ಲೈಂಗಿಕ ದೌರ್ಜನ್ಯ ಆರೋಪ, ಮೇಘಾಲಯ ರಾಜ್ಯಪಾಲ ರಾಜೀನಾಮೆ
ಶಿಲ್ಲಾಂಗ್, ಜನವರಿ 27: ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೇಘಾಲಯ ರಾಜ್ಯಪಾಲ ವಿ.ಷಣ್ಮುಘನಾಥನ್ ರಾಜೀನಾಮೆ ಸಲ್ಲಿಸಿದ್ದಾರೆ. ಷಣ್ಮುಘನಾಥನ್ ಅವರನ್ನು ಆ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿ ರಾಜ ಭವನದ ಉದ್ಯೋಗಿಗಳು ಪ್ರತಿಭಟನೆ ನಡೆಸಿದ ಕೆಲ ಗಂಟೆಗಳಲ್ಲಿ ರಾಜೀನಾಮೆ ಸುದ್ದಿ ಹೊರಬಿದ್ದಿದೆ.
ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ರಾಜ ಭವನದ ಉದ್ಯೋಗಿಗಳು ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಪತ್ರ ಬರೆದು, ಷಣ್ಮುಘನಾಥನ್ ಅವರನ್ನು ರಾಜ್ಯಪಾಲ ಸ್ಥಾನದಿಂದ ತೆಗೆಯಬೇಕು. ಅವರಿಂದ ರಾಜ್ಯಪಾಲ ಸ್ಥಾನದ ಘನತೆ ಹಾಳಾಗುತ್ತಿದೆ ಎಂದು ತಿಳಿಸಿದ್ದರು. ಆ ಪತ್ರಕ್ಕೆ 98 ಉದ್ಯೋಗಿಗಳು ಸಹಿ ಮಾಡಿದ್ದರು.[ರಾಜಭವನ ಲೇಡೀಸ್ ಕ್ಲಬ್ ಮಾಡಿದ ಆರೋಪ: ಮೇಘಾಲಯ ರಾಜ್ಯಪಾಲ ರಾಜಿನಾಮೆ]
ಪತ್ರದ ನಕಲು ಪ್ರತಿಯೊಂದನ್ನು ಮೇಘಾಲಯದ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರಿಗೂ ಕಳುಹಿಸಿದ್ದರು. ರಾಜಭವನಕ್ಕೆ ಮಹಿಳೆಯರನ್ನು ಮಾತ್ರ ನೇಮಿಸುತ್ತಿದ್ದಾರೆ ಎಂಬುದು ಆರೋಪವಾಗಿತ್ತು. ಲೈಂಗಿಕ ದೌರ್ಜನ್ಯವೂ ಸೇರಿದಂತೆ ಆ ಪತ್ರದಲ್ಲಿ ಹನ್ನೊಂದು ಆರೋಪಗಳನ್ನು ಮಾಡಲಾಗಿತ್ತು.
ಜನವರಿ 24ರಂದು ಮಾಧ್ಯಮವೊಂದರಲ್ಲಿ ಬಂದಿದ್ದ ಆರೋಪದ ಬಗ್ಗೆ ಗಮನ ಸೆಳೆದಿದ್ದು, ರಾಜಭವನದಲ್ಲಿನ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿತ್ತು. ಷಣ್ಮುಘನಾಥನ್ ಅವರು 2016ರ ಮೇ ತಿಂಗಳಲ್ಲಿ ಮೇಘಾಲಯ ರಾಜ್ಯಪಾಲರಾಗಿ ನೇಮಕವಾಗಿದ್ದರು.