'ಸಿಂಗಂ' ಸೂರ್ಯ, 'ಕಟ್ಟಪ್ಪ' ಸತ್ಯರಾಜ್ ವಿರುದ್ಧ ಜಾಮೀನು ರಹಿತ ವಾರಂಟ್
ಮಾನನಷ್ಟ ಮೊಕದ್ದಮೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆಗೆ ಹಾಜರಾಗದ ನಟ ಸೂರ್ಯ, ಸತ್ಯರಾಜ್, ಶರತ್ ಕುಮಾರ್ ನಟಿ ಶ್ರೀಪ್ರಿಯ ಮುಂತಾದವರ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ.
ಊಟಿ, ಮೇ 23: ಮಾನನಷ್ಟ ಮೊಕದ್ದಮೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆಗೆ ಹಾಜರಾಗದ ನಟ ಸೂರ್ಯ, ಸತ್ಯರಾಜ್, ಶರತ್ ಕುಮಾರ್ ನಟಿ ಶ್ರೀಪ್ರಿಯ ಮುಂತಾದವರ ಮೇಲೆ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಲಾಗಿದೆ.
2009ರಲ್ಲಿ ಊಟಿ(ಉದಕಮಂಡಲ)ಯ ಪತ್ರಕರ್ತರೊಬ್ಬರು ಹಾಕಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಊಟಿಯ ನೀಲಗಿರೀಸ್ ಕೋರ್ಟ್ ವಾರೆಂಟ್ ಜಾರಿಗೊಳಿಸಿದೆ.
ತಮಿಳು ದೈನಿಕ ದಿನಮಲರ್ ನಲ್ಲಿ ನಟಿಯರ ವ್ಯಕ್ತಿತ್ವಕ್ಕೆ ಕಳಂಕ ತರುವ ರೀತಿಯಲ್ಲಿ ಪ್ರಕಟವಾಗಿದ್ದನ್ನು ಖಂಡಿಸಿ, ದಕ್ಷಿಣ ಭಾರತ ಸಿನಿತಾರೆಯರ ಸಂಘ(ನಡಿಗರ್ ಸಂಘಂ) 2009ರ ಅಗಸ್ಟ್7ರಂದು ಚೆನ್ನೈನಲ್ಲಿ ಸಭೆ ನಡೆಸಿದ್ದರು.
ಈ ಸಭೆಯಲ್ಲಿ ಲೇಖನ ಪ್ರಕಟಿಸಿದ ಪತ್ರಿಕೆಯನ್ನು ಗುರಿಯನ್ನಾಗಿಸದೆ, ಸಾರಾಸಗಟಾಗಿ ಎಲ್ಲ ಪತ್ರಕರ್ತರ ವಿರುದ್ಧ ನಟ, ನಟಿಯರು ವಾಗ್ದಾಳಿ ನಡೆಸಿದ್ದರು. ಇದನ್ನು ಖಂಡಿಸಿ ಪತ್ರಕರ್ತರೊಬ್ಬರು ನಿಲಗೀರಿಸ್ ನ್ಯಾಯಾಲಯಕ್ಕೆ ಮೊಕದ್ದಮೆ ಹೂಡಿದ್ದರು.
2011ರ ಡಿಸೆಂಬರ್ 19ರಂದು ಸೂರ್ಯ, ಸತ್ಯರಾಜ್, ಶರತ್ ಕುಮಾರ್, ಶ್ರೀಪ್ರಿಯಾ, ವಿಜಯಕುಮಾರ್, ಅರುಣ್ ವಿಜಯ್, ವಿವೇಕ್ ಮತ್ತು ಚೇರನ್ ಅವರಿಗೆ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು.
ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಇವರೆಲ್ಲರು ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ವಜಾಗೊಂಡಿತ್ತು.ಆದರೆ, ನಿಲಗಿರೀಸ್ ಕೋರ್ಟಿಗೆ ಖುದ್ದು ಹಾಜರಾಗದ ತಮಿಳು ಚಿತ್ರತಾರೆಯರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ.(ಎಎನ್ಐ)