ಅಖಿಲೇಶ್ ರನ್ನು ಪಕ್ಷದಿಂದ ಉಚ್ಚಾಟಿಸಿದ ಮುಲಾಯಂ ಸಿಂಗ್
ರಾಮ್ ಗೋಪಾಲ್ ಅವರು ಅಖಿಲೇಶ್ ಅವರ ಭವಿಷ್ಯವನ್ನು ನಾಶಗೊಳಿಸಲು ನಿಂತಿದ್ದಾರೆ. ಇದನ್ನು ಅಖಿಲೇಶ್ ಅರ್ಥ ಮಾಡಿಕೊಳ್ಳುತ್ತಿಲ್ಲ. ಪಕ್ಷಕ್ಕೆ ತಂದಿರುವ ಕುತ್ತಿನಲ್ಲಿ ಇಬ್ಬರೂ ಸಮಭಾಗಿಗಳು ಎಂದು ಮುಲಾಯಂ ಇಬ್ಬರ ಮೇಲೆ ಮುಲಾಯಂ ಹರಿಹಾಯ್ದಿದ್ದಾರೆ.
ಲಖನೌ, ಡಿಸೆಂಬರ್ 30 : ನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಮಗ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ.
ಪಕ್ಷವನ್ನು ಉಳಿಸುವ ಉದ್ದೇಶದಿಂದ ಈ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಶುಕ್ರವಾರ ಮುಲಾಯಂ ತಿಳಿಸಿದ್ದಾರೆ. ಅಖಿಲೇಶ್ ಅವರೊಂದಿಗೆ ಅವರ ಸೋದರ ಸಂಬಂಧಿ ರಾಮ್ ಗೋಪಾಲ್ ಯಾದವ್ ಅವರನ್ನೂ 6 ವರ್ಷದವರೆಗೆ ಉಚ್ಚಾಟಿಸಲಾಗಿದೆ.
ರಾಮ್ ಗೋಪಾಲ್ ಯಾದವ್ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಮತ್ತು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದರು. ಇಷ್ಟು ಮಾತ್ರವಲ್ಲ ಅಖಿಲೇಶ್ ಅವರ ದಾರಿ ತಪ್ಪಿಸುತ್ತಿದ್ದರು ಎಂದು ಮುಲಾಯಂ ಆರೋಪಿಸಿದ್ದಾರೆ. [ಎಸ್ಪಿ ವಿಭಜನೆಯನ್ನು ತಡೆಯಲು ಆ ದೇವರಿಂದಲೂ ಸಾಧ್ಯವಿಲ್ಲ!]
ರಾಮ್ ಗೋಪಾಲ್ ಯಾದವ್ ಅವರು ಅಖಿಲೇಶ್ ಅವರ ಭವಿಷ್ಯವನ್ನು ನಾಶಗೊಳಿಸಲು ನಿಂತಿದ್ದಾರೆ. ಇದನ್ನು ಅಖಿಲೇಶ್ ಅರ್ಥ ಮಾಡಿಕೊಳ್ಳುತ್ತಿಲ್ಲ. ಆದರೆ, ಪಕ್ಷಕ್ಕೆ ತಂದಿರುವ ಕುತ್ತಿನಲ್ಲಿ ಇಬ್ಬರೂ ಸಮಭಾಗಿಗಳು ಎಂದು ಮುಲಾಯಂ ಇಬ್ಬರ ಮೇಲೆ ಹರಿಹಾಯ್ದಿದ್ದಾರೆ.
ರಾಮ್ ಗೋಪಾಲ್ ಯಾದವ್ ಅವರೊಂದಿಗೆ ಪ್ರತ್ಯೇಕವಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಖಿಲೇಶ್ ಅವರು ತಮ್ಮದೇ ಪ್ರತ್ಯೇಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರು. ಈ ಬೆಳವಣಿಗೆಯಿಂದಾಗಿ ಸಮಾಜವಾದಿ ಪಕ್ಷ ಇಬ್ಭಾಗವಾಗುವುದು ಹೆಚ್ಚೂಕಡಿಮೆ ಖಚಿತವಾದಂತಾಗಿದೆ. [ಕಪ್ಪುಹಣ ಭಾರತವನ್ನು ಕಾಪಾಡಿದೆ: ಅಖಿಲೇಶ್ ಯಾದವ್!]
ರಾಮ್ ಗೋಪಾಲ್ ತಿರುಗೇಟು : ಉಚ್ಚಾಟನೆ ವಿರುದ್ಧ ತಿರುಗಿಬಿದ್ದಿರುವ ರಾಮ್ ಗೋಪಾಲ್ ಯಾದವ್ ಅವರು, ಈ ಕ್ರಮ ಅಸಂವಿಧಾನಿಕವಾಗಿದೆ. ಏಕೆಂದರೆ, ನಮಗೆ ನೋಟೀಸ್ ನೀಡಿದ ಎರಡು ಗಂಟೆಯೊಳಗೆ ಉಚ್ಚಾಟನೆ ಮಾಡಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.