ಶಿರಡಿ ಸಾಯಿಬಾಬಾನ ಸನ್ನಿಧಾನದಲ್ಲಿ ನಡೆಯಿತಂತೆ ಪವಾಡ!
ಮುಂಬೈ ಡಿ 10 : ಆಂಜನೇಯನ ಕಣ್ಣಲ್ಲಿ ನೀರು ಬರುವುದು, ಗಣೇಶ ಹಾಲು ಹೀರುವುದು..ಹೀಗೆ ಹಲವಾರು ಪವಾಡದ ಸುದ್ದಿಯನ್ನು ಓದುತ್ತಿರುತ್ತೇವೆ. ಈ ಸಾಲಿಗೆ ಇನ್ನೊಂದು ಸೇರ್ಪಡೆಯಾಗಿದೆ. ಈ ಪವಾಡದ ಸುದ್ದಿ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದಿದ್ದು.
ವಿಶ್ವಾದ್ಯಂತ ಕೋಟ್ಯಾಂತರ ಭಕ್ತಾದಿಗಳನ್ನು ಹೊಂದಿರುವ ಶಿರಡಿ ಸಾಯಿಬಾಬಾ ದೇವಸ್ಥಾನದ ಆವರಣದಲ್ಲಿ ಈ ಪವಾಡ ನಡೆದಿದೆ.
ದೇವಾಲಯದ ಭೋಜನಶಾಲೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಾಯಿಬಾಬಾ ಮೂರ್ತಿಯ ಬಲಗೈ ಬೆರಳಿನಿಂದ ನೀರು ಚಿಮ್ಮುತ್ತಿತ್ತೆಂದು ಸುದ್ದಿಯಾಗಿದೆ. (ತಿರುಪತಿ ಶ್ರೀನಿವಾಸ ಮೂರ್ತಿಯ ವಿಸ್ಮಯ)
ಮಂಗಳವಾರ (ಡಿ 8) ಎಂದಿನಂತೆ ಕೆಲಸ ನಿರ್ವಹಿಸಲು ಭೋಜನಶಾಲೆಗೆ ಹೋಗಿದ್ದ ದೇವಾಲಯದ ಅಡುಗೆ ಭಟ್ಟರಿಗೆ ಈ ಪವಾಡದ ಅನುಭವವಾಗಿದೆ.
ಸುಮಾರು ಮೂವತ್ತು ನಿಮಿಷಗಳ ಕಾಲ ಬಾಬಾನ ಮೂರ್ತಿಯಿಂದ ನೀರು ಚಿಮ್ಮುತ್ತಿರುವುದಕ್ಕೆ ಅಡುಗೆಕೋಣೆಯ ಸಿಬ್ಬಂದಿಗಳು ಸಾಕ್ಷಿಯಾಗಿದ್ದಾರೆಂದು ಶಿರಡಿ ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಶಿರಡಿ ದೇವಾಲಯದಲ್ಲಿ ನಡೆದಿದ ಎನ್ನಲಾದ ಈ ಪವಾಡದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯಕ್ಕೆ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆಯಂತೆ. (ಶಿರಡಿ ಸಾಯಿಬಾಬಾ ಕಣ್ಣು ತೆರೆದಿದ್ದು ಸುಳ್ಳೇಸುಳ್ಳು)
ಈ ವಿಡಿಯೋಗಳನ್ನ ನೋಡಿದ ಜನರು ತಂಡೋಪತಂಡವಾಗಿ ಶಿರಡಿಗೆ ಬಂದು ಮೂರ್ತಿಯಿಂದ ಮತ್ತೆ ನೀರು ಚಿಮ್ಮುವ ಪವಾಡ ಕಾಣಸಿಗುತ್ತದೋ ಎಂದು ಕಾತುರದಿಂದ ಕಾಯುತ್ತಿದ್ದಾರೆಂದು ಜೀನ್ಯೂಸ್ ವರದಿ ಮಾಡಿದೆ.