ಮೋದಿಗೇ ಮೋಡಿ ಮಾಡಿದ ಚಿನ್ನಾರಿ ಈಕೆ!
ಮೋದಿಯವರನ್ನು ಸೆಳೆದ ನ್ಯಾನ್ಸಿಯಿಂದ ಹಿಡಿದು, ಮಂದಿರಕ್ಕೆ ತೆರಳಿದ ರಾಬರ್ಟ್ ವಾದ್ರಾ ವರೆಗಿನ ವಿಭಿನ್ನ ಚಿತ್ರ ಸುದ್ದಿಗಳ ಗುಚ್ಛ ಇಲ್ಲಿದೆ.
ಸೂರತ್, ಏಪ್ರಿಲ್ 18: ಹೌದು, ಮೋದಿಗೇ ಮೋಡಿ ಮಾಡಿದ ಈ ಚಿನ್ನಾರಿಯ ಹೆಸರು ನ್ಯಾನ್ಸಿ. ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಏಪ್ರಿಲ್ 17) ಸೂರತ್ ನಲ್ಲಿ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಶುಭಾಶಯ ಹೇಳಲೆಂದು ಜನಸಾಗರದ ನಡುವಲ್ಲಿ ಜಾಗ ಮಾಡಿಕೊಂಡು ಬಂದ ನಾಲ್ಕು ವರ್ಷದ ಪುಟಾಣಿ ಈಕೆ.
ಆಕೆಯ ಮುಗ್ಧ ಅಭಿಮಾನ ಕಂಡು ಹರ್ಷಗೊಂಡ ಮೋದಿ ತಮ್ಮ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಹೇಳಿ, ಆ ಪುಟ್ಟ ಬಾಲೆಯನ್ನು ಎತ್ತಿ ಮುದ್ದಾಡಿದ್ದಾರೆ. ಈ ಸುದ್ದಿಯನ್ನು ಈಗಾಗಲೇ ನೀವು 'ಒನ್ ಇಂಡಿಯಾ'ದಲ್ಲಿ ಓದಿದ್ದೀರಿ. ಎರಡು ದಿನದ ಮೊದಲು ಅಪರಿಚಿತಳಾಗಿದ್ದ ಈ ಬಾಲಕಿ ಪ್ರಧಾನಿ ಮೋದಿಯವರಿಂದಾಗಿ ಇಂದು ಸೆಲೆಬ್ರಿಟಿಯಾಗಿದ್ದಾಳೆ.[ಕಾರು ನಿಲ್ಲಿಸಿ ಬಾಲಕಿಯನ್ನು ಮಾತನಾಡಿಸಿದ ಪ್ರಧಾನಿ ಮೋದಿ]
ಮೋದಿ ಅಂಕಲ್ ಎಂದು ತೊದಲು ನುಡಿಯಲ್ಲಿ ಕರೆದು, ಪ್ರಧಾನಿ ಮೋದಿಯವರಿಂದ ಸಿಹಿಮುತ್ತು, ಮೆಚ್ಚುಗೆ, ಆಶೀರ್ವಾದಗಳನ್ನು ಪಡೆದುಕೊಂಡ ಸೂರತ್ತಿನ ಈ ಬಾಲಕಿಯ ಬಗ್ಗೆ ಆಕೆಯ ಹೆತ್ತವರೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ಬಾಲೆ ಈ ಪುಟ್ಟ ವಯಸ್ಸಿನಲ್ಲೇ ದೇಶದ ಬಗ್ಗೆ, ಪ್ರಧಾನಿಯ ಬಗ್ಗೆ ಅಪಾರ ಗೌರವ ಹೊಂದಿದ್ದರೆ, ಇದಕ್ಕೆ ವ್ಯತಿರಿಕ್ತ ಎಂಬಂಥ ಘಟನೆ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ.
ದೇಶ ಪ್ರೇಮಿಗಳಾಗಬೇಕಿದ್ದ, ದೇಶ ರಕ್ಷಣೆಯ ಹೊಣೆಹೊರಬೇಕಿದ್ದ ಕೆಲ ವಿದ್ಯಾರ್ಥಿಗಳೇ ಭದ್ರತಾ ಪಡೆಯ ಮೇಲೆ ಕಲ್ಲಿನ ದಾಳಿ ನಡೆಸಿದ್ದಾರೆ. ದೇಶ ಕಾಯುವ ಸೈನಿಕರಿಗೆ ಗೌರವ ನೀಡುವ ಬದಲು ಅವರಿಗೆ ಭಾರತೀಯರೇ ವೃಥಾ ತೊಂದರೆ ನೀಡುತ್ತಿರುವುದು ಶೋಚನೀಯವೆನ್ನಿಸಿದೆ. ನಿನ್ನೆ(ಏಪ್ರಿಲ್ 17)ಯ ಮಹತ್ವದ ಘಟನೆಗಳಿಗೆ ಸಂಬಂಧಿಸಿದ ಕೆಲವು ಚಿತ್ರಗಳು ನಿಮಗಾಗಿ ಇಲ್ಲಿವೆ.
