ಮೈಥುನ, ಮಸಾಲೆಗೆ ನೋ ಎಂದ ಶಿವಾನಂದರ ವಯಸ್ಸು ನೂರಿಪ್ಪತ್ತು
ಅವರು ಸನ್ಯಾಸಿ, ಬರೀ ಇಷ್ಟೇ ಆವರ ಪರಿಚಯ ಆಗಿದ್ದರೆ ಅಷ್ಟೇನೂ ಆಸಕ್ತಿ ಇರುತ್ತಿರಲಿಲ್ಲ ಬಿಡಿ. 120 ವರ್ಷ ವಯಸ್ಸಿನ, ಅದನ್ನು ದಾಖಲೆ ಸಹಿತ ರುಜುವಾತು ಪಡಿಸಲು ಹೊರಟಿರುವ ಸ್ವಾಮಿ ಶಿವಾನಂದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಬಹಳ ಇದೆ. ಏನ್ ಸ್ವಾಮಿ, ನಿಮ್ಮ ದೀರ್ಘಾಯುಷ್ಯದ ಗುಟ್ಟು ಎಂದು ಕೇಳಿದರೆ, ನೋ ಟು ಸೆಕ್ಸ್, ಮಸಾಲೆ ಪದಾರ್ಥ ಹಾಗೂ ಪ್ರತಿ ದಿನ ಮಾಡುವ ಯೋಗ ಎನ್ನುತ್ತಾರೆ ಈ ಸನ್ಯಾಸಿ.
ಮೂರು ಶತಮಾನಗಳಿಗೆ ಸಾಕ್ಷಿಯಾಗಿರುವ ಶಿವಾನಂದರ ಜನ್ಮದಿನ ಆಗಸ್ಟ್ 8, 1896. -ಇದನ್ನು ಅವರ ಪಾಸ್ ಪೋರ್ಟ್ ಖಾತ್ರಿ ಪಡಿಸುತ್ತದೆ. ಓ, ದೇಹ ಹಣ್ಣಾಗಿರಬೇಕು. ಅವರು ರಸ್ತೆಗೆ ಬರಬೇಕು ಅಂದರೆ ಜತೆಗೆ ಎಷ್ಟು ಜನ ಇರಬೇಕೋ ಅಂತ ಅನ್ನಿಸಿದರೆ, ನಿಮ್ಮ ಊಹೆ ಸಂಪೂರ್ಣ ತಪ್ಪು. ಶಿವಾನಂದರು ಈಗಲೂ ಸದೃಢರಾಗಿದ್ದಾರೆ, ಒಂದೇ ಸಲಕ್ಕೆ ಗಂಟೆಗಟ್ಟಲೆ ಯೋಗವನ್ನೂ ಮಾಡಬಲ್ಲರು.[ಭಾರತದಲ್ಲಿ ಒಂದೇ ದಿನ ಎರಡು ಗಿನ್ನೆಸ್ ದಾಖಲೆ ಸೃಷ್ಟಿ]
ಅವರೀಗ ಗಿನ್ನೆಸ್ ದಾಖಲೆಗಾಗಿ ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಜಗತ್ತಿನಲ್ಲಿ ಅತಿ ದೀರ್ಘ ಕಾಲ ಬದುಕಿದ್ದವರ ಪಟ್ಟಿಯಲ್ಲಿ ಇರುವವರು ಜಪಾನಿನ ಜಿರೋಮಾನ್ ಕಿಮುರಾ. 2013ರಲ್ಲಿ ತೀರಿಕೊಂಡಾಗ ಅವರಿಗೆ 116 ವರ್ಷ, 54 ದಿನ. ಶಿವಾನಂದರ ವಯಸ್ಸನ್ನು ಭಾರತದ ಪಾಸ್ ಪೋರ್ಟ್ ಅಧಿಕಾರಿಗಳು ದೇವಾಲಯದ ರಿಜಿಸ್ಟರ್ ನಲ್ಲಿರುವ ದಾಖಲೆ ಆಧರಿಸಿ, ಖಾತ್ರಿಪಡಿಸುತ್ತಾರೆ. ಇವರಿಗಿಂತ ಹತ್ತಾರು ವರ್ಷ ಚಿಕ್ಕವರ ಹತ್ತಿರ ಕೂಡ ಇರುವುದು ಇಂಥ ದೇವಾಲಯದ ದಾಖಲೆಯೇ.
