ಹಣಕಾಸು ವ್ಯವಸ್ಥೆ ಮೂಳೆ ಮುರಿದ ಪ್ರಧಾನಿ ಮೋದಿ: ರಾಹುಲ್
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಕೇಂದ್ರ ಸರಕಾರದ ಕ್ರಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನವದೆಹಲಿ, ಜನವರಿ 11: ನವದೆಹಲಿಯಲ್ಲಿ ಬುಧವಾರ ನಡೆದ ಜನ ವೇದನಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಡವಿಕೊಳ್ಳುವಂಥ ಭಾಷಣ ಮಾಡಿದ್ದಾರೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ. ದೇಶದ ಹಣಕಾಸು ವ್ಯವಸ್ಥೆಯ ಮೂಳೆಯನ್ನೇ ಪ್ರಧಾನಿ ಮೋದಿ ಮುರಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಧಾನಿಗಳು ಹಾಗೂ ಬಿಜೆಪಿ ಕೇಳುತ್ತಲೇ ಬಂದಿದ್ದು, ಈ ದೇಶದ ಜನಕ್ಕೆ ಅದಕ್ಕೆ ಉತ್ತರ ಗೊತ್ತಿದೆ ಎಂದಿದ್ದಾರೆ. ಕಾಂಗ್ರೆಸ್ ನಾಯಕರು ಈ ದೇಶಕ್ಕಾಗಿ ಹರಿಸಿದ ರಕ್ತ, ಕಣ್ಣೀರಿನ ಬಗ್ಗೆ ಜನ ಅರ್ಥ ಮಾಡಿಕೊಳ್ಳುತ್ತಾರೆ. ಒಂದಾದ ಮೇಲೆ ಒಂದು ರಾಜ್ಯಗಳನ್ನು ನಾನು ಹೆಸರಿಸಬಲ್ಲೆ.[ಲಂಡನ್ನಿನಿಂದಲೇ ಚಿಯರ್ಸ್ ಹೇಳಲಿದ್ದಾರೆ ರಾಹುಲ್ ಗಾಂಧಿ]
ಅಲ್ಲೆಲ್ಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ತಮ್ಮ ಬೆವರು, ರಕ್ತ ಹರಿಸಿದ್ದಾರೆ. ಈ ಎಪ್ಪತ್ತು ವರ್ಷದಲ್ಲಿ ನಾವೇನು ಮಾಡಿದ್ವಿ ಅಥವಾ ಮಾಡಿಲ್ಲ ಅನ್ನೋದು ವಿವರಿಸುವ ಅಗತ್ಯ ಇಲ್ಲ. ಪ್ರಧಾನಿ ಮೋದಿ ಅವರು ಈ ಎರಡೂವರೆ ವರ್ಷದಲ್ಲಿ ನಾವು ಮಾಡಲಾಗದ್ದನ್ನು ಮಾಡಿದ್ದಾರಾ? ಎಲ್ಲ ಸಂವಿಧಾನ ಸಂಸ್ಥೆಗಳನ್ನು ಬಿಜೆಪಿ ಬಲಹೀನ ಮಾಡಿದೆ. ಪ್ರಧಾನಿಗಳು ಬಡವರು, ರೈತರ ಜತೆಗೆ ಸಮಯ ಕಳೆಯಬೇಕು. ಏಕೆ ದಿಢೀರ್ ಹಳ್ಳಿಗಳಿಗೆ ವಾಪಸಾಗುತ್ತಿದ್ದೀರಿ ಎಂದು ಪ್ರಶ್ನಿಸಬೇಕು ಎಂದಿದ್ದಾರೆ ರಾಹುಲ್.
ನಾನು ಇಂದು ದಿನಪತ್ರಿಕೆಗಳಲ್ಲಿ ಓದಿದೆ. ಪ್ರಧಾನಿ ಮೋದಿ ಹೇಳಿದ್ದಾರೆ: ಭಾರತದಲ್ಲಿ ಬದಲಾವಣೆ ತರ್ತೀನಿ ಅಂತ. ಅದರೆ ಅವರನ್ನೇ ಪ್ರಶ್ನಿಸಿಕೊಳ್ಳಲಿ ಯಾಕೆ ದಿಢೀರ್ ಎಂದು ವಾಹನಗಳ ಮಾರಾಟ ಕುಸಿದಿದೆ? ಅಚ್ಛೇ ದಿನ್ ಬರಬೇಕು ಅಂದರೆ ಕಾಂಗ್ರೆಸ್ 2019ರಲ್ಲಿ ಅಧಿಕಾರಕ್ಕೆ ಬರಬೇಕು ಎಂದಿದ್ದಾರೆ ರಾಹುಲ್.
ದೇಶದ ಜನ ಅಚ್ಛೇ ದಿನ್ ಯಾವಾಗ ಬರುತ್ತದೆ ಎಂದು ಅಚ್ಚರಿಯಿಂದ ಎದುರು ನೋಡುತ್ತಿದ್ದಾರೆ. ನಾನು ಅವರಿಗೆ ಹೇಳ್ತಿದೀನಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಚ್ಛೇ ದಿನ್ ಬರುತ್ತದೆ. ಮಾಧ್ಯಮದವರು ನನ್ನ ಬಳಿ ಬಂದು ಹೇಳ್ತಾರೆ, ಅವರೇನು ಹೇಳಬೇಕು ಎಂದು ಬಯಸಿದ್ದಾರೋ ಅದನ್ನು ಹೇಳಲಿಕ್ಕೆ ಸಾಧ್ಯವಾಗ್ತಿಲ್ಲ ಎಂದು ಆರೋಪಿಸಿದ್ದಾರೆ ರಾಹುಲ್ ಗಾಂಧಿ.[ರಾಹುಲ್ ಕೇಳಿದ 5 ಪ್ರಶ್ನೆಗಳಿಗೆ ಮೋದಿ ಉತ್ತರಿಸುವರೆ?]
ಎರಡೂವರೆ ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಗೆ ಕೈ ಜೋಡಿಸಿ ಎಂದರು. ಆ ನಾಟಕ ಕೆಲ ದಿನ ಮುಂದುವರಿಯಿತು. ಆ ನಂತರ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ...ಎಂದು ಅವರು ಛೇಡಿಸಿದರು. ವಾಹನ ಮಾರಾಟ ವಲಯ ಶೇ 60ರಷ್ಟು ಕುಸಿದಿದೆ. ದೇಶ ಹದಿನಾರು ವರ್ಷ ಹಿಂದಕ್ಕೆ ಹೋಗಿದೆ ಎಂದು ಆರೋಪಿಸಿದರು.
ನರೇಗಾಗೆ ಬೇಡಿಕೆ ಯಾಕೆ ಜಾಸ್ತಿಯಾಗಿದೆ, ಜನರೇಕೆ ಹಳ್ಳಿಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಪ್ರಧಾನಿಗಳೇ ಪ್ರಶ್ನಿಸಿಕೊಳ್ಳಬೇಕು. ಅವರು ನೀವು ಯಾರು ಇದೆಲ್ಲ ಕೇಳೋದಿಕ್ಕೆ ಅಂತಾರೆ. ಹಾಗಿದ್ದರೆ ಈ ದೇಶಕ್ಕೆ ನರೇಂದ್ರ ಮೋದಿ ಹಾಗೂ ಮೋಹನ್ ಭಾಗವತ್ ಇದ್ದರೆ ಸಾಕಾ? ನಾವು ಹಿಂದೂಸ್ತಾನದ ಧ್ವನಿಯನ್ನು ಕಾಪಾಡಿಕೊಳ್ತೀವಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.