ಮಮತಾ ಬ್ಯಾನರ್ಜಿ, ಸೋನಿಯಾ ಗಾಂಧಿ ಭೇಟಿ
ಇತ್ತೀಚೆಗೆ, ಸೋನಿಯಾ ಗಾಂಧಿ ಅನಾರೋಗ್ಯದಿಂದಾಗಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾಗಲೇ ಮಮತಾ ಬ್ಯಾನರ್ಜಿಯವರಿಗೆ ಕರೆ ಮಾಡಿ ತಮ್ಮನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ನವದೆಹಲಿ, ಮೇ 16: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು (ಮೇ 16) ದೆಹಲಿಗೆ ಆಗಮಿಸಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ದಿನದ ಬೆಳವಣಿಗೆಗಳಲ್ಲಿ ಮಾಧ್ಯಮಗಳೆಲ್ಲೆಲ್ಲಾ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ಮನೆಗಳ ಮೇಲೆ ಸಿಬಿಐ ದಾಳಿ ಮತ್ತು ಬಿಹಾರದ ರಾಜಕೀಯ ಧುರೀಣ ಲಾಲು ಪ್ರಸಾದ್ ಮನೆಗಳ ಮೇಲೆ ಐಟಿ ದಾಳಿ ನಡೆದ ಸುದ್ದಿಗಳೇ ತುಂಬಿ ತುಳುಕುತ್ತಿದ್ದ ಹಿನ್ನೆಲೆಯಲ್ಲಿ ಸೋನಿಯಾ, ಮಮತಾ ಭೇಟಿಯ ಸುದ್ದಿ ಅಷ್ಟಾಗಿ ಮಹತ್ವ ಪಡೆಯಲಿಲ್ಲ.[ನ್ಯಾಷನಲ್ ಹೆರಾಲ್ಡ್ ಕೇಸ್: ಸೋನಿಯಾ, ರಾಹುಲ್ ಗೆ ಸಂಕಷ್ಟ]
ಇತ್ತೀಚೆಗೆ, ಸೋನಿಯಾ ಗಾಂಧಿಯವರು ಅನಾರೋಗ್ಯದಿಂದಾಗಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಆಗ, ಅಲ್ಲಿಂದಲೇ ಮಮತಾ ಬ್ಯಾನರ್ಜಿಯವರಿಗೆ ಕರೆ ಮಾಡಿ ತಮ್ಮನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದರೆಂಬ ಸುದ್ದಿ ಕಳೆದ ವಾರ ಹರಿದಾಡಿತ್ತು.[ಆಸ್ಪತ್ರೆಯಲ್ಲಿ ಚಿಕಿತ್ಸೆ ನಡುವೆಯೇ ಸೋನಿಯಾಜೀ ಮಮತಾಗೆ ಕರೆ ಮಾಡಿದ್ಯಾಕೆ?]
ಅಂತೆಯೇ, '10, ಜನಪಥ್' ಗೆ (ಸೋನಿಯಾ ನಿವಾಸ) ಭೇಟಿ ನೀಡಿದ ಮಮತಾ, ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹಾ ಉಪಸ್ಥಿತರಿದ್ದರು.
ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಕಣಕ್ಕಿಳಿಸುವ ಅಭ್ಯರ್ಥಿಗೆ ವಿರುದ್ಧ ವಿರೋಧ ಪಕ್ಷಗಳೆಲ್ಲವೂ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಸೋನಿಯಾಜೀ ಸಲಹೆ ನೀಡಿದ್ದಾರೆ'' ಎಂದಷ್ಟೇ ತಿಳಿಸಿದರು.
''ಸದ್ಯಕ್ಕೆ ಇದಿನ್ನೂ ಚಿಂತನೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳ ಸದಸ್ಯರೆಲ್ಲರೂ ಚರ್ಚಿಸಿ ಸೂಕ್ತ ಅಭ್ಯರ್ಥಿಗಳನ್ನ ಆಯ್ಕೆ ಮಾಡುವ ಬಗ್ಗೆ ಪ್ರಯತ್ನಿಸಲಾಗುವುದು'' ಎಂದು ಮಮತಾ ತಿಳಿಸಿದರು.