ಕೇರಳ: ಕ್ಯೂನಲ್ಲಿ ನಿಂತಿದ್ದ ವ್ಯಕ್ತಿಸಾವು, ಮತ್ತೊಬ್ಬ ಆತ್ಮಹತ್ಯೆ
ನೋಟು ನಿಷೇಧ ಪರಿಣಾಮದಿಂದ ಹೆದರಿ ಹಿರಿಯ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಮತ್ತು ಹಣ ವಿನಿಮಯಕ್ಕಾಗಿ ಕ್ಯೂ ಲೈನ್ ನಲ್ಲಿ ನಿಂತಿದ್ದ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.
ತಿರುವನಂತಪುರಂ, ನವೆಂಬರ್, 22: ನೋಟು ನಿಷೇಧ ಪರಿಣಾಮದಿಂದ ಮತ್ತಿಬ್ಬರ ಜೀವನ ದಾರುಣವಾಗಿ ಅಂತ್ಯಗೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಸಹಕಾರಿ ಬ್ಯಾಂಕ್ ವೊಂದರಲ್ಲಿ ಹಣ ಉಳಿತಾಯ ಮಾಡಿದ್ದ ಹಿರಿಯ ನಾಗರಿಕರೊಬ್ಬರು ತಮ್ಮ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.[33 ಜನರನ್ನು ಆಪೋಶನ ತೆಗೆದುಕೊಂಡ 500, 1000 ನೋಟು!]
ಕೊಟ್ಟಾಯಂ ಜಿಲ್ಲೆ ಪಂಬಾ ಕಣಿವೆಯ ಚೆರುವಿಲ್ಲಾಯಿಲ್ ಗ್ರಾಮದ ಒಮನಕುಟ್ಟನ್ ಪಿಳ್ಳೈ (73) ಎಂಬುವವರು ಸೋಮವಾರ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಳ್ಳೈ ಅವರು ಸ್ಥಳೀಯ ಸಹಕಾರಿ ಬ್ಯಾಂಕ್ ವೊಂದರಲ್ಲಿ ರೂ. 5ಲಕ್ಷ ಹಣ ಖಾತೆಗೆ ಜಮಾ ಮಾಡಿದ್ದರು. ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಮಾಡಿದ ನಂತರ ತನ್ನ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮತ್ತೊಂದು ಘಟನೆಯಲ್ಲಿ ಹಣ ವಿನಿಮಯಕ್ಕಾಗಿ ಕ್ಯೂಲೈನ್ ನಲ್ಲಿ ನಿಂತಿದ್ದ ಕೊಲ್ಲಂ ಜಿಲ್ಲೆಯ ಚಂದ್ರಶೇಖರನ್(68) ಎಂಬುವವರು ಸಾವನ್ನಪ್ಪಿದ್ದಾರೆ.
ಚಂದ್ರಶೇಖರನ್ ಬಿಎಸ್ ಎನ್ ಎಲ್ ನಲ್ಲಿ ನಿವೃತ್ತ ಉದ್ಯೋಗಿಯಾಗಿದ್ದರು. ಟ್ರಾವಂಕೂರ್ ಸ್ಟೇಟ್ ಬ್ಯಾಂಕ್ ನ ನಳ್ಳಿಲಾ ಶಾಖೆಯಲ್ಲಿ ಹಣವಿನಿಮಯಕ್ಕಾಗಿ ಕ್ಯೂಲೈನ್ ನಲ್ಲಿ ನಿಂತಿದ್ದ ವೇಳೆ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ.