JNU ವಿವಾದ: ದೆಹಲಿಯಲ್ಲಿ ವಕೀಲರು VS ಪತ್ರಕರ್ತರು
ನವದೆಹಲಿ, ಫೆಬ್ರವರಿ, 16: ನವದೆಹಲಿಯಲ್ಲಿ ಮಂಗಳವಾರವೂ ಪ್ರತಿಭಟನೆಯದ್ದೇ ಕಾವು. ಪತ್ರಕರ್ತರು ಪ್ರತಿಭಟನೆಗೆ ಇಳಿದಿದ್ದು ವಿಶೇಷ. ಪಟಿಯಾಲಾ ಕೋರ್ಟ್ ಸಮೀಪ ಪತ್ರಕರ್ತರು ಪ್ರತಿಭಟನೆ ನಡೆಸಿದರು. ಫೆಬ್ರವರಿ 15, ಸೋಮವಾರ ವಕೀಲರು ತಮ್ಮ ಮೇಲೆ ಹಲ್ಲೆ ಮಾಡಿದ್ದು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬರ್ಖಾ ದತ್, ರಾಜ್ ದೀಪ್ ಸರ್ದೇಸಾಯಿ, ಸಿದ್ಧಾರ್ಥ್ ವರದರಾಜನ್, ರವೀಶ್ ಕುಮಾರ್ ಸೇರಿದಂತೆ ಸಾವಿರಾರು ಪತ್ರಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ತೆರಳಿದ ಪತ್ರಕರ್ತರು ಹಲ್ಲೆ ಮಾಡಿದ ವಕೀಲರಿಗೆ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಕೆ ಮಾಡಿತು.[ಅಮಿತ್ ಶಾ 8 ಪ್ರಶ್ನೆಗಳಿಗೆ ಕಾಂಗ್ರೆಸ್ ಒಂದೇ ವಾಕ್ಯದ ಉತ್ತರ!]
ಸೋಮವಾರದ ವಿಚಾರಣೆ ವೇಳೆ ವಕೀಲರ ತಂಡವೊಂದು ಭಾರತ ಮಾತಾಕೀ ಜೈ ಎಂದು ಹೇಳುತ್ತ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ಹಲ್ಲೆ ಮಾಡಿತ್ತು. ಇದಾದ ಮೇಲೆ ಪತ್ರಕರ್ತರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದರು.
ಗೃಹ ಸಚಿವರಿಗೂ ಮನವಿ
ದೆಹಲಿ ಪೊಲೀಸರು ಇಂಥ ಪ್ರಕರಣ ನಡೆದರೂ ಸರಿಯಾದ ಭದ್ರತೆ ಒದಗಿಸಿಲ್ಲ ಎಂದು ಪತ್ರಕರ್ತರು ಆರೋಪಿಸಿದರು. ಇನ್ನೊಂದೆಡೆ ಪತ್ರಕರ್ತರ ನಿಯೋಗ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರಿಗೂ ಮನವಿ ಸಲ್ಲಿಕೆ ಮಾಡಿದೆ.
ಲೈಸೆನ್ಸ್ ಕ್ಯಾನ್ಸಲ್ ಮಾಡಿ
ಹಲ್ಲೆ ಮಾಡಿದ ವಕೀಲರನ್ನು ಗುರುತಿಸಿ ಅವರ ಬಾರ್ ಕೌನ್ಸಿಲ್ ಲೈಸನ್ಸ್ ಕಾನ್ಸಲ್ ಮಾಡಬೇಕು ಎಂದು ಪತ್ರಕರ್ತರು ಘೋಷಣೆ ಕೂಗಿದರು.
ದಿನ ಕಳೆದರೂ ಕ್ರಮವಿಲ್ಲ
ಘಟನೆ ನಡೆದು ಒಂದು ದಿನ ಕಳೆದಿದ್ದರೂ ದೆಹಲಿ ಪೊಲೀಸರು ಇನ್ನು ಯಾರನ್ನು ಬಂಧಿಸಿ ಕರೆತಂದಿಲ್ಲ. ಇಲ್ಲಿ ಪ್ರಮುಖ ವ್ಯಕ್ತಿಗಳ ಕೈವಾಡ ಇರುವುದು ಸಾಬೀತಾಗುತ್ತಿದೆ.
ವಿಚಾರಣೆಗೆ ಬರಲಿದೆ
ಪತ್ರಕರ್ತರು ಮಾಧ್ಯಮ ಸ್ವಾತಂತ್ರ್ಯ ಹರಣ ಆಗುತ್ತಿದೆ ಎಂದು ಸಲ್ಲಿಕೆ ಮಾಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.