ತೇಜಸ್ವಿ ಯಾದವ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ : ಲಾಲು
ಪಾಟ್ನಾ, ಜುಲೈ 26: ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ತಮ್ಮ ಪುತ್ರ ತೇಜಸ್ವಿ ಯಾದವ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಆರ್.ಜೆ.ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಖಡಕ್ ಆಗಿ ಹೇಳಿದ್ದಾರೆ.
ಪಾಟ್ನಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಲಾಲು ಪ್ರಸಾದ್ ಯಾದವ್, "ನಿತೀಶ್ ಕುಮಾರ್ ಮಹಾ ಮೈತ್ರಿಯ ನಾಯಕ. ಅವರನ್ನು ಅಗೌರವಿಸುವುದನ್ನು ನಾವು ಸಹಿಸುವುದಿಲ್ಲ," ಎಂದು ಗುಡುಗಿದ್ದಾರೆ.
"ಮಹಾಮೈತ್ರಿ ಮಾಡಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾವು. ಈಗ ನಾವೇ ಯಾಕೆ ಮೈತ್ರಿ ಮುರಿದುಕೊಳ್ಳಬೇಕು?," ಎಂದು ಲಾಲು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ, ನಿತೀಶ್ ಕುಮಾರ್ ತೇಜಸ್ವಿ ಯಾದವ್ ರಾಜೀನಾಮೆ ಕೇಳಿಲ್ಲ ಎಂದೂ ಲಾಲು ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಯಾದವ್, "ಸುಶೀಲ್ ಕುಮಾರ್ ಮೋದಿ (ಬಿಜೆಪಿ ನಾಯಕ) ಬಿಹಾರಿಯೂ ಅಲ್ಲ. ಅವರು ಹೊರಗಿನವರು. ಅವರಿಗೆ ರಾಜ್ಯದ ಜನರ ಅಭಿವೃದ್ಧಿ ಬೇಕಾಗಿಲ್ಲ," ಎಂದು ಹೇಳಿದ್ದಾರೆ.
"ನನಗೆ ರಾಜೀನಾಮೆ ನೀಡುವಂತೆ ಯಾವತ್ತೂ ಹೇಳಿಲ್ಲ. ಆರ್.ಎಸ್.ಎಸ್ ಮತ್ತು ಬಿಜೆಪಿ ಮಹಾಮೈತ್ರಿ ಒಡೆಯಲು ಯತ್ನಿಸುತ್ತಿದೆ. ಜನರು ಇವರ ಸಂಚನ್ನು ನೋಡುತ್ತಿದ್ದಾರೆ," ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.