'ಕರ್ನಾಟಕದಿಂದ ಬೀಫ್ ತರಿಸ್ತೀನಿ': ಪರಿಕ್ಕರ್ ರಾಜೀನಾಮೆಗೆ VHP ಆಗ್ರಹ
ಪಣಜಿ, ಜುಲೈ 19: "ಗೋವಾದಲ್ಲಿ ಗೋ ಮಾಂಸಕ್ಕೆ ಕೊರತೆ ಉಂಟಾದರೆ ಕರ್ನಾಟಕದಿಂದ ಆಮದು ಮಾಡಿಕೊಳ್ಳುವ ಆಯ್ಕೆಯನ್ನು ಸರಕಾರ ಮುಕ್ತವಾಗಿಟ್ಟಿದೆ," ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಈ ಮೂಲಕ ಬಿಜೆಪಿಯ ಮುಖ್ಯಮಂತ್ರಿ ಎಲ್ಲರ ಹುಬ್ಬೇರಿಸಿದ್ದಾರೆ.
ಇದೀಗ ಮನೋಹರ್ ಪರಿಕ್ಕರ್ ರಾಜೀನಾಮೆ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿ.ಎಚ್.ಪಿ) ಆಗ್ರಹಿಸಿದೆ. ಈ ಕುರಿತು ಹೇಳಿಕೆ ನೀಡಿರುವ ವಿ.ಎಚ್.ಪಿ ಯ ಡಾ. ಸುರೇಂದ್ರ ಜೈನ್ ಪರಿಕ್ಕರ್ ಬಿಜೆಪಿಯ ಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಹೇಳಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಪರಿಕ್ಕರ್ ,"ರಾಜ್ಯದಲ್ಲಿ ಮಾಂಸಕ್ಕೆ ಕೊರತೆಯಾಗದಿರಲು ಬೆಳಗಾವಿಯಿಂದ ಆಮದು ಮಾಡಿಕೊಳ್ಳುವ ದಾರಿಯನ್ನು ಸರಕಾರ ಮುಚ್ಚಿಲ್ಲ," ಎಂದು ಹೇಳಿದ್ದಾರೆ.
https://t.co/zXkpEddbws Has #BJP become #Beaf Joy Party? #Parrikar should resign immediately to wash the face of #BJP .
— Dr.Surendra Jain (@drskj01) July 19, 2017
"ಅಧಿಕೃತ ಮತ್ತು ಸರಿಯಾದ ವೈದ್ಯರಿಂದ ಹೊರ ರಾಜ್ಯಗಳ ಗೋಮಾಂಸವನ್ನು ಪ್ರಮಾಣೀಕರಿಸುವ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ," ಎಂದೂ ಪರಿಕ್ಕರ್ ಹೇಳಿದ್ದಾರೆ. ಬಿಜೆಪಿ ಶಾಸಕ ನೀಲೇಶ್ ಕ್ಯಾಬ್ರಲ್ ಪ್ರಶ್ನೆಗೆ ಪರಿಕ್ಕರ್ ಈ ಉತ್ತರ ನೀಡಿದ್ದಾರೆ.
ಇನ್ನು ರಾಜ್ಯದಲ್ಲಿ ಪ್ರತಿದಿನ ಮಾನ್ಯತೆ ಪಡೆದ ಗೋವಾದ ಪೋಂಡಾದಲ್ಲಿರುವ ಕಸಾಯಿಖಾನೆಯಲ್ಲೇ 2,000 ಕೆಜಿ ಗೋ ಮಾಂಸ ಉತ್ಪಾದನೆಯಾಗುತ್ತದೆ ಎಂದು ಪರಿಕ್ಕರ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಬೇಡಿಕೆಯನ್ನು ಕರ್ನಾಟಕದಿಂದ ಗೋಮಾಂಸ ತಂದು ನೀಗಿಸಲಾಗುತ್ತದೆ ಎಂದು ಪರಿಕ್ಕರ್ ತಿಳಿಸಿದ್ದಾರೆ.
"ಇನ್ನು ರಾಜ್ಯದ ಕಸಾಯಿಖಾನೆಗಳಿಗೆ ಪಕ್ಕದ ರಾಜ್ಯದಿಂದ ಸಾಗಟ ಮಾಡುವ ಪ್ರಾಣಿಗಳಿಗೆ ನಿಯಂತ್ರಣ ಹೆರುವ ಯಾವ ಉದ್ದೇಶವೂ ಸರಕಾರಕ್ಕಿಲ್ಲ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗೋವಾದ ಆಹಾರದಲ್ಲಿ ಬೀಫ್ ನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಗೋವಾದಲ್ಲಿ ಶೇಕಡಾ 30ರಷ್ಟಿರುವ ಅಲ್ಪಸಂಖ್ಯಾತರು ನಿಯಮಿತವಾಗಿ ಗೋಮಾಂಸ ಸೇವಿಸುತ್ತಾರೆ.