ಛತ್ತೀಸ್ ಗಢ ನಕ್ಸಲರ ದಾಳಿ, ಗುರುತೇ ಸಿಗದಂತಾಗಿದ್ದ ಯೋಧರ ದೇಹ
ಛತ್ತೀಸ್ ಗಢದ ನಕ್ಸಲರಿಗೆ ಆ ಪ್ರದೇಶದಲ್ಲಿ ರಸ್ತೆ ನಿರ್ಮಾಣವಾಗುವುದು ಬೇಕಿರಲಿಲ್ಲ. ಅದಕ್ಕೆ ನೆರವಾಗುತ್ತಿದ್ದ ಸಿಆರ್ ಪಿಎಫ್ ಗೆ ಪ್ರಬಲವಾದ ಸಂದೇಶ ರವಾನಿಸಬೇಕು ಎಂಬ ಕಾರಣದಿಂದಲೇ ಇಷ್ಟು ಕ್ರೂರವಾದ ದಾಳಿ ನಡೆಸಿದ್ದಾರೆ
ಬೆಂಗಳೂರು, ಏಪ್ರಿಲ್ 25: ಛತ್ತೀಸ್ ಗಢದಲ್ಲಿ ನಡೆದ ಸಿಆರ್ ಪಿಎಫ್ ಯೋಧರ ಮೇಲಿನ ದಾಳಿಯಲ್ಲಿ ಇಪ್ಪತ್ತಾರು ಮಂದಿ ಹುತಾತ್ಮರಾದರು. ಈಚಿನ ವರ್ಷಗಳಲ್ಲಿ ನಡೆದ ದಾಳಿಗಳಲ್ಲೇ ಅತ್ಯಂತ ಭಿಕರ ದಾಳಿಯಿದು. ಸುಮಾರು ನಾಲ್ಕು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದು, ಯೋಧರ ದೇಹವನ್ನು ಗುರುತು ಹಿಡಿಯಲಾರದಂತೆ ಆಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದ್ವೇಷದಿಂದಲೇ ನಕ್ಸಲರು ಈ ದಾಳಿ ನಡೆಸಿದಂತಿದೆ. ಏಕೆಂದರೆ ಮೂಲಗಳು ಹೇಳುವ ಪ್ರಕಾರ, ಯೋಧರ ಗುರುತು ಸಿಗದ ರೀತಿಯಲ್ಲಿ ನಕ್ಸಲರು ಅವರ ಮೇಲೆ ದಾಳಿ ಮಾಡಿದ್ದರು. ಆ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಡಿ ಎಂದು ಪ್ರಬಲವಾದ ಸಂದೇಶವನ್ನು ಸಿಆರ್ ಪಿಎಫ್ ಗೆ ನೀಡುವ ಉದ್ದೇಶದಿಂದಲೇ ದಾಳಿ ಮಾಡಿದಂತಿದೆ.['ರಜಾ ಹಾಕ್ತೀನಿ ಅಂದಿದ್ದ ನನ್ನ ಮಗ ಇನ್ಯಾವತ್ತೂ ಮನೆಗೆ ಬರಲ್ಲ']
ಸುಕ್ಮಾದಲ್ಲಿ ಪ್ರಮುಖವಾದ ರಸ್ತೆ ನಿರ್ಮಿಸಲಾಗುತ್ತಿದೆ. ಸಿಆರ್ ಪಿಎಫ್ ನಿಂದ ಅದಕ್ಕೆ ನೆರವು ನೀಡಲಾಗುತ್ತಿದೆ. ಇದರಿಂದ ನಕ್ಸಲರು ಸಿಟ್ಟಾಗಿದ್ದಾರೆ. ರಸ್ತೆ ನಿರ್ಮಾಣ ಅಂದರೆ ಅಭಿವೃದ್ಧಿ. ಮತ್ತು ಇದರಿಂದ ಅವರ ಸಿದ್ಧಾಂತ ಹಾಗೂ ಉದ್ದೇಶದ ಸೋಲಿಗೆ ಕಾರಣವಾಗುತ್ತದೆ. ಅದೂ ಈ ರಸ್ತೆ ನಕ್ಸಲ್ ಕಾರ್ಯಾಚರಣೆಯ ಪ್ರಮುಖ ಪ್ರದೇಶದಲ್ಲಿ ಹಾದು ಹೋಗುತ್ತದೆ. ಆದ್ದರಿಂದ ಇದನ್ನು ಹೇಗಾದರೂ ತಡೆಯಬೇಕು.