ಕಡೆಗೂ ಸಿಕ್ತು ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಗೆ ಶಿವಸೇನೆ ಬೆಂಬಲ
ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ರಾಮ್ ನಾಥ್ ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ಶಿವಸೇನೆ ಹೇಳಿದೆ. ಮುಂಬೈನಲ್ಲಿ ಮಂಗಳವಾರ ಸಂಜೆ ಉದ್ಧವ್ ಠಾಕ್ರೆ ಈ ವಿಚಾರ ತಿಳಿಸಿದ್ದಾರೆ.
ಮುಂಬೈ, ಜೂನ್ 20: ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಕಡೆಯಿಂದ ಕಣಕ್ಕಿಳಿಸಲಾಗಿರುವ ರಾಮ್ ನಾಥ್ ಕೋವಿಂದ್ ಅವರಿಗೆ ಶಿವಸೇನೆ ಬೆಂಬಲ ಸೂಚಿಸಿದೆ.
ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ, ''ಬಿಜೆಪಿಯ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯನ್ನು ಶಿವಸೇನೆ ಬೆಂಬಲಿಸುತ್ತದೆ'' ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ಆಯ್ಕೆಯಲ್ಲಿ ಬಿಜೆಪಿಗೆ ತಲೆ ಬೇನೆ ತರಲಿದೆಯೇ ಶಿವಸೇನೆ?
ಶಿವಸೇನೆಯ ಬೆಂಬಲದಿಂದಾಗಿ, ಬಿಜೆಪಿಗೆ ಕೋವಿಂದ್ ಆಯ್ಕೆ ಬಗ್ಗೆ ಉಂಟಾಗಿದ್ದ ತಲೆನೋವು ದೂರವಾದಂತಾಗಿದೆ. ಬಿಜೆಪಿ ನಾಯಕತ್ವದ ಎನ್ ಡಿಎ ಒಕ್ಕೂಟದ ಪ್ರಮುಖ ಪಕ್ಷವಾಗಿರುವ ಶಿವಸೇನೆಯ ವಿರೋಧವು ಕೋವಿಂದ್ ಆಯ್ಕೆಯನ್ನು ಕಗ್ಗಂಟಾಗಿಸಿತ್ತು.
ಸೋಮವಾರ, ಉದ್ಧವ್ ಠಾಕ್ರೆ ಅವರು, ಬಿಜೆಪಿಯು ಶಿವಸೇನೆಯ ಸಹಮತವಿಲ್ಲದೆ, ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಂಸ್ಥಾಪನಾ ದಿನಾಚರಣೆಯಲ್ಲಿ ಅಸಮಾಧಾನ
ಶಿವಸೇನೆಯ 51ನೇ ಸಂಸ್ಥಾಪನಾ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು ತಮ್ಮನ್ನು ಮಾತುಕತೆಗೆ ಕರೆದಿದ್ದರು. ಆದರೆ, ಅವರು ಆಗಲೇ ಅಭ್ಯರ್ಥಿಯನ್ನು ನಿರ್ಧರಿಸಿ, ಆನಂತರ ಮಾತುಕತೆಗೆ ಬಂದಿದ್ದರು. ಇದು ಬೇಸರ ತರಿಸಿದೆ ಎಂದಿದ್ದರು.
ಪ್ರಧಾನ ಪಾತ್ರ ವಹಿಸಲಿರುವ ಶಿವಸೇನೆ
ಶಿವಸೇನೆಯ ಈ ಮುನಿಸು ಬಿಜೆಪಿ ಪಾಳಯದಲ್ಲಿ ಕೆಲವಾರು ಆತಂಕಗಳನ್ನು ಸೃಷ್ಟಿಸಿತ್ತು. ಏಕೆಂದರೆ, ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟದಲ್ಲಿ ಶಿವಸೇನೆಯ ಪ್ರಮುಖವಾದ ಪಕ್ಷ. ಈ ಪಕ್ಷವು ರಾಷ್ಟ್ರಪತಿ ಚುನಾವಣೆಯಲ್ಲಿ ತನ್ನದೇ ಆದ ಪ್ರಧಾನ ಪಾತ್ರ ವಹಿಸುತ್ತದೆ. ಇದೀಗ, ಶಿವಸೇನೆಯ ವಿರೋಧ ಕಟ್ಟಿಕೊಂಡು ತನ್ನ ಆಯ್ಕೆಯ ಅಭ್ಯರ್ಥಿ ರಾಷ್ಟ್ರಪತಿಯಾಗುವುದನ್ನು ನೋಡಲು ಬಿಜೆಪಿ ಕಷ್ಟವಾದೀತೆಂಬ ಮಾತುಗಳು ಕೇಳಿಬಂದಿದ್ದವು.
