ರಾಜಕೀಯ ಪಕ್ಷಗಳು ದೇಣಿಗೆ ಪಡೆಯುವುದನ್ನು ನಿಲ್ಲಿಸಬೇಕು : ಮೋದಿ
ಕಾನ್ಪುರ, ಡಿಸೆಂಬರ್ 19 : "ನಮ್ಮ ಅಜೆಂಡಾ ಏನಿದೆಯೆಂದರೆ ಕಪ್ಪು ಹಣದ ವ್ಯವಹಾರ ಬಂದ್ ಆಗಬೇಕು, ಅವರ ಅಜೆಂಡಾ ಏನಿದೆಯೆಂದರೆ ಸಂಸತ್ ಕಲಾಪವೇ ಬಂದ್ ಆಗಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳಿಗೆ ಚಾಟಿಯೇಟು ನೀಡಿದ್ದಾರೆ.
ಸೋಮವಾರ ಉತ್ತರಪ್ರದೇಶದ ಕಾನ್ಪುರದಲ್ಲಿ ಪರಿವರ್ತನ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ ಅವರು, ಅಪನಗದೀಕರಣವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಅಪ್ರಾಮಾಣಿಕರನ್ನು ಬೆಂಬಲಿಸಲು ಕೆಲವರು ಸಂಸತ್ತಿನಲ್ಲಿ ಘೋಷಣೆ ಕೂಗಿರುವುದು ದೇಶದ ಇತಿಹಾಸದಲ್ಲೇ ಮೊದಲು ಎಂದು ವ್ಯಂಗ್ಯವಾಡಿದರು.[ದೇಶದ 4 ಪ್ರಮುಖ ಹುದ್ದೆಗಳಿಗೆ ಹೊಸ ಮುಖ್ಯಸ್ಥರ ನೇಮಕ]
ಕಪ್ಪು ಹಣವನ್ನು ಸಾರಾಸಗಟಾಗಿ ನಿರಾಕರಿಸುವ ಮೂಲಕ ರಾಜಕೀಯ ಲಕ್ಷಗಳು ಇಡೀ ದೇಶಕ್ಕೆ ಮೇಲ್ಪಂಕ್ತಿ ಹಾಕಿಕೊಡಬೇಕು. ಇದು ಎಲ್ಲ ಪಕ್ಷಗಳ ಗುರುತರ ಜವಾಬ್ದಾರಿ. ಎಲ್ಲಕ್ಕಿಂತ ಹೆಚ್ಚಾಗಿ ಚುನಾವಣೆ ಹತ್ತಿರ ಬಂದಾಗ ರಾಜಕೀಯ ಪಕ್ಷಗಳು ದೇಣಿಗೆ ಪಡೆಯುವುದನ್ನು ನಿಲ್ಲಿಸಬೇಕು ಎಂದು ಮೋದಿ ರಾಜಕೀಯ ಪಕ್ಷಗಳಿಗೆ ಕಿವಿಮಾತು ಹೇಳಿದರು. ಈ ಕಿವಿಮಾತನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ರಾಜಕಾರಣಿಗಳು ಬಿಡುವುದಿಲ್ಲ ತಾನೆ?
ಚಳಿಗಾಲದ ಅಧಿವೇಶನ ಆಗುವ ಮೊದಲೇ, ನಮ್ಮ ಪಕ್ಷದವರು ಭೇಟಿಯಾಗಿ, ರಾಜಕೀಯ ಪಕ್ಷಗಳಿಗೆ ದೊರೆಯುವ ದೇಣಿಗೆಯ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚೆಯಾಗಬೇಕು ಎಂದು ನಿರ್ಧರಿಸಿದ್ದೆವು. ಆದರೆ, ವಿರೋಧ ಪಕ್ಷಗಳು ಈ ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ ಎಂದು ವಾಗ್ಬಾಣ ಬಿಟ್ಟರು.
ಅಪನಗದೀಕರಣದತ್ತ ಹೊರಳಿದ ಅವರು, ನವೆಂಬರ್ 8ಕ್ಕಿಂತ ಮೊದಲು ಸಾವಿರ ರುಪಾಯಿ ಚಲಾವಣೆಯಲ್ಲಿದ್ದಾಗ 500 ಮತ್ತು 100 ರುಪಾಯಿ ನೋಟುಗಳಿಗೆ ಮಹತ್ವ ನೀಡುತ್ತಿರಲಿಲ್ಲ. ಈಗ ನವೆಂಬರ್ 8ರ ನಂತರ ನೂರು ರುಪಾಯಿಯ ಮಹತ್ವವೂ ಗೊತ್ತಾಗಿದೆ ಎಂದರು.
ಗೂಂಡಾಗಿರಿಯಿಂದ ಉತ್ತರಪ್ರದೇಶದ ಜನರು ಬೇಸತ್ತು ಹೋಗಿದ್ದಾರೆ. ಇಂಥ ಗೂಂಡಾಗಳಿಗೆ ರಾಜ್ಯ ಸರಕಾರದಿಂದ ಬೆಂಬಲ ಸಿಗುತ್ತಿದೆ. ಸರಕಾರವೇ ಬದಲಾಗದ ಹೊರತು ಇಂಥ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಮಾಜವಾದಿ ಪಕ್ಷವನ್ನು ಮೋದಿ ಟೀಕಿಸಿದರು.