್ಕೆ (ಒಬಿಸಿ) ತಮ್ಮ ಸಮುದಾಯವನ್ನು ಸೇರಿಸಬೇಕು, ಶಿಕ್ಷಣ, ಉದ್ಯೋಗ ಸೇರಿದ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಜಾಟ್ ಸಮುದಾಯ ಹೋರಾಟ ನಡೆಸುತ್ತಿದೆ.
ಹರಿಯಾಣದಲ್ಲಿ ಆರಂಭವಾದ ಹಿಂಸಾಚಾರ, ದೇಶದ ವಿವಿಧ ರಾಜ್ಯಗಳಿಗೆ ಹಬ್ಬಿ, ಸಮಸ್ಯೆ ಉಲ್ಬಣಿಸಿದೆ. ಮೀಸಲಾತಿ ನೀಡಲು ಹರ್ಯಾಣದ ಬಿಜೆಪಿ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ, ಹತ್ತಾರು ಜೀವಗಳು ಬಲಿಯಾಗಿದ್ದು, 20 ಸಾವಿರ ಕೋಟಿ ರು ನಷ್ಟ ಅನುಭವಿಸಬೇಕಾಗಿ ಬಂದಿದೆ. ಜಾಟ್ ಗಲಭೆ, ಸಮಸ್ಯೆ ಬಗ್ಗೆ ವಿವರಣೆ ಇಲ್ಲಿದೆ [ಜಾಟ್ ಹಿಂಸಾಚಾರ ಬಿಸಿ, ಭಾರತದ ರಾಜಧಾನಿಯಲ್ಲಿ ನೀರಿಗೆ ಬರ!]
ಸಮುದಾಯದ ಹಿನ್ನೆಲೆ: ಜಾಟ್ ಸಮುದಾಯದ ಅಸ್ತಿತ್ವ ಭಾರತದಲ್ಲಿ ಸಿಂಧೂ ನಾಗರಿಕತೆಯ ಕಾಲದಿಂದ ಇದೆ. ಮೂಲತಃ ಕೃಷಿಕರಾದ ಇವರು ಉತ್ತರ ಭಾರತ ಮತ್ತು ಪಾಕಿಸ್ತಾನದ ಹಲವೆಡೆ ನೆಲೆಸಿದ್ದಾರೆ. ದೆಹಲಿ, ಹರಿಯಾಣ, ಪಂಜಾಬ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಬ್ರಿಟಿಷರ ಕಾಲದಲ್ಲಿ ಜಾಟ್ ಸಮುದಾಯದ ಕೃಷಿಕರಿಂದ ತೆರಿಗೆ ಪಡೆಯಲು ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಸರ್ ಡೆನ್ಜಿಲ್ ಎಬೆಟ್ಸನ್ ಹೇಳಿದ್ದಾರೆ.
ಹರ್ಯಾಣ ಹಾಗೂ ಭಾರತದ ರಾಜಕೀಯ ಕ್ಷೇತ್ರದಲ್ಲೂ ಜಾಟ್ ಸಮುದಾಯದ ನಾಯಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಸರ್ ಛೋಟು ರಾಮ್, ಕೆಲ ಕಾಲ ದೇಶದ ಪ್ರಧಾನಿಯಾಗಿದ್ದ ಚೌಧರಿ ಚರಣ್ ಸಿಂಗ್ ಅವರ ಹೆಸರನ್ನು ಇಲ್ಲಿ ಉಲ್ಲೇಖಿಸಬಹುದು.[ಜಾಟ್ ಸಮುದಾಯಕ್ಕೆ ಯುವಿ, ವೀರು ಕರೆ]
ಸಮಸ್ಯೆ ಮತ್ತೆ ಉಲ್ಬಣಿಸಿದ್ದು ಏಕೆ?
2015ರ ಮಾರ್ಚ್ನಲ್ಲಿ 9 ರಾಜ್ಯಗಳಲ್ಲಿ ಜಾಟರಿಗೆ ಮೀಸಲಾತಿ ನೀಡುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು. ಇದನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಮೀಸಲಾತಿ ನೀಡಲು ಸಾಮಾಜಿಕ ಹಿಂದುಳಿಯುವಿಕೆ ಮುಖ್ಯ ಮಾನದಂಡವಾಗಬೇಕೇ ಹೊರತು ಜಾತಿ ಆಧಾರವಾಗಬಾರದು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಇದಾದ ಬಳಿಕ ಸಮಸ್ಯೆ ಮತ್ತೆ ಉಲ್ಬಣಿಸಿದೆ.
ಜಾಟ್ ಗಳ ಸದ್ಯದ ಬೇಡಿಕೆ ಏನು?