ಮೋದಿಗೆ ಮೋಡಿ ಮಾಡಿದ ನ್ಯಾನ್ಸಿ
ಪ್ರಧಾನಿ ಮೋದಿಯವರಿಂದ ಮೆಚ್ಚುಗೆ ಪಡೆದ ನ್ಯಾನ್ಸಿ ಎಂಬ ನಾಲ್ಕು ವರ್ಷದ ಬಾಲಕಿ, ಸೂರತ್ತಿನ ತಮ್ಮ ಮನೆಯಲ್ಲಿ, ಅಮ್ಮನೊಂದಿಗೆ ಕಾಣಿಸಿಕೊಂಡಿದ್ದು ಹೀಗೆ!
ಜಮ್ಮು ಕಾಶ್ಮೀರದ
ಜಮ್ಮು ಕಾಶ್ಮೀರದ, ಶ್ರೀನಗರದ ಕೆಲ ವಿದ್ಯಾರ್ಥಿಗಳು ಭದ್ರತಾ ಪಡೆಯ ಸಿಬ್ಬಂದಿಗಳ ಮೇಲೆ ಕಲ್ಲಿನ ದಾಳಿ ನಡೆಸಿ ಕ್ಷಣಕಾಲ ಉದ್ವೇಗದ ವಾತಾವರಣ ಸೃಷ್ಟಿಸಿದರು. ಜಮ್ಮು ಕಾಶ್ಮೀರದಲ್ಲಿ ಇಂಥ ದಾಳಿಗಳು ಮಾಮೂಲೆನ್ನಿಸಿದ್ದು, ಇಲ್ಲಿ ನಮ್ಮ ಸೈನಿಕರ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇರುತ್ತದೆ.
ಕ್ರಿಕೆಟ್ ನೋಡೋಕೆ ಬಂದ್ರು ಜ್ವಾಲಾಗುಟ್ಟಾ
ನೆನ್ನೆ ಹೈದರಾಬಾದಿನ ರಾಜೀವ್ ಗಾಂಧಿ ಸ್ಟೇಡಿಯಂ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ನಡುವೆ ನಡೆದ ಐಪಿಎಲ್ 2017ರ ಪಂದ್ಯವನ್ನು ನೋಡೊಕೆ ಆಗಮಿಸಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟ ಕ್ರಿಕೆಟ್ ಆಟವನ್ನು ಕಣ್ತುಂಬಿಸಿಕೊಂಡರು.
ಇದೆಂಥ ಕಪಿ'ಚೇಷ್ಟೆ!?
ಇದು ಸೆಲ್ಫಿ ವಿತ್ ಮಂಕೀ ಕಾಲ! ಹೌದು ಜೈಪುರಕ್ಕೆ ಪ್ರವಾಸಕ್ಕೆದು ಬಂದಿದ್ದ ಒಂದು ಜೋಡಿ, ಪುಟ್ಟ ಕೋತಿ ಮರಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿತು.
ಸಂಕಟ ಬಂದಾಗ....
ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಅವರ ಮಗಳು ಪ್ರಿಯಾಂಕ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ನವದೆಹಲಿಯ ವಾಲ್ಮೀಕಿ ಮಂದಿರವೊಂದಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಲ್ಲದೆ, ಇಲ್ಲಿನ ಸಂತರ ಆಶೀರ್ವಾದವನ್ನು ಪಡೆದಿದ್ದಾರೆ. ಅವರಿಗೆ ಅನ್ನ ಸಂತರ್ಪನೆಣೆಯನ್ನೂ ಮಾಡಿದ್ದಾರೆ. ಇಷ್ಟು ದಿನವಿಲ್ಲದೆ, ಈಗ ಇದ್ದಕ್ಕಿದ್ದತೆ ಮಂದಿರಕ್ಕೆ ತೆರಳಿರುವುದು 2018 ರ ವಿಧಾನ ಸಭಾ ಚುನಾವಣೆಗಾಗಿ ಮಾಡುತ್ತಿರುವ ಗಿಮಿಕ್ಕಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ನೇಪಾಳದ ಅಧ್ಯಕ್ಷೆ ಭಾರತಕ್ಕೆ
ಭಾರತಕ್ಕೆ ಆಗಮಿಸಿರುವ ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಬಂಡಾರಿ ಅವರನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ದೆಹಲಿಯ ರಾಷ್ಟ್ರ ಪತಿ ಭವನದಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸಿದರು. .