ಅಂತೂ ಇಂತೂ ಕೇಜ್ರಿವಾಲ್ ರಿಂದ ಪ್ರತಿಕ್ರಿಯೆ ಬಂದೇಬಿಡ್ತು
ಬೆಂಗಳೂರು, ನವೆಂಬರ್ 09 : ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ನನ್ನ ಜನ್ಮಸಿದ್ಧ ಹಕ್ಕು ಎಂದು ಎದೆತಟ್ಟಿ ಹೇಳಿಕೊಳ್ಳುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಭ್ರಷ್ಟಾಚಾರ ನಿವಾರಣೆಗೆ ನರೇಂದ್ರ ಮೋದಿ ಅವರು ಕೈಗೊಂಡಿರುವ ಐತಿಹಾಸಿಕ ಕ್ರಮದ ಕುರಿತಾಗಿ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲವಲ್ಲ ಎಂದು ಅಂದುಕೊಳ್ಳುತ್ತಿರುವಾಗಲೇ....
ಈ ಕಠಿಣಾತಿಕಠಿಣ ನಿರ್ಧಾರವನ್ನು ಹಿಂತೆಗೆದುಕೊಳ್ಳಿ ಎಂದು ಪಶ್ಚಿಮ ಬಂಗಾಳದಿಂದ ಮಮತಾ ಬ್ಯಾನರ್ಜಿಯವರ ಟ್ವೀಟ್ ಕೂಗನ್ನು ದೆಹಲಿಯಲ್ಲಿ ಕುಳಿತೇ ಅರವಿಂದ್ ಕೇಜ್ರಿವಾಲ್ ಅವರು ರೀಟ್ವೀಸಿ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಅಲ್ಲಿಗೆ ನೇರವಾಗಿಯಲ್ಲದಿದ್ದರೂ, ಪರೋಕ್ಷವಾಗಿಯಾದರೂ ಮೋದಿ ವಿರುದ್ಧ ತಮ್ಮ ಕೂಗಿಗೆ ಇಂಬು ನೀಡಿದ್ದಾರೆ.
ಮೋದಿ ಸರಕಾರ ಪಾಕಿಸ್ತಾನಿ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಮೊದಲು ಮೋದಿಯ ಕ್ರಮವನ್ನು ಹೊಗಳಿ, ನಂತರ ಪ್ರೂಫ್ ಕೊಡಿ ಎಂದು ಉಲ್ಟಾ ಹೊಡೆದಿದ್ದ ಅರವಿಂದ್ ಕೇಜ್ರಿವಾಲ್, ಭ್ರಷ್ಟಾಚಾರದ ವಿರುದ್ಧದ ಮೋದಿಯವರ ಹೋರಾಟಕ್ಕೆ ತಾತ್ವಿಕವಾಗಿಯಾದರೂ ಬೆಂಬಲ ಕೊಡಬೇಕಿತ್ತು.
ಆದರೆ, ಅವರು ಅದನ್ನು ಮಾಡದೆ, ಮೋದಿಯವರ ಎಲ್ಲ ಕ್ರಮಗಳನ್ನು ವಿರೋಧಿಸಬೇಕು ಎಂಬ ತಮ್ಮ ಪಾಲಿಸಿಗೆ ಜೋತುಬಿದ್ದಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಿಂದ ನರೇಂದ್ರ ಮೋದಿಗೆ ನೇರವಾಗಿ ಶ್ರೇಯಸ್ಸು ಸಿಗಬಾರದೆಂಬ ರಾಜಕೀಯ ನೀತಿಯೂ ಇದ್ದೀತು.
ಇವರದೊಂದು ರೀತಿಯಾದರೆ, ಅವಕಾಶ ಸಿಕ್ಕಾಗಲೆಲ್ಲ ಮೋದಿ ಸರಕಾರವನ್ನು ಸೂಟ್ ಬೂಟ್ ಕಿ ಸರಕಾರ ಎಂದು ಟೀಕಿಸುವ, ಕಾಂಗ್ರೆಸ್ ಅಧ್ಯಕ್ಷಪಟ್ಟವನ್ನು ಕೂದಲೆಳೆಯ ಅಂತರದಿಂದ ಕಳೆದುಕೊಂಡಿರುವ ರಾಹುಲ್ ಗಾಂಧಿ ಅವರು, ಸಕಾರಾತ್ಮಕವಾಗಲಿ ನಕಾರಾತ್ಮಕವಾಗಲಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.