ಹಠಾತ್ ನೋಟ್ ಬ್ಯಾನ್ ನಿಂದ ಸಂಕಷ್ಟ ಆಯ್ತು ಎಂದ ಊರ್ಜಿತ್
ನವದೆಹಲಿ, ಜನವರಿ 20: ಕಳೆದ ವರ್ಷದ ನವೆಂಬರ್ ನಲ್ಲಿ ಹಠಾತ್ತಾಗಿ 500 ರು., 1000 ರು. ನೋಟುಗಳನ್ನು ನಿಷೇಧಿಸಿದ್ದರಿಂದಾಗಿ ಜನಸಾಮಾನ್ಯರಿಗೆ ಭಾರೀ ತೊಂದರೆಯಾಯಿತು ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಒಪ್ಪಿಕೊಂಡಿದ್ದಾರೆ.
ಅಪನಗದೀಕರಣದಿಂದ ಆದ ತೊಂದರೆಗಳ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಹಿರಿಯ ಸಂಸದರುಳ್ಳ ಸಾರ್ವಜನಿಕ ಲೆಕ್ಕಾಚಾರ ಸಮಿತಿಯ (ಪಿಎಸಿ) ಮುಂದೆ ಹಾಜರಾದ ಊರ್ಜಿತ್ ಪಟೇಲ್, ಸರ್ಕಾರದ ನಿರ್ಧಾರ ಜನಜೀವನದ ಮೇಲೆ ಗಾಢವಾದ, ನಕಾರಾತ್ಮಕ ಪರಿಣಾಮ ಬೀರಿತು ಎಂದು ಒಪ್ಪಿಕೊಂಡರು.[ಅಪನಗದೀಕರಣ 2016ರ ಜನವರಿಯಿಂದಲೇ ಆರಂಭ: ಊರ್ಜಿತ್]
ಅಪನಗದೀಕರಣ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದ (2016ರ ನವೆಂಬರ್ 8) ದಿನಾಂಕಕ್ಕೆ ಒಂದು ದಿನ ಮುಂಚೆ ಆರ್ ಬಿಐಗೆ ಆ ಬಗ್ಗೆ ಮಾಹಿತಿ ನೀಡಲಾಗಿತ್ತು. 2016ರ ನವೆಂಬರ್ 7ರ ಸಂಜೆ ಸುಮಾರು 5:30ರ ವೇಳೆಗೆ ಆರ್ ಬಿಐ, ಆ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿ ಕೇಂದ್ರಕ್ಕೆ ರವಾನಿಸಿತು ಎಂದು ಊರ್ಜಿತ್ ಪಟೇಲ್ ವಿವರಿಸಿದರು.
ಆದರೆ, ಇದೇ ವೇಳೆ, ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ಮುಂಬರುವ ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ಅಪನಗದೀಕರಣ ನಿರ್ಧಾರ ಸತ್ಪರಿಣಾಮ ಬೀರುವುದಲ್ಲದೆ, ಸದೃಢ ಭಾರತವನ್ನು ಕಟ್ಟಲು ಸಹಾಯ ಮಾಡುತ್ತದೆ ಎಂದು ಹೇಳಿದರು.