ಬೆಟ್ಟಿಂಗ್: ಪತ್ನಿಯನ್ನು ಪಣಕ್ಕಿಟ್ಟು ಸೋತ ಆಧುನಿಕ ಧರ್ಮರಾಯ!
ಶಕುನಿಯ ಮಾತಿನಂತೆ ಪಗಡೆಯಾಟದಲ್ಲಿ ಹೆಂಡತಿ ದ್ರೌಪದಿಯನ್ನು ಪಣಕ್ಕಿಟ್ಟು ಧರ್ಮರಾಯ ಸೋತ ಉದಾಹರಣೆ ಮಹಾಭಾರತದಲ್ಲಿ ಬರುತ್ತದೆ. ಉತ್ತರಪ್ರದೇಶದಲ್ಲೊಬ್ಬ ಪತಿರಾಯ ಹೆಂಡತಿಯನ್ನು ಪಣಕ್ಕಿಟ್ಟು ಸೋತ ಘಟನೆ ಎರಡು ದಿನಗಳ ಹಿಂದೆ ವರದಿಯಾಗಿದೆ.
ಕಾನ್ಪುರ ಗೋವಿಂದ ನಗರದ ನಿವಾಸಿ ರವೀಂದ್ರ ಸಿಂಗ್, ಐಪಿಎಲ್ 2016ರ ಪಂದ್ಯವೊಂದರ ಬೆಟ್ಟಿಂಗ್ ನಲ್ಲಿ ಹೆಂಡತಿಯನ್ನು ಪಣಕ್ಕಿಟ್ಟು ಸೋತಿದ್ದಾನೆ. ಜೂಜಾಟದಲ್ಲಿ ಗೆದ್ದವರು ಈತನ ಪತ್ನಿ ಜಸ್ಮಿತ್ ಕೌರ್ಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. (ಐಪಿಎಲ್ 9 ಕಿರೀಟ ಯಾರ ಮಡಿಲಿಗೆ)
ಇವರ ಕಾಟವನ್ನು ತಡೆಯಲಾರದೇ ಹೆಂಡತಿ ಪೊಲೀಸ್ ಮೆಟ್ಟಲೇರಿದಾಗಲೇ, ಪತಿಮಹಾರಾಯನ ಬಣ್ಣ ಬಯಲಾಗಿದ್ದು.
ಈ ಅಪರೂಪದ ಕೇಸಿನಿಂದ ಅವಕ್ಕಾದ ಪೊಲೀಸರು ಕೂಡಲೇ ಈಕೆಯ ಗಂಡ ಮತ್ತು ಈಕೆಗೆ ಕಿರುಕಳ ನೀಡುತ್ತಿದ್ದವರನ್ನು ಬಂಧಿಸಲು ಬಲೆಬೀಸಿದ್ದಾರೆ. ಸದ್ಯ ಈ ಎಲ್ಲಾ ಕಿರಾತಕರು ಕಣ್ತಪ್ಪಿಸಿಕೊಂಡಿದ್ದಾರೆ.
ದುಶ್ಚಟಗಳ ದಾಸನಾಗಿದ್ದ ರವೀಂದ್ರ ಸಿಂಗ್, ಜೂಜಾಟದಲ್ಲಿ ಆಸ್ತಿಪಾಸ್ತಿ ಕಳೆದುಕೊಳ್ಳುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಮನೆಯಲ್ಲಿದ್ದ ನಗನಾಣ್ಯ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಜೂಜಿನಲ್ಲಿ ಕಳೆದುಕೊಂಡಿದ್ದ.
ಶೇರು ಮಾರುಕಟ್ಟೆಯಲ್ಲಿ ಸಾಕಷ್ಟು ನಷ್ಟ ಮಾಡಿಕೊಂಡಿದ್ದ ನನ್ನ ಪತಿ, ತವರಿನಿಂದ ಏಳು ಲಕ್ಷ ರೂಪಾಯಿ ತರುವಂತೆ ಹಿಂಸಿಸುತ್ತಿದ್ದ.
ಇದಕ್ಕೆ ನಾನು ಒಪ್ಪದಿದ್ದಾಗ ಎಷ್ಟೋ ಬಾರಿ ನನಗೆ ಹೊಡೆದಿದ್ದುಂಟು ಎಂದು ಪತ್ನಿ ಕಣ್ಣೀರಿಟ್ಟಿದ್ದಾಳೆ. (ಐಪಿಎಲ್ ಬೆಟ್ಟಿಂಗ್ ಶೂರ ಕಾನಿಷ್ಕಾದಲ್ಲಿದ್ದ)
ವಿವಾಹ ಆದಾಗಿನಿಂದ ನಮ್ಮಿಬ್ಬರಲ್ಲಿ ಸಾಮರಸ್ಯವಿರಲಿಲ್ಲ. ಜೂಜಾಡಲು ಮನೆಯನ್ನೇ ಮಾರಾಟ ಮಾಡುವ ಯೋಚನೆ ಪತಿಯಲ್ಲಿತ್ತು.
ನನ್ನನ್ನು ಜೂಜಾಟದಲ್ಲಿ ಸೋತ ನಂತರ, ಗೆದ್ದವರು ನಮ್ಮ ಮನೆಯ ಸುತ್ತ ತಿರುಗಲಾರಂಭಿಸಿ, ಕಿರುಕುಳ ನೀಡಲಾರಂಭಿಸಿದರು ಎಂದು ಪತ್ನಿ ಜಸ್ಮಿತ್ ಕೌರ್ ಆರೋಪಿಸಿದ್ದಾಳೆ.