ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜಿನಾಮೆ. ಸಮ್ಮಿಶ್ರ ಸರ್ಕಾರದಲ್ಲಿ ಒಡಕು ಹಿನ್ನೆಲೆಯಲ್ಲಿ ರಾಜೀನಾಮೆ.
ಪಾಟ್ನಾ, ಜುಲೈ 26: ತಮ್ಮ ಸರ್ಕಾರದ ಅಂಗಪಕ್ಷವಾದ ರಾಷ್ಟ್ರೀಯ ಜನತಾ ದಳದ (ಆರ್ ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಂದ ಮಾನಸಿಕವಾಗಿ ದೂರ ಸರಿದಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ಬುಧವಾರ ಸಂಜೆ, ತಾವು ಅಧ್ಯಕ್ಷರಾಗಿರುವ ಜೆಡಿಯು ಶಾಸಕಾಂಗ ಪಕ್ಷದ ಸಭೆ ಕರೆದ ನಿತೀಶ್ ಕುಮಾರ್, ಭ್ರಷ್ಟಾಚಾರ ಎದುರಿಸುತ್ತಿರುವ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ (ಬಿಹಾರದ ಹಾಲಿ ಉಪ ಮುಖ್ಯಮಂತ್ರಿ) ಅವರನ್ನು ಸಂಪುಟದಿಂದ ಕೈಬಿಡಲು ನಿರ್ಧರಿಸಿದ್ದು, ಅದು ಸಾಧ್ಯವಾಗದಿದ್ದ ತಾವೊಂದು ಮಹತ್ವದ ನಿರ್ಧಾರ ಕೈಗೊಳ್ಳುವುದಾಗಿ ನಿತೀಶ್ ಘೋಷಿಸಿದ್ದರು.
ಶಾಸಕಾಂಗ ಪಕ್ಷದ ತರುವಾಯ, ನೇರವಾಗಿ ರಾಜಭವನಕ್ಕೆ ತೆರಳಿದ ಅವರು ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ ಅವರಿಗೆ ತಮ್ಮ ರಾಜಿನಾಮೆ ಸಲ್ಲಿಸಿದರು.
ತೇಜಸ್ವಿ ಯಾದವ್ ಅವರು, ತಮ್ಮ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕು. ಈ ಬಗ್ಗೆ ಆರ್ ಜೆಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಈ ಹಿಂದೆ ನಿತೀಶ್, ಲಾಲೂ ಅವರಿಗೆ 72 ಗಂಟೆಗಳ ಗಡುವು ನೀಡಿದ್ದರು. ಆದರೆ, ಆ ಗಡುವಿಗೆ ಲಾಲು ಯಾವುದೇ ಸೊಪ್ಪು ಹಾಕಲಿಲ್ಲ. ಇದು ನಿತೀಶ್, ಲಾಲೂ ನಡುವಿನ ವಿರಸ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು.
ಜುಲೈ 26ರಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಲಾಲೂ, ತಮ್ಮ ಪುತ್ರ ರಾಜಿನಾಮೆ ಸಲ್ಲಿಸಬೇಕೆಂದು ಯಾರೂ ಹೇಳಿಲ್ಲ ಎನ್ನುವ ಮೂಲಕ, ತಮ್ಮ ಪುತ್ರನ ರಾಜಿನಾಮೆ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಇದರ ಬೆನ್ನಲ್ಲೇ ನಿತೀಶ್ ಕುಮಾರ್ ತಮ್ಮ ರಾಜಿನಾಮೆ ಸಲ್ಲಿಸಿದರು.