ಮೋದಿ ಅನಾವರಣ ಮಾಡಿದ 'ಆದಿಯೋಗಿ'ಯ ಆಕರ್ಷಕ ಚಿತ್ರಗಳು
ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಿರ್ಮಿಸಿರುವ 112 ಎತ್ತರದ 'ಆದಿಯೋಗಿ' ಪ್ರತಿಮೆಯನ್ನು ಮಹಾಶಿವರಾತ್ರಿಯ ದಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅನಾವರಣ ಮಾಡಿದ್ದಾರೆ.
ಕೊಯಮುತ್ತೂರು, ಫೆಬ್ರವರಿ 25: ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ತಮಿಳುನಾಡಿನ ಕೊಯಮುತ್ತೂರಿನಲ್ಲಿ ಸ್ಥಾಪಿಸಿರುವ ಆಕರ್ಷಕ 112 ಎತ್ತರದ ಶಿವನ ಮುಖವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದ್ದಾರೆ. ನಿನ್ನೆ (ಫೆ 24) ಸಂಜೆ ಈ ಕಾರ್ಯಕ್ರಮ ನಡೆಯಿತು.
ಈಶ ಫೌಂಡೇಷನ್ ಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಕೊಯಮುತ್ತೂರಿನಲ್ಲಿರುವ ತಮ್ಮ ಈಶ ಯೋಗ ಕೇಂದ್ರದಲ್ಲಿ ಈ ಶಿವನ ಮುಖವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಯೋಗದ ಮೂಲವಾಗಿರುವ 'ಆದಿಯೋಗಿ' ಶಿವನ ಈ ಬೃಹತ್ ಮುಖ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಮುಖ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.[ವಿಶ್ವದ ಅತೀ ದೊಡ್ಡ 'ಆದಿಯೋಗಿ' ಪ್ರತಿಮೆ ಅನಾವರಣ ಮಾಡಿದ ಮೋದಿ]
ಬೃಹತ್ ಕಾರ್ಯಕ್ರಮ
ಶಿವನ ಮುಖವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದರು. ಆದಿಯೋಗಿ ಚಿತ್ರದ ಪರದೆ ಸರಿಸುವ ಮೂಲಕ ಮೂರ್ತಿಯನ್ನು ಪ್ರಧಾನಿ ಅನಾವರಣ ಮಾಡಿದರು. ಈ ಸಂದರ್ಭ ಜಗ್ಗಿ ವಾಸುದೇವ್ ಕೂಡಾ ಪ್ರಧಾನಿ ಜತೆಗೆ ಉಪಸ್ಥಿತರಿದ್ದರು. ಈ ಬೃಹತ್ ಕಾರ್ಯಕ್ರಮದಲ್ಲಿ ಸುಮಾರು 10 ಲಕ್ಷ ಜನ ಪಾಲ್ಗೊಂಡರು.[ಯೋಗದ ಬಗ್ಗೆ ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?]
ಒತ್ತಡದಿಂದ ಬಿಡುಗಡೆಗೆ ಯೋಗ
ಜಗತ್ತಿನಾದ್ಯಂತ ಜನರು ನೆಮ್ಮದಿಗಾಗಿ ಹಪಹಪಿಸುತ್ತಿದ್ದಾರೆ. ಆದರೆ ಒತ್ತಡದಿಂದ ಸುಲಭವಾಗಿ ಹೊರಬರುವ ಮಾರ್ಗವೇ ಯೋಗ. ದೇಹವನ್ನು ದೇವಾಲಯ ಅನ್ನೋದಾದರೆ, ಯೋಗವು ಸುಂದರ ದೇವಾಲಯ ನಿರ್ಮಾಣಕ್ಕೆ ಸಹಕಾರಿ. ಅದಕ್ಕೆ ನಾನು ಯೋಗವನ್ನು ಉತ್ತಮ ಆರೋಗ್ಯಕ್ಕೆ ಪಾಸ್ ಪೋರ್ಟ್ ಇದ್ದ ಹಾಗೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವ್ಯಾಯಮಗಳನ್ನೆಲ್ಲಾ ಮೀರಿದ್ದು
ಯೋಗ ಅಂದರೆ ರೋಗ ಮುಕ್ತಿ ಮತ್ತು ಭೋಗ ಮುಕ್ತಿ. ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಉತ್ತಮವಾಗಿ ಮಾಡುವುದು ಯೋಗ. ದೈಹಿಕ ವ್ಯಾಯಾಮಗಳೆಲ್ಲವನ್ನೂ ಮೀರಿದ್ದು ಯೋಗ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
112 ದಾರಿಗಳ ರೂಪ
ತನ್ನನ್ನು ತಾನು ಮುಕ್ತಿ ಹಾಗೂ ಯೋಗವಿದ್ಯೆ ಮೂಲಕ ಅರಿತುಕೊಳ್ಳುವ 112 ದಾರಿಗಳ ಪ್ರತೀಕವಾಗಿ ಈ 112 ಅಡಿ ಎತ್ತರದ ಶಿವನ ಮುಖವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈಗಾಗಲೇ ಪ್ರವಾಸಿ ತಾಣವಾಗಿ ಶಿವನ ಪ್ರತಿಮೆಯನ್ನು ಪ್ರವಾಸೋದ್ಯಮ ಸಚಿವಾಲಯ 'ಇನ್ ಕ್ರೆಡಿಬಲ್ ಇಂಡಿಯಾ' ಕಾರ್ಯಕ್ರಮದಲ್ಲಿ ಸೇರಿಸಿಕೊಂಡಿದೆ.
ಮಯೂರಿ ನೃತ್ಯ
ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನಲೆ ಗಾಯಕ ಕೈಲಾಶ್ ಖೇರ್, ರಾಜಸ್ಥಾನದ ಕಟ್ಲೆ ಖಾನ್ ಮತ್ತು ಇಶಾ ಕೇಂದ್ರದ ಕಲಾವಿದರು ಆಕರ್ಷಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ರಘುದೀಕ್ಷಿತ್ ಪತ್ನಿ ಹಾಗೂ ಖ್ಯಾತ ನೃತ್ಯ ಕಲಾವಿದೆ ಮಯೂರಿಯವರ ನೃತರುತ್ಯ ತಂಡದವರೂ ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಮನಸೂರೆಗೊಂಡಿತು.