ಕೇಂದ್ರ ಸಚಿವರ ಕಳೆದ ಮೂರು ತಿಂಗಳ ಪ್ರವಾಸ ವಿವರ ಕೇಳಿದ ಮೋದಿ
ಸೋಮವಾರದ ಒಳಗೆ ಈ ವಿವರಗಳನ್ನು ಸಲ್ಲಿಸುವಂತೆ ಎಲ್ಲಾ ಸಚಿವಾಲಯಗಳಿಗೆ ಪ್ರಧಾನಿ ಕಚೇರಿಯಿಂದ ಸೂಚನೆ ರವಾನೆ. ಗ್ರಾಮೀಣಾಭಿವೃದ್ಧಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ವರದಿ ಒಟ್ಟುಗೂಡಿಸುವ ಜವಾಬ್ದಾರಿ.
ನವದೆಹಲಿ, ಫೆಬ್ರವರಿ 12: ಅಪನಗದೀಕರಣದ ನಂತರದ ಅವಧಿಯಲ್ಲಿ ತಮ್ಮ ಮಂತ್ರಿಮಂಡಲದ ಸಚಿವರು ಜನರತ್ತ ತೆರಳಿ ಕೇಂದ್ರ ಸರ್ಕಾರವು ಯಾವ ಉದ್ದೇಶದಿಂದ ಅಪನಗದೀಕರಣದಂತಹ ದಿಟ್ಟ ನಿರ್ಧಾರ ಕೈಗೊಂಡಿದೆ ಎಂಬುದನ್ನು ಮನದಟ್ಟು ಮಾಡುವ ಪ್ರಯತ್ನಕ್ಕೆ ಪ್ರಧಾನಿ ಮೋದಿ ಕೈ ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು, ತಮ್ಮ ಸರ್ಕಾರದ ಸಚಿವರಿಗೆ ಕಳೆದ ಮೂರು ತಿಂಗಳಲ್ಲಿ ಅವರು ಕೈಗೊಂಡಿರುವ ಪ್ರವಾಸಗಳ ವಿವರಗಳನ್ನು ನೀಡುವಂತೆ ಸೂಚಿಸಿದ್ದಾರೆ.
ಸೋಮವಾರದ ಒಳಗೆ ಈ ವಿವರಗಳನ್ನು ಸಲ್ಲಿಸುವಂತೆ ಎಲ್ಲಾ ಸಚಿವಾಲಯಗಳಿಗೆ ಪ್ರಧಾನಿ ಕಚೇರಿಯಿಂದ ಸೂಚನೆ ಹೋಗಿದೆ. ಗ್ರಾಮೀಣಾಭಿವೃದ್ಧಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ಈ ಎಲ್ಲಾ ಸಚಿವಾಲಯಗಳಿಂದ ಬರುವ ಪ್ರವಾಸದ ವಿವರಗಳನ್ನು ಒಟ್ಟು ಮಾಡಿ ತಮಗೆ ನೀಡುವಂತೆ ಮೋದಿ ಸೂಚಿಸಿದ್ದಾರೆ.
ಮೂಲಗಳ ಪ್ರಕಾರ, ಕಳೆದ ಮೂರು ತಿಂಗಳ ಅವಧಿಯೆಂದರೆ, ವಿಶೇಷವಾಗಿ ತಮ್ಮ ಮಂತ್ರಿ ಮಂಡಲದ ಸಚಿವರು ಕೇವಲ ಕಚೇರಿಯಲ್ಲೇ ದಿನದೂಡುತ್ತಿದ್ದಾರೆಯೇ ಅಥವಾ ತಮ್ಮ ಕ್ಷೇತ್ರಗಳಿಗೆ ತೆರಳಿ ಜನಪರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆಯೇ ಎಂಬುದನ್ನು ಅರಿಯಲೂ ಮೋದಿ ಈ ತಂತ್ರಗಾರಿಕೆಯನ್ನು ಉಪಯೋಗಿಸಿದ್ದಾರೆನ್ನಲಾಗಿದೆ.