ಈಶಾನ್ಯ ಭಾರತದ ಹೆಬ್ಬಾಗಿಲು ಮಣಿಪುರದ ಸಿಎಂ ಗದ್ದುಗೆ ಯಾರಿಗೆ?
ಇದೇ ಮೊದಲ ಬಾರಿಗೆ ಈಶಾನ್ಯ ರಾಜ್ಯವೊಂದರ ಮುಖ್ಯಮಂತ್ರಿ ಪಟ್ಟ ಕಬಳಿಸಲು ಬಿಜೆಪಿ ಸಜ್ಜಾಗಿದೆ. ಇದೇ ವೇಳೆ ಇಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದೂ ಕುತೂಹಲ ಹುಟ್ಟಿಸಿದೆ.
ಬೆಂಗಳೂರು, ಮಾರ್ಚ್ 13: ಇದೇ ಮೊದಲ ಬಾರಿಗೆ ಈಶಾನ್ಯ ರಾಜ್ಯವೊಂದರ ಮುಖ್ಯಮಂತ್ರಿ ಪಟ್ಟ ಕಬಳಿಸಲು ಬಿಜೆಪಿ ಸಜ್ಜಾಗಿದೆ. ಅತಂತ್ರ ವಿಧಾನಸಭೆಯಲ್ಲಿ ತನ್ನ ಚಾಣಾಕ್ಷ ತಂತ್ರದಿಂದ ಮುಖ್ಯಮಂತ್ರಿ ಹುದ್ದೆಗಾಗಿ ಬಿಜೆಪಿ ಬಲೆ ಬೀಸಿದೆ. ಇದೇ ವೇಳೆ ಇಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದೂ ಕುತೂಹಲ ಹುಟ್ಟಿಸಿದೆ.
ಈಗಾಗಲೇ 24 ಗಂಟೆಯೊಳಗೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ಹೇಳಿದ್ದಾರೆ. ಇದೇ ವೇಳೆಗೆ ಬಿಜೆಪಿ ಪಾಳಯದಿಂದ ಎರಡು ಹೆಸರುಗಳು ಮುಖ್ಯಮಂತ್ರಿ ಗದ್ದುಗೆಗೆ ಕೇಳಿ ಬರುತ್ತವೆ. ಮೊದಲನೆಯವರು ನಾಂಗ್ತೊಂಬಂ ಬೈರೆನ್ ಸಿಂಗ್. ಇನ್ನೊಬ್ಬರು ಟಿ ಬಿಸ್ವಜಿತ್. ಆದರೆ ಅಂತಿಮ ನಿರ್ಧಾರವನ್ನು ಕೇಂದ್ರದ ನಾಯಕರು ತೆಗೆದುಕೊಳ್ಳಲಿದ್ದಾರೆ.[ಕಾಂಗ್ರೆಸ್ ಗೆ ಮಣಿಪುರದಲ್ಲಿ ಗುಣಿ ತೋಡಿದ ಹಿಮಂತ ಬಿಸ್ವಾ ಶರ್ಮಾ ಯಾರು?]
ನಿರಂತರ ಸಭೆ
ಮಣಿಪುರ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಲು ನಿರಂತರ ಸಭೆಗಳನ್ನು ನಡೆಸಲಾಗುತ್ತಿದೆ. ಇವತ್ತು ರಾತ್ರಿ ವೇಳೆಗೆ ಮುಖ್ಯಮಂತ್ರಿ ಹೆಸರು ಹೊರ ಬೀಳುವ ಸಾಧ್ಯತೆ ಇದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಿಜೆಪಿ ಸರಕಾರ ರಚಿಸುವ ಹುಮ್ಮಸ್ಸಿನಲ್ಲಿದೆ.
ನಾಂಗ್ತೊಂಬಂ ಬೈರೆನ್ ಸಿಂಗ್
ಬೈರೆನ್ ಸಿಂಗ್ ರಾಷ್ಟ್ರಮಟ್ಟದ ಫೂಟ್ಬಾಲ್ ಆಟಗಾರರೂ ಹೌದು. ನಂತರ ಪತ್ರಕರ್ತರಾಗಿದ್ದರು. ಇದಾದ ಬಳಿಕ 2003ರಲ್ಲಿ ಕಾಂಗ್ರೆಸ್ ಸೇರಿ 2007ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಸಚಿವರಾಗಿದ್ದರು. ನಂತರ ಕಾಂಗ್ರೆಸಿನ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ವಿರುದ್ಧ ಬಂಡಾಯವೆದ್ದು, 2016ರಲ್ಲಿ ಬಿಜೆಪಿ ಸೇರಿದ್ದರು. ಅವರಿಗೆ ರಾಜ್ಯದಲ್ಲಿ ಚುನಾವಣೆಯ ಉಸ್ತುವಾರಿಯನ್ನು ಪಕ್ಷ ನೀಡಿತ್ತು. ರಾಜ್ಯದಲ್ಲಿ ಬಿಜೆಪಿ ಇಷ್ಟು ದೊಡ್ಡ ಮಟ್ಟದ ಸ್ಥಾನಗಳನ್ನು ಗೆಲ್ಲುವಲ್ಲಿ ಇವರ ಶ್ರಮ ಬಹಳ ದೊಡ್ಡದು.[ಯುಪಿಯಲ್ಲಿ ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ?]
