ಪ್ರವಾಹ ಪೀಡಿತ ಗುಜರಾತಿಗೆ ಮೋದಿಯಿಂದ ರೂ. 500 ಕೋಟಿ ಪರಿಹಾರ
ಅಹಮದಾಬಾದ್, ಜುಲೈ 25: ಪ್ರವಾಹ ಪೀಡಿತ ಗುಜರಾತ್ ರಾಜ್ಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ರೂಪಾಯಿ 500 ಕೋಟಿಗಳ ತಕ್ಷಣದ ಪರಿಹಾರ ಘೋಷಿಸಿದ್ದಾರೆ.
ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳು ಭಾರೀ ಪ್ರವಾಹಕ್ಕೆ ಗುರಿಯಾಗಿದ್ದು ಗುಜರಾತ್ ರಾಜ್ಯದಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಜತೆ ಮೋದಿ ಇಂದು ವೈಮಾನಿಕ ಸಮೀಕ್ಷೆ ನಡೆಸಿದರು.
ನಂತರ ಅಹಮದಾಬಾದ್ ನಲ್ಲಿ ಮಾತನಾಡಿದ ಮೋದಿ, "ರಾಜ್ಯದ ಅಭಿವೃದ್ಧಿಗೆ ಪ್ರವಾಹ ಅಡ್ಡಿಯಾಗುವುದಿಲ್ಲ. ಗುಜರಾತಿನ ಜನರು ಗಟ್ಟಿ ಮನಸ್ಸುಳ್ಳವರು," ಎಂದು ಹೇಳಿದರು. ಇದೇ ವೇಳೆ ಅವರು ರಾಜ್ಯ ವಿಕೋಪ ನಿರ್ವಹಣಾ ಇಲಾಖೆಗೆ ಕೇಂದ್ರದಿಂದ ರೂಪಾಯಿ 500 ಕೋಟಿಗೂ ಹೆಚ್ಚು ಹಣ ತಕ್ಷಣದ ಪರಿಹಾರ ರೂಪದಲ್ಲಿ ನೀಡಲಾಗುವುದು ಎಂದು ಹೇಳಿದರು.
ಇನ್ನು ಪ್ರವಾಹದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ 2 ಲಕ್ಷ ಹಾಗೂ ಗಾಯಗೊಂಡವರ ಕುಟುಂಬಕ್ಕೆ 50 ಸಾವಿರ ಪರಿಹಾರವನ್ನೂ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಘೋಷಿಸಿದರು.
#WATCH: PM Modi undertook aerial survey of flood affected areas in Gujarat today https://t.co/D4JTKENt4R
— ANI (@ANI_news) July 25, 2017
ಇದೇ ವೇಳೆ ಗುಜರಾತಿಗರಿಗೆ ಧೈರ್ಯ ಹೇಳಿದ ಪ್ರಧಾನಿ ಮೋದಿ, "ಕೇಂದ್ರದಿಂದ ಸಾಧ್ಯವಾಗುವ ಎಲ್ಲಾ ಅಗತ್ಯ ನೆರವನ್ನೂ ರೈತರಿಗೆ ನೀಡಲಾಗುವುದು. ಇನ್ನೂ ಹೆಚ್ಚಿನ ಮಳೆ ಬಂದರೂ ಚಿಂತಿಸಬೇಕಿಲ್ಲ. ಪರಿಹಾರ ಕಾರ್ಯಾಚರಣೆಯನ್ನು ಮತ್ತಷ್ಟು ಬಿರುಸುಗೊಳಿಸುವುದಾಗಿ ," ಹೇಳಿದರು.