ಮಣಿಪುರ ಸಿಎಂ ಮೇಲೆ ದಾಳಿ, ಸ್ವಲ್ಪದರಲ್ಲೇ ಬಚಾವ್
ಮಣಿಪುರದ ಮುಖ್ಯಮಂತ್ರಿ ಒಕ್ರಾಮ್ ಇಬೊಬಿ ಸಿಂಗ್ ಅವರ ಮೇಲೆ ಸೋಮವಾರ ಗುಂಡಿನ ದಾಳಿ ನಡೆದಿದೆ. ಉಖ್ರುಲ್ ಹೆಲಿಪ್ಯಾಡ್ ಬಳಿ ನಡೆದ ಈ ದಾಳಿಯಲ್ಲಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಒಕ್ರಾಮ್ ಅವರು ಬಚಾವಾಗಿದ್ದಾರೆ.
ಈ ಘಟನೆಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿಗೆ ಗಾಯವಾಗಿದೆ. ಹೆಲಿಕಾಪ್ಟರ್ ತಕ್ಷಣವೇ ಚಿಂಗೈಗೆ ರವಾನಿಸಲಾಯಿತು. ಸಿಎಂ ಒಕ್ರೋಮ್ ಅವರು ಕೂಡಾ ಕೂಡಲೇ ಉಕ್ರುಲ್ ನಿಂದ ಇಂಫಾಲಗ್ಗೆ ತೆರಳಿದ್ದಾರೆ. ತುರ್ತು ಸಂಪುಟ ಸಭೆ ಕರೆದು, ಘಟನೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ಘಟನೆ ಬಳಿಕ ಒಬೋಬಿ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ. ಸಿಎಂ ಒಬೋಬಿ ಅವರು ಉಕ್ರುಲ್ ಜಿಲ್ಲೆಯ ಹನ್ ಫಂಗ್, ಚಿಂಗೈ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕಿತ್ತು. ಹನ್ ಫಂಗ್ ನಲ್ಲಿ 100 ಬೆಡ್ ಗಳ ಸಾಮರ್ಥ್ಯವುಳ್ಳ ಆಸ್ಪತ್ರೆ, ಚಿಂಗೈ ಹಾಗೂ ಹನ್ ಫಂಗ್ ನಲ್ಲಿ ಪವರ್ ಸಬ್ ಸ್ಟೇಷನ್ ಉದ್ಘಾಟನೆ ನಿಗದಿಯಾಗಿತ್ತು.
ಉಖ್ರುಲ್ ಜಿಲ್ಲೆಯಲ್ಲಿ ಸರಣಿ ಐಇಡಿ ಬಾಂಬ್ ಸ್ಫೋಟಗೊಂಡು ಇಬ್ಬರು ಯೋಧರು ಗಾಯಗೊಂಡಿದ್ದರು. ಸಿಎಂ ಭೇಟಿ ನೀಡಲು ನಿಗದಿಯಾಗಿದ ಆಸ್ಪತ್ರೆ ಬಳಿ ಜೀವಂತ ಬಾಂಬ್ ವೊಂದು ಪತ್ತೆಯಾಗಿದ್ದು, ಅದನ್ನು ಸಿಬ್ಬಂದಿಗಳು ನಿಷ್ಕ್ರಿಯಗೊಳಿಸಿದ್ದಾರೆ. ಉಕ್ರುಲ್ ಜಿಲ್ಲಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.