20 ಕಿ.ಮೀ ಸೈಕಲ್ ಏರಿ ಬಂದ ಶರ್ಮಿಳಾಗೆ ಕೇಜ್ರಿವಾಲ್ ಕೊಟ್ರು 50,000
ಬೆಂಗಳೂರು, ಫೆಬ್ರವರಿ 19: ಮಣಿಪುರ ವಿಧಾನಸಭೆ ಅಖಾಡಕ್ಕೆ ಧುಮುಕಿರುವ ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾ ಪಕ್ಷಕ್ಕೆ ದೆಹಲಿ ಮಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 50,000 ರೂಪಾಯಿ ಧನ ಸಹಾಯ ನೀಡಿದ್ದಾರೆ.[ಸಮೀಕ್ಷೆ: ಉತ್ತರಖಂಡ, ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ]
ಇದೇ ಮೊದಲ ಬಾರಿಗೆ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಇರೋಮ್ ಶಾರ್ಮಿಳಾ ಮತ್ತು ಅವರ ಪಕ್ಷ ಪೀಪಲ್ಸ್ ರಿಸರ್ಜೆನ್ಸಸ್ ಆ್ಯಂಡ್ ಜಸ್ಟಿಸ್ ಅಲಯನ್ಸ್ (ಪಿಆರ್'ಜೆಎ) ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಹಣದ ಕೊರತೆ ಎದುರಿಸುತ್ತಿದೆ. ಈ ಕಾರಣಕ್ಕೆ ತಮ್ಮ ಕಡೆಯಿಂದ ಕೇಜ್ರಿವಾಲ್ 50,000 ರೂಪಾಯಿಗಳ ಹಣ ನೀಡಿ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.[ಮಣಿಪುರ: ಇದೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆ ಕಣಕ್ಕೆ]
ಸೈಕಲ್ ಪ್ರಚಾರ
ನಾಮ ಪತ್ರ ಸಲ್ಲಿಸಲು 20 ಕಿಲೋಮೀಟರ್ ಸೈಕಲ್ ತುಳಿದುಕೊಂಡು ಬಂದು ಸುದ್ದಿಯಾಗಿದ್ದ ಇರೋಮ್ ಶರ್ಮಿಳಾ, ಈಗ ಸೈಕಲ್ ಮೂಲಕವೇ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಹಣದ ಕೊರತೆಯೂ ಇದಕ್ಕೆ ಪ್ರಮುಖ ಕಾರಣ.
ಬದಲಾವಣೆಗೆ 10 ರೂಪಾಯಿ
ಟೆನ್ ಫಾರ್ ಎ ಚೇಂಜ್ (ಬದಲಾವಣೆಗಾಗಿ 10 ರೂಪಾಯಿ) ಹೆಸರಿನಲ್ಲಿ ಆನ್ಲೈನ್ ಆಂದೋಲನವನ್ನು ಇರೋಮ್ ಶರ್ಮಿಳಾ ಪಕ್ಷ ನಡೆಸಲಿದೆ. ದೊಡ್ಡ ಸಂಖ್ಯೆಯ ಜನ ಸಮುದಾಯವನ್ನು ತಲುಪಲು ಮತ್ತು ಚುನಾವಣೆಯಲ್ಲಿ ಪಾರದರ್ಶಕ ಧನ ವಿನಿಯೋಗ ಮಾಡಲು ಈ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಕ್ರೌಡ್ ಫಂಡಿಂಗ್ ಮೂಲಕ ಅವರ ಪಕ್ಷ 4.5 ಲಕ್ಷ ರೂಪಾಯಿ ಹಣ ಸಂಗ್ರಹಿಸಿದೆ.
|
ಕೇಜ್ರಿವಾಲ್ ಮನವಿ
ಇರೋಮ್ ಶರ್ಮಿಳಾಗೆ ತಾನು 50,000 ರೂಪಾಯಿ ನೀಡುತ್ತಿರುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಮಾತ್ರವಲ್ಲದೆ ಟ್ವಿಟ್ಟರಿನಲ್ಲಿ ಆಕೆಗೆ ಸಹಾಯ ಮಾಡಿ ಎಂದು ಮನವಿಯನ್ನೂ ಮಾಡಿದ್ದಾರೆ. ಕೇಜ್ರಿವಾಲ್ ಮನವಿಯ ನಂತರ ಹಲವಾರು ಜನ ಇರೋಮ್ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ.
ಚುನಾವಣೆ ನಂತರ ಮದುವೆ
ಚುನಾವಣೆ ಮುಗಿಯುತ್ತಿದ್ದಂತೆ ಮದುವೆಯಾಗುತ್ತಿರುವುದಾಗಿ ಇರೋಮ್ ಶರ್ಮಿಳಾ ಹೇಳಿದ್ದಾರೆ. ದೀರ್ಘ ಕಾಲದ ಗೆಳೆಯ ಗೋವಾ ಮೂಲದ ಅನಿವಾಸಿ ಭಾರತೀಯ ಡೆಸ್ಮಂಡ್ ಕೌಟಾನ್ಹೋರನ್ನು ವಿವಾಹವಾಗುತ್ತಿರುವುದಾಗಿ ಶರ್ಮಿಳಾ ಹೇಳಿದ್ದಾರೆ. 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಇರೋಮ್ ಶರ್ಮಿಳಾ ಜತೆಗಿದ್ದವರು ಈ ಡೆಸ್ಮಂಡ್ ಮಾತ್ರ.
ಸಿಎಂಗೆ ಸವಾಲ್
ಮಣಿಪುರ ಹಾಲಿ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ವಿರುದ್ದವೇ ಶರ್ಮಿಳಾ ಕಣಕ್ಕಿಳಿದಿದ್ದಾರೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಕೂಡಾ ಇದೇ ರೀತಿ ಶೀಲಾ ದೀಕ್ಷಿತ್ ವಿರುದ್ಧ ಕಣಕ್ಕಿಳಿದು ಗೆದ್ದಿದ್ದರು. ಇಲ್ಲೇನಾಗುತ್ತೋ ಕಾದು ನೋಡಬೇಕಾಗಿದೆ. ಇತ್ತೀಚೆಗೆ ಬಿಜೆಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತನಗೆ 36 ಕೋಟಿ ಆಫರ್ ಮಾಡಿತ್ತು ಎಂದು ಹೇಳಿ ಇರೋಮ್ ಶರ್ಮಿಳಾ ವಿವಾದದ ಅಲೆ ಎಬ್ಬಿಸಿದ್ದರು.