ಆದರೆ, ಇದೊಂದರಿಂದಲೇ ಅವರ ವಯಸ್ಸಿನ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಆಗಲ್ಲ. ಶಿವಾನಂದರು ವಾರಾಣಸಿಯವರು. ವಿಪರೀತವಾದ ಬಡತನ ಅವರನ್ನು ಸನ್ಯಾಸಿಯಾಗುವುದಕ್ಕೆ ಪ್ರೇರಣೆ ನೀಡಿತು. ಇಷ್ಟು ಸುದೀರ್ಘ ಕಾಲ ಬದುಕುವುದಕ್ಕೆ ಯೋಗ, ಶಿಸ್ತು ಹಾಗೂ ಬ್ರಹ್ಮಚರ್ಯವೇ ಕಾರಣ ಎನ್ನುವ ಅವರು, 'ನಾನು ತುಂಬ ಸರಳ ಹಾಗೂ ಶಿಸ್ತಿನ ಜೀವನ ನಡೆಸ್ತೀನಿ. ಬೇಯಿಸಿದ ಆಹಾರವಷ್ಟೇ ತಿಂತೀನಿ: ಅದರಲ್ಲಿ ಎಣ್ಣೆ, ಮಸಾಲೆ ಪದಾರ್ಥ ಇರುವುದಿಲ್ಲ. ಅನ್ನ, ದಾಲ್ ಜತೆಗೆ ಒಂದೆರಡು ಮೆಣಸಿನಕಾಯಿ ಇಷ್ಟೇ ನನ್ನ ಊಟ' ಎಂದು ಮುಗುಳ್ನಗುತ್ತಾರೆ.[ವಿಡಿಯೋ: ಗಿನ್ನೆಸ್ ದಾಖಲೆಯಾದ ನಾಸೀರ್ ಹಿಡಿದ ಕ್ಯಾಚ್]
5 ಅಡಿ 2 ಇಂಚು ಎತ್ತರದ ಶಿವಾನಂದರು ನೆಲದ ಮೇಲೆ ಮ್ಯಾಟ್ ಹಾಸಿಕೊಂಡು ಮಲಗುತ್ತಾರೆ. ಮರದ ಮಣೆ ಅವರ ಪಾಲಿಗೆ ದಿಂಬು. 'ಹಣ್ಣು-ಹಾಲು ವೈಭವದ ವಸ್ತುಗಳು ಅನ್ನಿಸಿದ್ದರಿಂದ ಚಿಕ್ಕ ವಯಸ್ಸಿನಲ್ಲೇ ಬಿಟ್ಟುಬಿಟ್ಟೆ' ಎನ್ನುವ ಶಿವಾನಂದರು, ಪ್ರಚಾರದ ಸಹವಾಸವೇ ಬೇಡ ಎಂದು ದೂರವಿದ್ದವರು. ಆದರೆ ಅನುಯಾಯಿಗಳ ಒತ್ತಾಯಕ್ಕೆ ಮಣಿದು ಗಿನ್ನೆಸ್ ದಾಖಲೆಗಾಗಿ ಪ್ರಯತ್ನಿಸುತ್ತಿದ್ದಾರೆ.
ಶಿವಾನಂದರಿಗೆ 6 ವರ್ಷವಿದ್ದಾಗ ಅವರ ತಂದೆ-ತಾಯಿ ತೀರಿಕೊಳ್ಳುತ್ತಾರೆ. ಆಗ ಅವರ ಸಂಬಂಧಿಕರು, ಅಧ್ಯಾತ್ಮ ಗುರುಗಳೊಬ್ಬರಿಗೆ ಇವರನ್ನು ಒಪ್ಪಿಸಿಬಿಡುತ್ತಾರೆ. ಅವರೊಂದಿಗೆ ಇಡೀ ಭಾರತ ಸುತ್ತಾಡುವ ಶಿವಾನಂದರು ಅಂತಿಮವಾಗಿ ನೆಲೆಯಾಗುವುದು ವಾರಾಣಸಿಯಲ್ಲಿ. ಯಾವುದೇ ಅರೋಗ್ಯ ಸಮಸ್ಯೆ ಇಲ್ಲದ, ಸ್ವತಂತ್ರವಾಗಿ ಬದುಕುತ್ತಿರುವ ಅವರು, ಇಂದಿಗೂ ತಾವೊಬ್ಬರೇ ರೈಲಿನಲ್ಲಿ ಪ್ರಯಾಣಿಸುತ್ತಾರೆ.[ಗಿನ್ನೆಸ್ ದಾಖಲೆ ಸೇರಲಿದೆ ಭವಿಷ್ಯತ್ತಿಗಾಗಿ ಯೋಗ ಪ್ರದರ್ಶನ!]
ದೇಶದಲ್ಲಿ ವಿದ್ಯುತ್, ಕಾರು, ಟೆಲಿಫೋನ್ ಇಲ್ಲದ ದಿನಮಾನಕ್ಕೆ ಸೇರಿದವರಾದ ಶಿವಾನಂದರಿಗೆ ಇವುಗಳ ಬಗ್ಗೆ ಪ್ರೀತಿಯೇನಿಲ್ಲ. ಇವೆಲ್ಲದರ ಹೊರತಾಗಿಯೂ ತಮ್ಮಷ್ಟಕ್ಕೆ ತಾವು ಬದುಕುವುದಕ್ಕೆ ಅವರ ಅದ್ಯತೆ.
'ಈ ಹಿಂದೆ ಕೆಲವೇ ವಸ್ತುಗಳ ಜತೆಗೆ ಜನರು ಸಂತೋಷವಾಗಿದ್ದರು. ಇತ್ತೀಚೆಗೆ ಜನರು ಅಸಂತೋಷಿಗಳು, ಅನಾರೋಗ್ಯ ಪೀಡಿತರು ಹಾಗೂ ಅಪ್ರಾಮಾಣಿಕರಾಗಿದ್ದಾರೆ. ಇದೆಲ್ಲ ನೋಡಿದಾಗ ಮನಸ್ಸಿಗೆ ಬೇಸರವಾಗುತ್ತದೆ. ನಾನು ನೋಡ ಬಯಸುವುದು ಸಂತುಷ್ಟ, ಆರೋಗ್ಯವಂತ ಹಾಗೂ ನೆಮ್ಮದಿಯಾಗಿರುವ ಜನರನ್ನ' ಎನ್ನುತ್ತಾರೆ ಸ್ವಾಮಿ ಶಿವಾನಂದ.