ತೊಂಗಂ ಬಿಸ್ವಜಿತ್ ಸಿಂಗ್
ತೊಂಗಂ ಬಿಸ್ವಜಿತ್ ಸಿಂಗ್ ಭಾರತೀಯ ಜನತ ಪಕ್ಷದ ಜತೆ ಬಹಳ ಹಿಂದಿನಿಂದಲೂ ಗುರುತಿಸಿಕೊಂಡಿದ್ದರು. ಇಂಫಾಲದ ಪೊರ್ವದಲ್ಲಿರುವ ಥೋಗ್ಜು ಕ್ಷೇತ್ರದಿಂದ ಅವರು ವಿಧಾನಸಭೆಗೆ ಆಯ್ಕೆಯಾಗಿದ್ದು ಸದ್ಯ ರಾಜ್ಯದ ಮುಖ್ಯಮಂತ್ರಿ ರೇಸಿನಲ್ಲಿದ್ದಾರೆ.
ಕಾಂಗ್ರೆಸಿಗೆ ಆಹ್ವಾನವಿಲ್ಲ
ರಾಜ್ಯದಲ್ಲಿ 28 ಸೀಟುಗಳೊಂದಿಗೆ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ ಕಾಂಗ್ರೆಸಿಗೆ ಕೇವಲ 3 ಸ್ಥಾನಗಳ ಕೊರತೆ ಕಂಡು ಬಂದಿತ್ತು. ಹೀಗಿದ್ದೂ ರಾಜ್ಯಪಾಲರು ಕಾಂಗ್ರೆಸಿಗೆ ಸರಕಾರ ರಚಿಸುವಂತೆ ಆಹ್ವಾನ ನೀಡಿಲ್ಲ. ಬದಲಿಗೆ 21 ಸ್ಥಾನಗಳನ್ನು ಗೆದ್ದು ಮ್ಯಾಜಿಕ್ ಸಂಖ್ಯೆಯಿಂದ ದೂರವೇ ಇರುವ ಬಿಜೆಪಿ ಸರಕಾರ ರಚಿಸುವುದಾಗಿ ಹೇಳುತ್ತಿದ್ದಂತೆ, ಬಿಜೆಪಿಗೆ ಆಹ್ವಾನ ನೀಡಿದ್ದಾರೆ.
ಗರಿಗೆದರಿದ ರಾಜಕೀಯ
ಕಾಂಗ್ರೆಸ್ ಸರಕಾರ ರಚಿಸಲು ಹಕ್ಕು ಮಂಡಿಸಲು ಹೋಗುವ ಮುನ್ನವೇ ಹಲವು ಸ್ಥಳೀಯ ಪಕ್ಷಗಳ ಶಾಸಕರು ಮತ್ತು ಪಕ್ಷೇತರ ಶಾಸಕರು ಬಿಜೆಪಿ ಕ್ಯಾಂಪಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ಸರಕಾರ ರಚಿಸಲು ಬೇಕಾದಷ್ಟು ಸಂಖ್ಯಾಬಲವನ್ನು ಬಿಜೆಪಿ ಹೊಂದಲು ಸಾಧ್ಯವಾಗಿದೆ. ಜತೆಗೆ ಸರಕಾರ ರಚಿಸುವಂತೆ ರಾಜ್ಯಪಾಲರಿಂದ ಆಹ್ವಾನವನ್ನೂ ಪಡೆದುಕೊಂಡಿದೆ.
ಬಿಜೆಪಿಗೆ ಭಾರೀ ಬೆಂಬಲ
ಹಲವು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಜತೆಗೆ ತೃಣಮೂಲ ಕಾಂಗ್ರೆಸಿನ ತೋಂಗಬ್ರಾಂ ರಾಬಿಂಡ್ರೊ ಸಿಂಗ್ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಇನ್ನು ಲೋಕ ಜನಶಕ್ತಿ ಪಕ್ಷದ ಓರ್ವ ಶಾಸಕ, ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್ ಹಾಗೂ ನಾಗಾಲ್ಯಾಂಡ್ ಪೀಪಲ್ಸ್ ಪಾರ್ಟಿಯ ತಲಾ ನಾಲ್ವರು ಶಾಸಕರೂ ಬಿಜೆಪಿಗೆ ಬೆಂಬಲ ನೀಡಿದ್ದಾರೆ.
ಕಾಂಗ್ರೆಸಿಗೆ ನಿರಾಸೆ
ಕಾಂಗ್ರೆಸ್ ಅಲ್ಲಿನ ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿತ್ತು. ಆದರೆ ಮ್ಯಾಜಿಕ್ ಸಂಖ್ಯೆಗೆ ಎರಡು ಶಾಸಕರ ಕೊರತೆಯಾಗಿತ್ತು. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ31 ಶಾಸಕರು ಬೇಕು. ಆದರೆ ಕೇವಲ 29 ಶಾಸಕರ ಬೆಂಬಲ ಗಿಟ್ಟಿಸಲು ಮಾತ್ರ ಅದು ಶಕ್ತವಾಗಿತ್ತು.