ಗೋ ರಕ್ಷಣೆ: ಕೇಂದ್ರ, ಕರ್ನಾಟಕ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಗೋ ರಕ್ಷರನ್ನು ನಿಷೇಧಿಸಬೇಕೆಂಬ ಕೂಗು ಎದ್ದಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಜತೆಗೆ ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ ಸರ್ಕಾರಗಳಿಗೂ ಈ ಸಂಬಂಧ ನೋಟಿಸ್ ಜಾರಿಯಾಗಿದೆ.
ನವದೆಹಲಿ, ಏಪ್ರಿಲ್ 7: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ಗೋ ರಕ್ಷಕರ ಸ್ವಯಂಪ್ರೇರಿತ ದಾಳಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಏಪ್ರಿಲ್ 7ರಂದು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಆಡಳಿತವಿರುವ ಅಥವಾ ಬಿಜೆಪಿಯ ಅಲೆಯಿರುವ 6 ರಾಜ್ಯಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಕೇಂದ್ರ ಸರ್ಕಾರದ ಜತೆಗೆ ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ ಸರ್ಕಾರಗಳಿಗೂ ಈ ಸಂಬಂಧ ನೋಟಿಸ್ ಜಾರಿಯಾಗಿದೆ.
ಇತ್ತೀಚೆಗೆ, ರಾಜಸ್ಥಾನದ ಅಲ್ವಾರ್ ನಲ್ಲಿ ವ್ಯಕ್ತಿಯೊಬ್ಬನನ್ನು ಗೋ ಸಾಕಾಣಿಕೆ ಮಾಡುತ್ತಿದ್ದ ವೇಳೆ ಗೋ ಸಂರಕ್ಷಣಾ ಸಂಘಟನೆಯೊಂದು ದಾಳಿ ನಡೆಸಿತ್ತು. ಆ ಘಟನೆಯಲ್ಲಿ ಆ ವ್ಯಕ್ತಿಯು ಹತನಾಗಿದ್ದ. ಇದೇ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದ್ದ ದಾಳಿಯೊಂದರಲ್ಲಿ ವ್ಯಕ್ತಿಯೊಬ್ಬ ಹತನಾಗಿದ್ದ.
ಆದರೆ, ಆನಂತರ ಆತ ಓರ್ವ ರೈತನಾಗಿದ್ದು ಹೈನುಗಾರಿಕೆಯಲ್ಲಿ ಸಕ್ರಿಯನಾಗಿದ್ದರಿಂದ ಆ ದಿನ ಹಸುಗಳನ್ನು ಕಾರ್ಯನಿಮಿತ್ತ ಬೇರೆಡೆಗೆ ಸಾಗಿಸುತ್ತಿದ್ದ. ಆದರೆ, ಇದನ್ನು ತಪ್ಪಾಗಿ ಅರ್ಥೈಸಿದ ಗೋ ಸಂರಕ್ಷಕರು ದಾಳಿ ನಡೆಸಿ ಆತನ ಸಾವಿಗೆ ಕಾರಣರಾಗಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದವು. ಹೀಗಾಗಿ, ಗೋ ಸಂರಕ್ಷಣೆ ಗುಂಪುಗಾರಿಕೆಯನ್ನು ನಿಷೇಧಿಸಬೇಕೆಂದು ಕೂಗೆದ್ದಿದೆ.
ಇದೆಲ್ಲದರ ಆಧಾರದ ಮೇಲೆ, ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದ್ದು ಗೋ ರಕ್ಷಕರ ಹತೋಟಿಗೆ ಮನವಿ ಮಾಡಲಾಗಿದೆ. ಏಪ್ರಿಲ್ 7ರಂದು ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಗೋ ರಕ್ಷಕರೆಂಬ ಹಣೆಪಟ್ಟಿಯಲ್ಲಿ ಚಿಕ್ಕಪುಟ್ಟ ಸಂಘಗಳ, ಗುಂಪುಗಳ ಅಸ್ತಿತ್ವ ಹಾಗೂ ಅವುಗಳ ಔಚಿತ್ಯವನ್ನು ಪ್ರಶ್ನಿಸಿದೆ ಎಂದು ಮೂಲಗಳು ತಿಳಿಸಿವೆ.