ರಾಷ್ಟ್ರಪತಿ ಚುನಾವಣೆಯಲ್ಲಿ ಮೀರಾ ಕುಮಾರ್ ಗೂ ಗೆಲ್ಲುವ ಅವಕಾಶವಿದೆ!
ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀರಾ ಕುಮಾರ್ ಅವರಿಗೂ ಗೆಲುವು ಪಡೆಯುವ ಅವಕಾಶಗಳಿವೆ. ಚುನಾವಣೆಗೆ ಇನ್ನೂ ಮೂರು ವಾರಗಳ ಕಾಲಾವಕಾಶವಿದೆ.
ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಹಾಗೂ ಯುಪಿಎ ಬಣಗಳ ನಡುವೆ ಬಿರುಸಿನ ಸ್ಪರ್ಧೆ ಶುರುವಾಗಿದೆ. ಈಗಾಗಲೇ ಎರಡೂ ಕಡೆಯಿಂದ ಅಭ್ಯರ್ಥಿಗಳ ಹೆಸರುಗಳು ಪ್ರಕಟಗೊಂಡಿವೆ.
ಬಿಜೆಪಿ ನೇತೃತ್ವದ ಎನ್ ಡಿಎ ಕಡೆಯಿಂದ ರಾಮ್ ನಾಥ್ ಕೋವಿಂದ್ ಅವರು ಕಣಕ್ಕಿಳಿದಿದ್ದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಕಡೆಯಿಂದ ಮೀರಾ ಕುಮಾರ್ ಕಣಕ್ಕಿಳಿದಿದ್ದಾರೆ.
ರಾಷ್ಟ್ರಪತಿ ಚುನಾವಣೆ ಲೆಕ್ಕಾಚಾರ: ಬಿಜೆಪಿಗೆ ಎಷ್ಟು, ಇತರರಿಗೆ ಎಷ್ಟು?
ಮೇಲ್ನೋಟಕ್ಕೆ ಬಿಜೆಪಿ ಬೆಂಬಲವಿರುವ ಕೋವಿಂದ್ ಅವರೇ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸ್ಪಷ್ಟ. ಆದರೆ ಮೀರಾ ಕುಮಾರ್ ಅವರು ಖಂಡಿತವಾಗಿಯೂ ಸೋಲುತ್ತಾರೆ ಎಂಬಂತೇನೂ ಇಲ್ಲ.
ರಾಷ್ಟ್ರಪತಿ ಚುನಾವಣೆ: ಮೋದಿ ಸಮ್ಮುಖದಲ್ಲಿ ಕೋವಿಂದ್ ನಾಮಪತ್ರ ಸಲ್ಲಿಕೆ
ಹಾಗಾದರೆ, ಮೀರಾ ಕುಮಾರ್ ಅವರಿಗೂ ಗೆಲುವು ಪಡೆಯುವ ಅವಕಾಶ ಧಾರಾಳವಾಗಿದೆಯಾ? ಹಾಗಾದರೆ, ಅವರು ಹೇಗೆ ಗೆಲ್ಲಲು ಸಾಧ್ಯ ಎಂಬ ಕೆಲವಾರು ವಿಚಾರಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿ ನಿಮಗಾಗಿ.
ಕೋವಿಂದ್ ಬೆನ್ನಿಗಿವೆ ಶೇ. 60ರಷ್ಟು ಮತ
ಬಿಜೆಪಿಗೆ ಜೆಡಿಯು, ಬಿಜೆಡಿ, ಟಿಆರ್ ಎಸ್, ಎಐಎಡಿಎಂಕೆ, ವೈಎಸ್ ಆರ್ ಪಕ್ಷಗಳು ಸೇರಿದಂತೆ ಹಲವಾರು ಚಿಕ್ಕ ಪುಟ್ಟ ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡಿವೆ. ಇದು ಹಾಲಿ ಇರುವ 10,98,882 ಮತಗಳಲ್ಲಿ ಶೇ. 60 ಮತಗಳನ್ನು ಕೋವಿಂದ್ ಪಾಲಿಗೆ ಹರಿದುಬರುವುದನ್ನು ತೋರಿಸುತ್ತದೆ.
'ಕೈ' ಕಡೆಗೆ ಶೇ. 40ರಷ್ಟು ಮತ ಮಾತ್ರ
ಇನ್ನು, ಕಾಂಗ್ರೆಸ್ ಸಂಗಡ ಬಿಎಸ್ ಪಿ, ಎಸ್ ಪಿ ಗಳಂಥ ದೊಡ್ಡ ಪಕ್ಷಗಳು ಸೇರಿದಂತೆ ಕೆಲವಾರು ಚಿಕ್ಕ ಪುಟ್ಟ ಪಕ್ಷಗಳೂ ಇವೆ. ಆದರೆ, ಇವು ಒಟ್ಟಾರೆ ಮತಗಳ ಸಂಖ್ಯೆಯಲ್ಲಿ ಶೇ. 40ರಷ್ಟು ಭಾಗ ಹೊಂದಿವೆ. ಈ ಲೆಕ್ಕಾಚಾರ ಮೀರ್ ಅವರನ್ನು ಖಂಡಿತವಾಗಿಯೂ ಸೋಲಿಸುತ್ತವೆ ಎಂಬರ್ಥ ಕೊಡುತ್ತವೆ. ಆದರೆ, ಸ್ವಲ್ಪ ತಾಳಿರಿ. ವಿಚಾರ ಇನ್ನೂ ಇದೆ.