ಹರಿಯಾಣದ ಒಟ್ಟು ಜನಸಂಖ್ಯೆಯಲ್ಲಿ ಶೇ.29 ಜಾಟ್ ಸಮುದಾಯದವರಿದ್ದಾರೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಷ್ಟೇನೂ ಹಿಂದುಳಿದ ವರ್ಗವಲ್ಲವಾದರೂ, ಶೈಕ್ಷಣಿಕವಾಗಿ ಮೀಸಲಾತಿಗಾಗಿ ಆಗ್ರಹಿಸುತ್ತಿದ್ದಾರೆ. ಜಾತಿ ಆಧಾರದಲ್ಲಿ ತಮ್ಮ ಸಮುದಾಯವನ್ನು ಒಬಿಸಿ ವರ್ಗದಡಿ ಪರಿಗಣಿಸುವಂತೆ ಕೋರಿದ್ದಾರೆ.
ಮೀಸಲಾತಿ ಬೇಡಿಕೆ 1991ರಿಂದ ಇದೆ
1991ರಲ್ಲಿ ಗುರ್ ನಾಮ್ ಸಿಂಗ್ ಆಯೋಗದ ವರದಿಯಂತೆ ಜಾಟ್ ಗಳನ್ನು ಹಿಂದುಳಿತ ವರ್ಗಕ್ಕೆ ಸೇರಿಸಲಾಯಿತು. 2013ರಲ್ಲಿ ಹರಿಯಾಣ ಸರ್ಕಾರ ಶೇ.10ರ ಮೀಸಲಾತಿ ನೀಡಲು ಮುಂದಾಗಿತ್ತು. ಆದರೆ, ರಾಜ್ಯವೊಂದರಲ್ಲಿ ನೀಡಲಾಗುವ ಮೀಸಲಾತಿಯ ಒಟ್ಟು ಪ್ರಮಾಣ ಶೇ. 50 ಮೀರಬಾರದು ಎಂದು 1992ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಇದಕ್ಕೆ ವಿರುದ್ಧವಾಗಿತ್ತು.ಹೀಗಾಗಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸರ್ಕಾರದ ಕ್ರಮಕ್ಕೆ ತಡೆಯಾಜ್ಞೆ ನೀಡಿತ್ತು.
90ರ ದಶಕದಲ್ಲೇ ಕೇಳಿಬಂದಿತ್ತು ಕೂಗು
1991ರಲ್ಲಿ ಜಾಟ್ ಸಮುದಾಯದವರು ಮೊದಲ ಬಾರಿ ಮೀಸಲಾತಿ ಬೇಡಿಕೆ ಇಟ್ಟಿದ್ದರು. ಇದರ ಆಧಾರದಲ್ಲಿ 1997ರಲ್ಲಿ ವಿವಿಧ ರಾಜ್ಯಗಳಲ್ಲಿನ ಜಾಟರ ಸ್ಥಿತಿಗತಿ ಕುರಿತು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಸಮೀಕ್ಷೆಯನ್ನೂ ನಡೆಸಿತ್ತು. 2009ರಲ್ಲಿ ಮೀಸಲಾತಿ ಬೇಡಿಕೆ ತೀವ್ರಗೊಂಡಿದ್ದು, ಜಾಟ್ ಆರಕ್ಷಣ ಸಮಿತಿ ರಚಿಸಲಾಗಿತ್ತು. 2014ರ ಲೋಕಸಭೆ ಚುನಾವಣೆಗೂ ಮುನ್ನ ಜಾಟರ ಪ್ರತಿಭಟನೆ ತೀವ್ರಗೊಂಡಿತ್ತು.
ಜಾಟ್ ಗಳ ಸಾಮಾಜಿಕ ಆರ್ಥಿಕ ಪರಿಸ್ಥಿತಿ
ಕೆಸಿ ಗುಪ್ತಾ ವರದಿಯಂತೆ ಉನ್ನತ ಸರ್ಕಾರಿ ಹುದ್ದೆಗಳಲ್ಲಿ ಶೇ 18ರಷ್ಟು ಜಾಟ್ ಗಳಿದ್ದಾರೆ. ಮಿಕ್ಕ ಕ್ಷೇತ್ರದಲ್ಲಿ ಶೇ 40 ರಿಂದ 60ರಷ್ಟು ಉದ್ಯೋಗ ಪಡೆದಿದ್ದಾರೆ. ಶೈಕ್ಷಣಿಕವಾಗಿ ಶೇ 10ರಿಂದ ಹೆಚ್ಚು ಪ್ರಾತಿನಿಧ್ಯ ಇದೆ. ಕೃಷಿಕರಾದ ಜಾಟ್ ಗಳ ಪೈಕಿ ಶೇ 10ರಷ್ಟು ಮಂದಿಗೆ ಉಳುಮೆಗೆ ಸ್ವಂತ ಭೂಮಿ ಇಲ್ಲ. ಮುಂದಿನ 10 ವರ್ಷಗಳಲ್ಲಿ ಜಾಟ್ ಗಳ ರೈತಾಪಿ ಬದುಕು ಕಷ್ಟಕರವಾಗಲಿದೆ ಎನ್ನಲಾಗಿದೆ.