ಗೋ ರಕ್ಷಣೆ ಹೆಸರಲ್ಲಿ ಹಿಂಸಿಸುವವರಿಗೆ ರಕ್ಷಣೆ ಬೇಡ: ಸುಪ್ರೀಂ
ಗೋ ಸಂರಕ್ಷಣೆ ಹೆಸರಿನಲ್ಲಿ ಹಿಂಸೆ ಮಾಡುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಜರುಗಿಸಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶ.
ನವದೆಹಲಿ, ಜುಲೈ 21: ಗೋ ರಕ್ಷಣೆಯ ಹೆಸರಿನಲ್ಲಿ ಹಿಂಸೆ ನೀಡುವವರಿಗೆ ಯಾವುದೇ ರಕ್ಷಣೆ ನೀಡಬಾರದೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾದ ಸೂಚನೆ ನೀಡಿದೆ.
ಗೋ ರಕ್ಷಣೆ: ಕೇಂದ್ರ, ಕರ್ನಾಟಕ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರುಳ್ಳ ನ್ಯಾಯಪೀಠ, ಆಯಾ ರಾಜ್ಯಗಳಲ್ಲಿ ಗೋ ಸಾಗಾಣಿಕೆದಾರರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳ ವಿರುದ್ಧ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಹಲ್ಲೆಕೋರರಿಗೆ ರಕ್ಷಣೆ ನೀಡಬಾರದು'' ಎಂದು ಆಗ್ರಹಿಸಿತು.
ಇತ್ತೀಚೆಗೆ, ಗೋವು ಸಾಕಾಣಿಗೆದಾರರ ಮೇಲೆ ಗೋ ಮಾಂಸ ಮಾರಾಟಗಾರರ ಮೇಲೆ ನಡೆಯುತ್ತಿರುವ ಹಲ್ಲೆಗಳ ಕುರಿತಂತೆ ಬಂದ ದೂರುಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿವರಣೆ ಕೇಳಿತ್ತು.
ಇದಕ್ಕೆ ಉತ್ತರಿಸಿದ್ದ ಕೇಂದ್ರ ಸರ್ಕಾರ, ಆಯಾ ರಾಜ್ಯಗಳ ಕಾನೂನು ಮತ್ತು ಸುವ್ಯವಸ್ಥೆ ಆಯಾ ರಾಜ್ಯಗಳ ಹೊಣೆಗಾರಿಕೆ ಎಂದು ಹೇಳಿತ್ತು. ಸೋಮವಾರದ ವಿಚಾರಣೆಯ ವೇಳೆ ಈ ವಿಚಾರವನ್ನೆತ್ತಿಕೊಂಡ ನ್ಯಾ. ದೀಪಕ್ ಮಿಶ್ರಾ, ಕಾನೂನು ಸುವ್ಯವಸ್ಥೆಯು ಆಯಾ ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಎಂದೇನೋ ನೀವು (ಕೇಂದ್ರ ಸರ್ಕಾರ) ಹೇಳುತ್ತಿದ್ದೀರಿ. ಆದರೆ, ನೀವು ಗೋ ರಕ್ಷಣೆ ಹೆಸರಿನಲ್ಲಿ ಹಿಂಸಿಸುವವರನ್ನು ಶಿಕ್ಷಿಸುವಿರಾ'' ಎಂದು ಪ್ರಶ್ನಿಸಿದರು.
ತದನಂತರ, ಗೋ ಸಂರಕ್ಷಣೆ ಹೆಸರಿನಲ್ಲಿ ಹಲ್ಲೆ, ಲೂಟಿ, ಹಿಂಸೆ ನೀಡುವವರಿಗೆ ಯಾವುದೇ ರೀತಿಯ ರಕ್ಷಣೆ ನೀಡಕೂಡದೆಂದು ನ್ಯಾಯಾಲಯ ಕಟ್ಟುನಿಟ್ಟಾದ ಆದೇಶ ಹೊರಡಿಸಿತು.
ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಗೋ ಸಂರಕ್ಷಣೆ ಜಾಗೃತಿ ಉದ್ದೇಶಿದಿಂದ ರವಾನಿಸಲ್ಪಡುವ ಸಂದೇಶಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿಯಮಾವಳಿಗಳನ್ನು ರೂಪಿಸಬೇಕೆಂದು ಸರ್ವೋಚ್ಛ ನ್ಯಾಯಾಲಯ ಹೇಳಿತು.