ನಿತೀಶ್ ನಡೆ ಮೇಲೆ ಎಲ್ಲರ ಗಮನ
ರಾಷ್ಟ್ರಪತಿ ಚುನಾವಣೆ ಜುಲೈ 17ರಂದು ನಡೆಯಲಿದೆ. ಅಂದರೆ, ಯುಪಿಎ ಅಂಗಪಕ್ಷಗಳಿಗೆ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಬೇಕಾದ ಕಾರ್ಯತಂತ್ರಗಳನ್ನು ರಚಿಸಲು ಇನ್ನೂ ಸಾಕಷ್ಟು ಸಮಯಾವಕಾಶವಿದೆ. ಈಗಾಗಲೇ, ಬಿಹಾರದ ಮಗಳಾದ ಮೀರಾ ಕುಮಾರ್ ಅವರನ್ನು ಬೆಂಬಲಿಸುವಂತೆ ಲಾಲು ಪ್ರಸಾದ್ ಯಾದವ್ ಅವರು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (ಜೆಡಿಯು) ಅವರನ್ನು ಒತ್ತಾಯಿಸುತ್ತಿದ್ದಾರೆ. ಇದು ಫಲಪ್ರದವಾದರೆ, ನಿತೀಶ್ ಕುಮಾರ್ ತಮ್ಮ ನಿಷ್ಠೆಯನ್ನು ಎನ್ ಡಿಎ ಯಿಂದ ಯುಪಿಎ ಕಡೆಗೆ ತಿರುಗಿಸಿದರೆ ಅಲ್ಲಿಗೆ ಯುಪಿಎ ಬಣಕ್ಕೆ ಮತ್ತಷ್ಟು ಬಲ ಬಂದಂತಾಗುತ್ತದೆ.
ಇವರ ಮೇಲೆ ಕಾಂಗ್ರೆಸ್ ಸಾಧಿಸಬೇಕಿದೆ ಹತೋಟಿ
ಇದರೊಂದಿಗೆ ಸುಮಾರು ಒಂದೂವರೆ ಲಕ್ಷದಷ್ಟು ಮತಗಳು ಎನ್ ಡಿಎಗೆ ಬೆಂಬಲಿಸಬೇಕೋ, ಯುಪಿಎಗೆ ಬೆಂಬಲಿಸಬೇಕೋ ಎಂಬ ದ್ವಂದ್ವದಲ್ಲಿವೆ. ಈ ಮತದಾರರನ್ನು ಕಾಂಗ್ರೆಸ್ ಪಕ್ಷ ತನ್ನ ಕಡೆಗೆ ಒಲಿಸಿಕೊಂಡಿದ್ದೇ ಆದಲ್ಲಿ ಕೋವಿಂದ್ ಅವರ ಸೋಲು ಗ್ಯಾರಂಟಿ.
ಅದೃಷ್ಟವಿದ್ದರೆ ಮೀರಾ ಕುಮಾರ್ ಗೆಲುವು ಖಚಿತ
ಚುನಾವಣೆಯೂ ಒಂಥರಾ ಕ್ರಿಕೆಟ್ ಪಂದ್ಯವಿದ್ದಂತೆ. ಗೆಲುವು ಯಾರ ಕಡೆಗಾದರೂ ತಿರುಗುವ ಅವಕಾಶಗಳು ಅಗಾಧವಾಗಿ ಇರುತ್ತವೆ. 1969ರಲ್ಲಿ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ದೊಡ್ಡ ಬೆಂಬಲದೊಂದಿಗೆ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದ ನೀಲಂ ಸಂಜೀವ ರೆಡ್ಡಿ, ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಿ.ವಿ. ಗಿರಿ ಅವರ ವಿರುದ್ಧ ಸೋಲು ಕಾಣಬೇಕಾಗಿತ್ತು. ಆ ಕಾಲ ಬೇರೆ, ಈ ಕಾಲ ಬೇರೆ ಎಂದು ಹೇಳಬಹುದಾದರೂ, ಅದೃಷ್ಟ ಎನ್ನುವುದು ಮೀರಾ ಅವರ ಪಾಲಿಗಿದ್ದರೆ ಅವರ ಗೆಲುವು ತಪ್ಪಿಸಲು ಯಾರಿಂದಾದೀತು?