ಬಿಎಸ್ಎಫ್ ಆಯ್ತು, ಈಗ ಅರೆಸೇನಾ ಪಡೆಯ ಹುಳುಕು ಜಗಜ್ಜಾಹೀರು
ನವದೆಹಲಿ, ಜನವರಿ 12: ಗಡಿ ಕಾಯುವ ಯೋಧರಿಗೆ ಕಳಪೆ ಆಹಾರ ಪೂರೈಕೆಯಾಗುತ್ತಿರುವ ಬಗ್ಗೆ ಎರಡು ದಿನಗಳ ಹಿಂದಷ್ಟೇ ಬಿಎಸ್ಎಫ್ ಯೋಧನೊಬ್ಬ ವೀಡಿಯೊ ಬಿತ್ತರಿಸಿದ್ದರ ಬೆನ್ನಿಗೇ ಸಿಆರ್ ಪಿಎಫ್ ಸೈನಿಕನೊಬ್ಬ ಅರೆಸೇನಾ ಯೋಧರನ್ನು ನಿಕೃಷ್ಟವಾಗಿ ದುಡಿಸಿಕೊಳ್ಳುತ್ತಾ, ತಮ್ಮ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಬಗ್ಗೆ ವೀಡಿಯೊ ಮೂಲಕ ಬಹಿರಂಗಪಡಿಸಿದ್ದಾನೆ.[ಬಿಎಸ್ಎಫ್ ಯೋಧನ ಬೆನ್ನಿಗೆ ನಿಂತ ಕ್ರೀಡಾ ತಾರೆಗಳು]
ಪ್ರಸ್ತುತ ಮೌಂಟ್ ಅಬುವಿನಲ್ಲಿ ನಿಯೋಜಿತವಾಗಿರುವ 26 ವರ್ಷದ ಮಥುರಾ ಮೂಲದ ಜೀತ್ ಸಿಂಗ್ ಎಂಬಾತ ತಾನೇ ಖುದ್ದಾಗಿ ಮಾತನಾಡಿರುವ ವೀಡಿಯೊದಲ್ಲಿ ಮಿಲಿಟರಿ ಯೋಧರಿಗೆ ಹೋಲಿಸಿದರೆ ಸಿಆರ್ ಪಿಎಫ್ ಯೋಧರಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಕಳಪೆಯಾಗಿವೆ ಎಂದಿದ್ದಾನೆ.[ಸುದ್ದಿ ಸ್ಫೋಟ: ದಿನಸಿಯನ್ನು ಕಳ್ಳತನದಿಂದ ಮಾರಿಕೊಳ್ಳುವ ಬಿಎಸ್ಎಫ್]
"ನಾವು ಭೂಕಂಪ, ಪ್ರವಾಹ ಮತ್ತಿತರ ಪ್ರಾಕೃತಿಕ ವಿಕೋಪಗಳ ವೇಳೆ ನೆರವಿಗೆ ಬರುತ್ತೇವೆ. ಅಲ್ಲದೆ, ವಿಐಪಿಗಳ ರಕ್ಷಣೆಗೆ ನಿಲ್ಲುತ್ತೇವೆ. ದೇವಾಲಯ, ಚರ್ಚು, ಮಸೀದಿಗಳಿಗೆ ರಕ್ಷಣೆ ಒದಗಿಸುತ್ತೇವೆ. ಆದರೆ, ಯಾರೂ ನಮ್ಮ ಸೇವೆಗೆ ತಕ್ಕದಾದ ಸೌಲಭ್ಯಗಳನ್ನು ನೀಡುತ್ತಿಲ್ಲ" ಎಂದಿರುವ ಆತ, "ಸರ್ಕಾರಿ ಶಾಲೆಯ ಶಿಕ್ಷಕರು ತಿಂಗಳಿಗೆ, 50ರಿಂದ 60 ಸಾವಿರ ರು.ಗಳಷ್ಟು ಸಂಬಳ ಪಡೆಯುತ್ತಾರೆ. ಅದಲ್ಲದೆ, ಅವರಿಗೆ ಹಬ್ಬಗಳಿಗೆ ರಜೆ ಮತ್ತಿತರ ಸೌಲಭ್ಯಗಳಿರುತ್ತವೆ. ಆದರೆ, ಅರೆಸೇನಾ ಪಡೆಯ ಯೋಧರಿಗೆ ಅಂಥಾ ಯಾವುದೇ ಸೌಲಭ್ಯಗಳಿರುವುದಿಲ್ಲ. 20 ವರ್ಷ ಸೇವೆ ಸಲ್ಲಿಸಿದರೂ ನಮಗೆ ನಿವೃತ್ತಿ ವೇತನವಿಲ್ಲ. ಇನ್ನು, ಸರ್ಕಾರಿ ನೌಕರಿ ಮತ್ತಿತರ ಕಡೆಗಳಲ್ಲೂ ನಮಗೆ ಕೋಟಾ ಇರುವುದಿಲ್ಲ. ಆದರೆ, ಭಾರತೀಯ ಸೇನೆಯ ಯೋಧರಿಗೆ ಈ ಎಲ್ಲಾ ಸೌಲಭ್ಯಗಳಿವೆ. ಅರೆಸೇನಾ ಯೋಧರು ಇವುಗಳಿಂದ ವಂಚಿತರಾಗಿದ್ದಾರೆ" ಎಂದು ಅಳಲು ತೋಡಿಕೊಂಡಿದ್ದಾನೆ.[ಸತ್ಯ ಹೇಳಿದ ಸೈನಿಕನ ತೇಜೋವಧೆಗೆ ಸಿದ್ಧವಾದ ಬಿಎಸ್ಎಫ್]
ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗಮನ ಹರಿಸಿ, ಈ ತಾರತಮ್ಯ ನೀಗಬೇಕು ಎಂದು ಆತ ಕೋರಿದ್ದಾನೆ.