ಇಬ್ಬರು ದಲಿತ ಮಕ್ಕಳ ಹತ್ಯೆಗೆ ಕಾರಣವಾಗಿದ್ದೊಂದು ಮೊಬೈಲ್!
ನವದೆಹಲಿ, ಅಕ್ಟೋಬರ್.21: ಮೊಬೈಲ್ ಪ್ರಕರಣವೊಂದು ಇಬ್ಬರು ಹಸುಳೆಗಳಿಗೆ ಮರಣ ಶಾಸನ ಬರೆದಿದೆ. ತಿಂಗಳುಗಳ ಹಿಂದೆ ನಡೆದ ಮೊಬೈಲ್ ಪ್ರಕರಣ ಇಬ್ಬರು ಮಕ್ಕಳ ಜೀವ ಬಲಿ ಪಡೆದಿದ್ದು ಗ್ರಾಮದೆಲ್ಲೆಡೆ ಆತಂಕದ ವಾತಾವರಣ ನಿರ್ಮಾಣ ಮಾಡಿದೆ.
ರಜಪೂರ ವ್ಯಕ್ತಿಗೆ ಸಂಬಂಧಿಸಿದ ಮೊಬೈಲ್ ಚರಂಡಿಗೆ ಬಿದ್ದಿತ್ತು. ಅದನ್ನು ದಲಿತರೊಬ್ಬರು ತೆಗೆದುಕೊಳ್ಳಲು ಪ್ರಯತ್ನ ಪಟ್ಟರು ಎಂದು ರಜಪೂತರೊಬ್ಬರು ಜಾತಿ ನಿಂದನೆ ಮಾತುಗಳನ್ನು ಆಡಿದ್ದು ಹಿಂಸೆಗೆ ತಿರುಗಿತು ಎಂಬುದು ದಲಿತರ ವಾದ.[ವಾರಣಾಸಿಗೂ ಹಬ್ಬಿದ್ದ ಜಾತಿ ಕಳಂಕ]
ಮೊಬೈಲ್ ಕೆಳಕ್ಕೆ ಬಿದ್ದಿದ್ದನ್ನು ನೋಡಿದ ದಲಿತನೊಬ್ಬ ವ್ಯಂಗವಾಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದಕ್ಕೆ ಅಶ್ಲೀಲ ಪದಗಳಿಂದ ಬೈಯ್ಯಲು ಮುಂದಾಗಿದ್ದಾನೆ ಎಂದು ರಜಪೂತ ಪಂಗಡದವರು ಹೇಳುತ್ತಾರೆ.
ಘಟನೆಗಳು ಏನೇ ಇರಲಿ ಈ ಮೊಬೈಲ್ ಪ್ರಕರಣ ಮಾತ್ರ ಉಗ್ರ ರೂಪಕ್ಕೆ ತಿರುಗಿದೆ. ದಲಿತರ ಮನೆಗೆ ಬೆಂಕಿ ಹಾಕಲಾಗಿದ್ದು ಎರಡು ಹಸುಳೆಗಳು ಅಗ್ನಿ ಜ್ವಾಲೆಗೆ ಬಲಿಯಾಗಿವೆ.
ದೆಹಲಿ ಹೊರವಲಯದಲ್ಲಿರುವ ಸೊನ್ಪೆಡ್ ಗ್ರಾಮದಲ್ಲಿ ಬೆಳಗಿನ ಬುಧವಾರ ಜಾವ 2 ಗಂಟೆ ಸುಮಾರಿಗೆ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ದಲಿತರ ಕುಟುಂಬಕ್ಕೆ ಸೇರಿದ ಮನೆಯೊಂದಕ್ಕೆ ಮೇಲ್ಜಾತಿಗೆ ಸೇರಿದವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಗ್ರಾಮದ ನಿವಾಸಿ ಬಲ್ವಂತ್ ಮತ್ತು ಈತನ ಪುತ್ರ ಧರ್ಮ ಸಿಂಗ್ನನ್ನು ಬಂಧಿಸಲಾಗಿದೆ. ಒಟ್ಟು 11 ಜನರ ವಿರುದ್ಧ ಕೊಲೆ, ದೊಂಬಿ ಮತ್ತು ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡೂವರೆ ವರ್ಷದ ವೈಭವ್ ಮತ್ತು ಈತನ ಸಹೋದರಿ 11 ತಿಂಗಳ ಹಸುಳೆ ದಿವ್ಯಾ ಬೆಂಕಿಗೆ ಆಹುತಿಯಾಗಿದ್ದಾರೆ. ಘಟನೆ ನಡೆದ ಸ್ಥಳದ ಸಮೀಪವೇ ಧಾರ್ಮಿಕ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಶೇ 70ರಷ್ಟು ಸುಟ್ಟಗಾಯಗಳಿಂದ ನರಳುತ್ತಿರುವ ಮಕ್ಕಳ ತಾಯಿ ರೇಖಾ (28) ಅವರನ್ನು ಚಿಕಿತ್ಸೆಗೆಂದು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬವನ್ನು ರಕ್ಷಣೆ ಮಾಡಲು ಹೋದ ಮನೆಯ ಯಜಮಾನ ಜಿತೇಂದ್ರ (31)ಅವರಿಗೂ ಗಾಯಗಳಾಗಿವೆ.