ಅವರನ್ ಬಿಟ್ ಇವರನ್ ಬಿಟ್ ಈಗ ರಾಷ್ಟ್ರಪತಿ ಹುದ್ದೆಗೆ ಶರದ್ ಪವಾರ್ ಹೆಸರು
ಎಲ್ ಕೆ ಅಡ್ವಾಣಿ, ಅಮಿತಾಬ್ ಬಚ್ಚನ್ ಹಾಗೂ ಮೋಹನ್ ಭಾಗವತ್ ಹೆಸರಿನ ನಂತರ ಈಗ ರಾಷ್ಟ್ರಪತಿ ಹುದ್ದೆ ರೇಸಿನಲ್ಲಿ ಶರದ್ ಪವಾರ್ ಹೆಸರು ಕಾಣಿಸಿಕೊಂಡಿದೆ. ಆದರೆ ಬಿಜೆಪಿ ಮೂಲಗಳು ಈ ಸಾಧ್ಯತೆ ತೀರಾ ಕಡಿಮೆ ಎಂದು ತಿಳಿಸಿವೆ
ನವದೆಹಲಿ, ಏಪ್ರಿಲ್ 8: 'ನಾನಲ್ಲ, ನಾನಲ್ಲ' ಎಂಬ ಮಾತು ಎಲ್ ಕೆ ಅಡ್ವಾಣಿ ಹಾಗೂ ಮೋಹನ್ ಭಾಗವತ್ ಇಬ್ಬರಿಂದಲೂ ಬಂದಾಯಿತು. ಯಾವುದರ ಬಗ್ಗೆ ಅನ್ನೋದು ನಿಮಗೆ ಈಗಾಗಲೇ ಗೊತ್ತಾಗಿರುತ್ತದೆ. ಹೌದು, ರಾಷ್ಟ್ರಪತಿ ಹುದ್ದೆ ಬಗ್ಗೆಯೇ ಇಬ್ಬರೂ ಹೀಗೆ ಹೇಳಿದ್ದಾರೆ. ಇನ್ನು ಒಂದಷ್ಟು ದಿನ ಅಮಿತಾಬ್ ಬಚ್ಚನ್ ಹೆಸರು ಹರಿದಾಡಿತು.
ಅದರೆ, ಪನಾಮ ಪೇಪರ್ಸ್ ಹಗರಣದಲ್ಲಿ ಅಮಿತಾಬ್ ಹೆಸರು ಕೇಳಿಬಂದಿರುವುದರಿಂದ ಅವರ ಹೆಸರು ಕೈ ಬಿಡಲಾಗಿದೆ. ಮುಂದಿನ ರಾಷ್ಟ್ರಪತಿಯಾಗಿ ಯಾರನ್ನು ಆರಿಸಬೇಕು ಎಂಬ ಬಗ್ಗೆ ಬಿಜೆಪಿ ಇನ್ನೂ ತೀರ್ಮಾನ ಮಾಡಿಲ್ಲ. ಸಂಸತ್ ಅಧಿವೇಶನದ ನಂತರ ಭುವನೇಶ್ವರದಲ್ಲಿ ಸಭೆ ಸೇರುವ ಬಿಜೆಪಿ ಅಲ್ಲಿ ಅಭ್ಯರ್ಥಿ ಆಯ್ಕೆಯನ್ನು ಆಖೈರು ಮಾಡಲಿದೆ.[ಭಾರತದ ಮುಂದಿನ ರಾಷ್ಟ್ರಪತಿ ಲಾಲ್ ಕೃಷ್ಣ ಅಡ್ವಾಣಿ?]
ಒಟ್ಟಾರೆಯಾಗಿ 25 ಸಾವಿರ ಮತದ ಅಗತ್ಯ ಬಿಜೆಪಿಗೆ ಇದ್ದರೂ ತನ್ನ ಆಯ್ಕೆಯನ್ನು ಮಾಡುತ್ತದೆ. ಸದ್ಯಕ್ಕೆ ಶರದ್ ಪವಾರ್ ರಾಷ್ಟ್ರಪತಿ ಹುದ್ದೆ ರೇಸಿನಲ್ಲಿ ಕಾಣಿಸಿಕೊಂಡಿದೆ. ಈ ಬಗ್ಗೆ ಬಿಜೆಪಿ ಮೂಲಗಳು ಒನ್ ಇಂಡಿಯಾಗೆ ನೀಡಿರುವ ಮಾಹಿತಿ ಪ್ರಕಾರ ಶರದ್ ಪವಾರ್ ಆಯ್ಕೆ ಸಾಧ್ಯತೆ ತೀರಾ ಕಡಿಮೆ.[ರಾಷ್ಟ್ರಪತಿ ಹುದ್ದೆಗೆ ಮೋಹನ್ ಭಾಗವತ್ ಹೆಸರು ಮುಂದಿಟ್ಟ ಶಿವಸೇನೆ]
ಬಿಜೆಪಿಯಿಂದ ಅಚ್ಚರಿಯ ಆಯ್ಕೆಯೊಂದು ಆಗಬಹುದು. ಅವಿರೋಧ ಆಯ್ಕೆಯೇ ಏಕಾಗಬೇಕು? ಮತಗಳ ಕೊರತೆ ಇದ್ದರೂ ಬಿಜೆಪಿಯಿಂದ ಅಭ್ಯರ್ಥಿ ಕಣಕ್ಕಿಳಿಸಲಾಗುತ್ತದೆ ಎಂಬ ಧೋರಣೆ ಕೇಸರಿ ಪಕ್ಷದ್ದಾಗಿದೆ. ಆದರೆ ಬಿಜೆಪಿಗೆ ಎಐಎಡಿಎಂಕೆ ಅಥವಾ ಬಿಜೆಡಿ ಬೆಂಬಲ ಬೇಕಾಗಬಹುದು. ಆ ಪೈಕಿ ಎಐಎಡಿಎಂಕೆ ಬೆಂಬಲಿಸಬಹುದು ಆದ್ದರಿಂದ ತನ್ನ ಇಚ್ಛೆ ಪ್ರಕಾರ ರಾಷ್ಟ್ರಪತಿ ಆಯ್ಕೆ ಮಾಡಬಹುದು ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ.