ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ ವಿಪಕ್ಷಗಳಿಂದ ಇಂದು ಸಂಜೆ ಮಹತ್ವದ ಸಭೆ
ನವದೆಹಲಿ, ಜೂನ್ 22: ರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ನಿರ್ಧರಿಸಲು ವಿಪಕ್ಷಗಳು ಇಂದು ಸಂಜೆ ಮಹತ್ವದ ಸಭೆ ನಡೆಸಲಿವೆ.
ವಿಪಕ್ಷಗಳ ಒಕ್ಕೂಟದಲ್ಲಿ ಮಹತ್ವದ ಸ್ಥಾನ ವಹಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಬೆಂಬಲಿಸುವುದಾಗಿ ಬುಧವಾರ ಹೇಳಿದ್ದು ಈ ಹಿನ್ನಲೆಯಲ್ಲಿ ಇಂದು ನಡೆಯಲಿರುವ ಸಭೆ ಕುತೂಹಲ ಕೆರಳಿಸಿದೆ.
ನಿತೀಶ್ ಕುಮಾರ್, ಬಿಜೆಡಿಯ ನವೀನ್ ಪಟ್ನಾಯಕ್ ಸೇರಿ ಹಲವರು ಕೋವಿಂದ್ ಬೆಂಬಲಿಸುವುದಾಗಿ ಹೇಳಿದ್ದಾರೆ. ಮಾಯಾವತಿ, ಮುಲಾಯಂ ಸಿಂಗ್ ಯಾದವ್, ಶರದ್ ಪವಾರ್ ಕೂಡಾ ಕೋವಿಂದ್ ಬೆಂಬಲಿಸುವ ಸಾಧ್ಯತೆ ಇದೆ. ಆದರೆ ಕಾಂಗ್ರೆಸ್, ಎಡಪಕ್ಷಗಳು ಹಾಗೂ ಟಿಎಂಸಿ ಮಾತ್ರ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಪಟ್ಟು ಹಿಡಿದು ಕೂತಿವೆ.
ಇಂದು ನಡೆಯಲಿರುವ ಸಭೆಯಲ್ಲಿ ಜೆಡಿಎಸ್ ವರಿಷ್ಠರಾದ ದೇವೇಗೌಡರೂ ಭಾಗವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಅವರು ಡ್ಯಾನಿಶ್ ಅಲಿಯನ್ನು ಸಭೆಗೆ ಕಳುಹಿಸಲಿದ್ದಾರೆ.
ಸದ್ಯ ಎಐಎಡಿಎಂಕೆಯ ಪಳನಿಸ್ವಾಮಿ ಬನವೂ ಬಿಜೆಪಿ ಬೆಂಬಲಿಸಿರುವುದರಿಂದ ಬಿಜೆಪಿ ಅಭ್ಯರ್ಥಿ ಗೆಲುವು ಬಹುತೇಕ ನಿಚ್ಚಳವಾಗಿದೆ. ಹೀಗಾಗಿ ಹೆಚ್ಚಿನ ವಿಪಕ್ಷಗಳು ದಲಿತ ಸಮುದಾಯದ ಅಭ್ಯರ್ಥಿಯನ್ನು ಬೆಂಬಲಿಸಲು ಸಹಮತ ಹೊಂದಿವೆ.
ಹೀಗಿದ್ದೂ ಪ್ರಕಾಶ್ ಅಂಬೇಡ್ಕರ್, ಮೀರಾ ಕುಮಾರ್, ಸುಶೀಲ್ ಕುಮಾರ್ ಶಿಂಧೆ ಹೆಸರು ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದು ಇವರಲ್ಲಿ ಯಾರ ಹೆಸರು ಅಂತಿಮವಾಗುತ್ತದೆ, ಅಥವಾ ವಿಪಕ್ಷಗಳು ಅವಿರೋಧ ಆಯ್ಕೆಗೆ ಮನಸ್ಸು ಮಾಡುತ್ತವೆಯೋ ಗೊತ್ತಿಲ್ಲ.
ರಾಷ್ಟ್ರಪತಿ ಚುನಾವಣೆ ಜುಲೈ 17 ರಂದು ನಡೆಯಲಿದ್ದು, ಜುಲೈ 20 ರಂದು ಫಲಿತಾಂಶ ಹೊರಬೀಳಲಿದೆ.