ಮಿಷನ್ ತೆಲಂಗಾಣ ಅಲ್ಲ, ರಾಜ್ಯಕ್ಕೆ ಬೇಕಿರುವುದು ಬಿಜೆಪಿ ಸುನಾಮಿ: ಅಮಿತ್ ಶಾ
ಮಿಷನ್ ತೆಲಂಗಾಣ ಅಷ್ಟೇ ಅಲ್ಲ, ತೆಲಂಗಾಣದಲ್ಲಿ ಬಿಜೆಪಿ ಸುನಾಮಿಯನ್ನು ಎಬ್ಬಿಸಿ ಮತದಾರರನ್ನು ತಲುಪುವಂತೆ ಮಾಡಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ತೆಲಂಗಾಣ, ಮೇ 23: ಮಿಷನ್ ತೆಲಂಗಾಣ ಅಷ್ಟೇ ಅಲ್ಲ, ತೆಲಂಗಾಣದಲ್ಲಿ ಬಿಜೆಪಿ ಸುನಾಮಿಯನ್ನು ಎಬ್ಬಿಸಿ ಮತದಾರರನ್ನು ತಲುಪುವಂತೆ ಮಾಡಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಮೂರು ವರ್ಷದ ಹಿಂದಷ್ಟೇ ಸ್ಥಾಪನೆಯಾದ ತೆಲಂಗಾಣದಲ್ಲಿ ಈಗಾಗಲೇ ಸರ್ಕಾರ ನಡೆಸುತ್ತಿರುವ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿಯನ್ನು ಹಿಂದಿಕ್ಕಿ, ಬಿಜೆಪಿ ಸ್ವಂತ ಬಲದ ಮೇಲೆ ಇಲ್ಲಿ ಅಧಿಕಾರ ಸ್ಥಾಪಿಸುವ ಇಂಗಿತ ಹೊಂದಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇಲ್ಲಿನ ನಾಲ್ಗೊಂಡ ಜಿಲ್ಲೆಯಲ್ಲಿ, ನಿನ್ನೆ (ಮೇ 22) ಬೂತ್ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದ ಅಮಿತ್ ಶಾ, ನಕ್ಸಲರಿಂದ ಹತರಾದ ಬಿಜೆಪಿ ರಾಜ್ಯ ಕಾರ್ಯದರ್ಶಿ ಗುಂಡಗೋಣಿ ಮೈಸಯ್ಯ ಗೌಡ್ ಪ್ರತಿಮೆಯೆದುರು ಬಿಜೆಪಿ ಧ್ವಜ ಹಾರಿಸಿ ಮಾತನಾಡಿದರು.
ಹನ್ನೊಂದು ಕೋಟಿಗೂ ಹೆಚ್ಚು ಸದಸ್ಯತ್ವವನ್ನು ಹೊಂದಿರುವ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ದಾಖಲೆ ಬರೆದಿದೆ. ಈಗಾಗಲೇ ಹನ್ನೊಂದು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಜನಪ್ರಿಯತೆಯನ್ನು ಉಪಯೋಗಿಸಿಕೊಂಡು ತೆಲಂಗಾಣದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವಂತೆ ಕಾರ್ಯಕರ್ತರು ಸುನಾಮಿಯೋಪಾದಿಯಲ್ಲಿ ಶ್ರಮಿಸಬೇಕಿದೆ ಎಂದು ಅಮಿತ್ ಶಾ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಿದರು.
2019 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಚುನಾವಣೆಯನ್ನು ಎದುರಿಸಲಿದೆ ಎಂದು ತೆಲಂಗಾಣ ಬಿಜೆಪಿಯ ರಾಜ್ಯಾಧ್ಯಕ್ಷ ಡಾ. ಕೆ.ಲಕ್ಷ್ಮಣ್ ಪುನರುಚ್ಚರಿಸಿದ್ದಾರೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಬಳಸಿಕೊಂಡ ಸೂತ್ರಗಳನ್ನೇ ತೆಲಂಗಾಣದಲ್ಲೂ ಬಳಸಿಕೊಳ್ಳಲಾಗುವುದು, ಉತ್ತರ ಪ್ರದೇಶ ಚುನಾವಣಾ ಫಲಿತಾಂಶವೇ ತೆಲಂಗಾಣದಲ್ಲೂ ಮರುಕಳಿಸುವಂತೆ ಮಾಡುವುದು ನಮ್ಮ ಆದ್ಯ ಉದ್ದೇಶ ಎಂದು ಅವರು ತಿಳಿಸಿದ್ದಾರೆ.
ಇದಕ್ಕಾಗಿ ಬಿಜೆಪಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸಹಕಾರವನ್ನೂ ಕೋರಿದೆ ಎನ್ನಲಾಗಿದೆ.