ಕರ್ನಲ್ ಪುರೋಹಿತ್ ಗೆ ಜಾಮೀನು, ನೀವು ತಿಳಿಯಬೇಕಾದ 5 ಸಂಗತಿ
ಸುಪ್ರೀಂ ಕೋರ್ಟ್ ನಿಂದ ಲೆಫ್ಟನೆಂಟ್ ಕರ್ನಲ್ ಪುರೋಹಿತ್ ಅವರಿಗೆ ಜಾಮೀನು. 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಜಾಮೀನು ಪಡೆದ ಪುರೋಹಿತ್.
ನವದೆಹಲಿ, ಆಗಸ್ಟ್ 21: ಇಡೀ ದೇಶದ ಕುತೂಹಲ ಕೆರಳಿಸಿದ್ದ 2008ರ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ವರ್ಷ ಬಂಧಿತರಾಗಿದ್ದ ಸೇನಾಧಿಕಾರಿ ಲೆಫ್ಟನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಅವರಿಗೆ ಸುಪ್ರೀಂ ಕೋರ್ಟ್ ಶನಿವಾರ ಜಾಮೀನು ನೀಡಿದೆ. ಇದರ ಬೆನ್ನಲ್ಲೇ, ಅವರು ಪುನಃ ಸೇವೆಗೆ ಮರಳುತ್ತಾರೆಂದು ಕೆಲವು ಮೂಲಗಳು ತಿಳಿಸಿವೆ.
ಈ ಹಿಂದೆ, ಮುಂಬೈ ಹೈಕೋರ್ಟ್ ತಮ್ಮ ಜಾಮೀನು ಅರ್ಜಿಯನ್ನು ತಳ್ಳಿಹಾಕಿದ್ದರ ವಿರುದ್ಧ ಪುರೋಹಿತ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕಳೆದ ವಾರ ಈ ವಿಚಾರಣೆ ಮುಗಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಶನಿವಾರ (ಆಗಸ್ಟ್ 21) ತೀರ್ಪು ಪ್ರಕಟಿಸಿದ ಸರ್ವೋಚ್ಛ ನ್ಯಾಯಾಲಯ, ಪುರೋಹಿತ್ ಅವರಿಗೆ ಜಾಮೀನು ನೀಡಲು ಸಮ್ಮತಿಸಿತು.
2008ರ ಸೆಪ್ಟಂಬರ್ 29ರಂದು ಮಹಾರಾಷ್ಟ್ರದ ರಾಜಧಾನಿ ಮುಂಬೈನಿಂದ ಸುಮಾರು 270 ಕಿ.ಮೀ. ದೂರದಲ್ಲಿರುವ ಮಾಲೇಗಾಂವ್ ನಲ್ಲಿ ಅವಳಿ ಬಾಂಬ್ ಗಳು ಸ್ಫೋಟಗೊಂಡಿದ್ದ ಪ್ರಕರಣ ಇದು.
ಶಸ್ತ್ರಾಸ್ತ್ರ ಸರಬರಾಜು ಮಾಡಿದ ಆರೋಪ
ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಅವರ ವಿರುದ್ಧ ಪ್ರಕರಣದ ಪ್ರಮುಖ ಆರೋಪಿ ಅಭಿನವ್ ಭರತ್ ಎಂಬ ಉಗ್ರ ಸಂಘಟನೆಗೆ ಸಹಾಯ ಮಾಡಿದ ಆರೋಪವಿದೆ. ಅವರಿಗೆ ಪ್ರಮುಖ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದ ಆರೋಪವಿದೆ.
ತನಿಖೆ ಎನ್ಐಎಗೆ ಹಸ್ತಾಂತರ
ಮಾಲೇಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದು ಮುಂಬೈನ ಟಫ್ ಕಾಪ್ ಎಂದೇ ಹೆಸರಾಗಿದ್ದ ಹೇಮಂತ್ ಕರ್ಕರೆ. ಆದರೆ, ಮುಂಬೈ ಮೇಲೆ ಉಗ್ರರ ದಾಳಿಯಾದಾಗ ಕರ್ಕರೆ ಅವರು ಸಾವಿಗೀಡಾದರು. ಆಗ, ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಆಯೋಗಕ್ಕೆ (ಎನ್ಐಎ) ಹಸ್ತಾಂತರಿಸಲಾಗಿತ್ತು.
ಹೇಳಿಕೆಯಲ್ಲಿ ಬದಲಿಲ್ಲ
ಅಭಿನವ್ ಭರತ್ ಜತೆಗೆ ಯಾವುದೇ ನಂಟು ಹೊಂದಿಲ್ಲ. ತಮ್ಮ ಹಿರಿಯ ಸೇನಾಧಿಕಾರಿಗಳು ನಂಟು ಹೊಂದಿದ್ದರೆಂದು ಅವರು ಅವರು ನ್ಯಾಯಾಲಯದಲ್ಲಿ ಹೇಳಿದ್ದರು. ತಾವು ಉಗ್ರರ ಒಳನುಸುಳುವಿಕೆಯ ಬಗ್ಗೆ ಮಾಹಿತಿ ಕಲೆಹಾಕುವಲ್ಲಿ ನಿರತನಾಗಿದ್ದೆ. ಆದರೆ, ಮಾಲೇಗಾಂವ್ ಸ್ಫೋಟದಲ್ಲಿ ತಮ್ಮನ್ನು ಅನವಶ್ಯಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಅವರು ಹೇಳುತ್ತಿದ್ದರು. 2008ರಲ್ಲಿ ಅವರ ಬಂಧನವಾದ ನಂತರದಿಂದಲೂ ಅವರು ಇದೇ ಹೇಳಿಕೆಯನ್ನು ಹೇಳಿದ್ದಾರೆ.
ಹಿಂದೂ ಉಗ್ರವಾದದ ಮುಖ ಅನಾವರಣ?
ಮುಂಬೈನಿಂದ ಸುಮಾರು 270 ಕಿ.ಮೀ. ದೂರವಿರುವ ಮಾಲೇಗಾಂವ್ ಮುಸ್ಲಿಂ ಸಮುದಾಯ ಹೆಚ್ಚಾಗಿರುವ ಪ್ರಾಂತ್ಯ. ಈ ಪ್ರಾಂತ್ಯದಲ್ಲಿ 2008ರ ಸೆಪ್ಟಂಬರ್ 29ರಂದು ಎರಡು ಸ್ಫೋಟಗಳನ್ನು ಅಭಿನವ್ ಭರತ್ ಸಂಘಟನೆ ನಡೆಸಿತ್ತು ಎಂದು ಹೇಳಲಾಗಿದೆ. ಈ ಘಟನೆಯಲ್ಲಿ 7 ಮಂದಿ ಸಾವಿಗೀಡಾಗಿದ್ದರು. ಆರಂಭದಲ್ಲಿ ಈ ಸ್ಫೋಟಗಳನ್ನು ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ) ನಡೆಸಿತ್ತೆಂದು ಅನುಮಾನಿಸಲಾಗಿತ್ತು. ಆದರೆ, ಪ್ರಕರಣದ ತನಿಖೆಯನ್ನು ನಡೆಸಿದ ಮುಂಬೈ ಪೊಲೀಸರು ಈ ಕೃತ್ಯಕ್ಕೆ ಹಿಂದೂ ಪರ ಸಂಘಟನೆಯೇ ಕಾರಣ ಎಂದು ಆರೋಪಪಟ್ಟಿ ಸಲ್ಲಿಸಿತ್ತು.