ಬೊಜ್ಜು ಇಳಿಸದಿದ್ದರೆ ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ಇಲ್ಲ!
ನವದೆಹಲಿ, ಜುಲೈ 5: ಬೊಜ್ಜು ಬೆಳೆಸಿಕೊಂಡು, ತೂಕ ಹೆಚ್ಚಾಗಿ ಸರಿದಾಡಲು ಸಹ ಕಷ್ಟ ಪಡುತ್ತಿರುವ ಐಪಿಎಸ್ ಅಧಿಕಾರಿಗಳು ತೂಕ ಇಳಿಸಿ, ಬೊಜ್ಜು ಕರಗಿಸಿದರೆ ಮಾತ್ರ ಬಡ್ತಿ ಸಿಗಲಿದೆ.
ಅಧಿಕಾರಿಗಳ ದೈಹಿಕ ಕ್ಷಮತೆ ಆಧರಿಸಿ ಬಡ್ತಿ ಕೊಡುವ ಪ್ರಸ್ತಾವವೊಂದು ಕೇಂದ್ರ ಸರಕಾರದ ಮುಂದಿದೆ. ಮುಂದಿನ ಹಂತಕ್ಕೆ ಬಡ್ತಿ ನೀಡುವ ಮೊದಲು ಐಪಿಎಸ್ ಅಧಿಕಾರಿಗಳ ದೈಹಿಕ ಕ್ಷಮತೆಯನ್ನು ಪರಿಗಣಿಸುವುದು ಕಡ್ಡಾಯ ಆಗಬೇಕು ಗೃಹ ಸಚಿವಾಲಯವು ಶಿಫಾರಸು ಮಾಡಿದ ನಂತರ ಈ ಕ್ರಮಕ್ಕೆ ಕೇಂದ್ರ ಮುಂದಾಗಿದೆ.
ದಕ್ಷ ಪೊಲೀಸ್ ಅಧಿಕಾರಿಗಳಿಗೆ ಮಂಗಳೂರಲ್ಲಿ ಉಳಿಗಾಲವಿಲ್ಲವೇ?
ಅಧಿಕಾರಿಗಳ ತರಬೇತಿ ಇಲಾಖೆಯು ಈ ಬಗ್ಗೆ ಅಂತಿಮ ಕರಡು ಸಿದ್ಧಪಡಿಸಿದೆ. ಈ ಶಿಫಾರಸುಗಳನ್ನು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿ, ಪ್ರತಿಕ್ರಿಯೆ ನೀಡುವಂತೆ ತಿಳಿಸಲಾಗಿದೆ.
ಗೃಹ ಸಚಿವಾಲಯದಿಂದ ಆಗಿಂದ ಆಗ ನಿಗದಿ ಪಡಿಸುವ ದೈಹಿಕ ಕ್ಷಮತೆ ಸಾಬೀತು ಪಡಿಸಿದ ನಂತರವೇ ಐಪಿಎಸ್ ಅಧಿಕಾರಿಗಳಿಗೆ ವಿವಿಧ ಹಂತಗಳಿಗೆ ಬಡ್ತಿ ನೀಡಲಾಗುವುದು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ.
ಸದ್ಯಕ್ಕೆ ಇರುವ ನಿಯಮಗಳಲ್ಲಿ ಐಪಿಎಸ್ ಅಧಿಕಾರಿಗಳ ಬಡ್ತಿಗೆ ದೈಹಿಕ ಕ್ಷಮತೆ ಕಾಯ್ದುಕೊಳ್ಳುವ ಅಗತ್ಯ ಇಲ್ಲ. ಇಂತಿಷ್ಟು ವರ್ಷ ಅಂತ ಸೇವೆ ಮಾಡಿದ ನಂತರ ಆಯಾ ಹುದ್ದೆಗಳು ದೊರೆಯುತ್ತವೆ.