ಕಾಂಗ್ರೆಸ್ ಅನುಕೂಲವಾಗುವ ಸಾಧ್ಯತೆಯಿತ್ತು
ಹಾಗೊಂದು ವೇಳೆ ಶಿವಸೇನೆಯು ರಾಷ್ಟ್ರಪತಿ ಚುನಾವಣೆಯಲ್ಲಿ ಕೈಕೊಟ್ಟರೆ, ಅದು ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಅಭ್ಯರ್ಥಿಗೆ ಅನುಕೂಲವಾಗಬಹುದು ಎಂದೂ ಹೇಳಲಾಗಿತ್ತು. ಈ ವಾರಾಂತ್ಯಕ್ಕೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಕಡೆಯಿಂದ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆಗಳಿವೆ.
ಸೇನೆ ಕೈ ಕೊಟ್ಟಿದ್ರೆ ಯೋಜನೆ ಉಲ್ಟಾ ಆಗೋ ಸಾಧ್ಯತೆಯಿತ್ತು.
ಬಿಜೆಪಿಯು ಎಷ್ಟೆಲ್ಲಾ ಚಾಕಚಕ್ಯತೆಯಿಂದ ಕೋವಿಂದ್ ಅಭ್ಯರ್ಥಿತನವನ್ನು ಗೌಪ್ಯವಾಗಿರಿಸಿ, ತನ್ನ ಅಭ್ಯರ್ಥಿ ವಿಚಾರವಾಗಿ ಸುಷ್ಮಾ ಸ್ಮರಾಜ್, ದ್ರೌಪದಿ ಮರ್ಮು ಎಂಬ ಮಾಹಿತಿಗಳು ಮಾಧ್ಯಮಗಳಲ್ಲಿ ಅನುರಣಿಸುವಂತೆ ಮಾಡಿ, ಕೊನೆಗೆ ಸಸ್ಪನ್ಸ್ ಸಿನಿಮಾ ಮಾದರಿಯಲ್ಲಿ ಕೋವಿಂದ್ ಹೆಸರನ್ನು ಘೋಷಿಸಿತ್ತು. ಆದರೆ, ಶಿವಸೇನೆ ಅಡ್ಡಗಾಲು ಹಾಕಿದ್ದರೆ ಬಿಜೆಪಿಯ ಈ ಚಾಣಾಕ್ಷ ನಡೆಗೆ ಹಿನ್ನಡೆಯಾಗುತ್ತಿತ್ತು.
ಬದ್ಧತೆ ಪ್ರದರ್ಶಿಸಿದ ಎನ್ ಡಿಎ
ಇದೀಗ, ಶಿವಸೇನೆಯ ಬೆಂಬಲ ಸಿಕ್ಕಿರುವುದು ಬಿಜೆಪಿಗೆ ಹೆಚ್ಚು ವಿಶ್ವಾಸ ತುಂಬಿದೆ. ರಾಜಕೀಯ ಲೆಕ್ಕಾಚಾರಗಳೇನೇ ಇರಬಹುದು, ಅಂತೂ ಇಂತು ಶಿವಸೇನೆಯು ಇತ್ತೀಚೆಗೆ ಪದೇ ಪದೇ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರೂ, ಈ ಸಂದಿಗ್ಧ ಸನ್ನಿವೇಶದಲ್ಲಿ ಬಿಜೆಪಿ ಕೈ ಹಿಡಿಯುವ ಮೂಲಕ ಎನ್ ಡಿಎ ನಲ್ಲಿನ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.