ನಟಿಯ ಲೈಂಗಿಕ ದೌರ್ಜನ್ಯ : ಸುನಿಗೆ ಸುಳ್ಳು ಪತ್ತೆ ಪರೀಕ್ಷೆ
ಕೊಯಮತ್ತೂರು, ಫೆಬ್ರವರಿ 28 : ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದ ಖ್ಯಾತ ಮಲಯಾಳಂ ಚಿತ್ರನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ಕೇರಳ ಪೊಲೀಸರಿಗೆ ಮೊದಲಿನಿಂದಲೂ ಕಗ್ಗಂಟಾಗಿಯೇ ಪರಿಣಮಿಸಿದೆ. ಪ್ರತಿಯೊಂದು ಹಂತದಲ್ಲಿಯೂ ಕೇರಳ ಪೊಲೀಸರು ಎಡವಿ ಬೀಳುತ್ತಿದ್ದಾರೆ.
ಚಿತ್ರರಂಗವನ್ನು ಕಂಗೆಡಿಸಿರುವ ಈ ಹೈಪ್ರೊಫೈಲ್ ಪ್ರಕರಣ ಕೇರಳ ಪೊಲೀಸರ ದೌರ್ಬಲ್ಯವನ್ನು ಕೂಡ ಎತ್ತಿಎತ್ತಿ ತೋರಿಸುತ್ತಿದೆ. ಅವರ ಪ್ರತಿಷ್ಠೆ ಕೂಡ ಮಂಕಾಗುವಂತೆ ಮಾಡಿದೆ. ಈ ಪ್ರಕರಣದಲ್ಲಿ ಕೇರಳ ಪೊಲೀಸರು ಪ್ರತಿ ಹಂತದಲ್ಲಿ ಸೋಲುಂಡಿದ್ದಾರೆ.
ಅಪಹರಣ ಮತ್ತು ದೌರ್ಜನ್ಯದ ಪ್ರಮುಖ ರೂವಾರಿ ಪಲ್ಸರ್ ಸುನೀಲ್ ನನ್ನು ಬಂಧಿಸುವಲ್ಲಿ 6 ದಿನಗಳನ್ನು ತೆಗೆದುಕೊಂಡಾಗಲೇ ಪೊಲೀಸರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಆತನನ್ನು ಬಂಧಿಸಬೇಕಾದರೆ ಪೊಲೀಸರು ಆತ ಕೋರ್ಟಿಗೆ ಶರಣಾಗುವವರೆಗೆ ಕಾಯಬೇಕಾಯಿತು. ಈ ಘಟನೆಯಲ್ಲಿ ಪೊಲೀಸರನ್ನು ಹೀರೋನಂತೆ ಕಂಡಿದ್ದು ವಿಪರ್ಯಾಸ.
ಇಷ್ಟು ಸಾಲದೆಂಬಂದೆ, ಆತನನ್ನು ಬಂಧಿಸಿ 9 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದರೂ ಆತನಿಂದ ಪ್ರಮುಖ ಮಾಹಿತಿ ಹೊರತರುವಲ್ಲಿ ಪೊಲೀಸರು ಸೋತಿದ್ದಾರೆ. ಭಾರೀ ಕುಳಗಳ ಜೊತೆ ಸಂಪರ್ಕವಿರುವ ಆತ ವಿಚಾರಣೆಯ ಸಂದರ್ಭದಲ್ಲಿ ತನ್ನ ಹೇಳಿಕೆಗಳನ್ನು ಬದಲಿಸುತ್ತ ಪೊಲೀಸರಿಗೆ ಮಂಕುಬೂದಿ ಎರಚುತ್ತಿದ್ದಾನೆ. [ಮಲಯಾಳಿ ನಟಿ ದೌರ್ಜನ್ಯ : ಪಲ್ಸರ್ ಸುನಿಯನ್ನು ಬಂಧಿಸಿದ್ದು ಹೇಗೆ?]
ಸುಳ್ಳು ಪರೀಕ್ಷೆ ಒಳಪಡಿಸಲು ಕೋರಿಕೆ
ಲೈಂಗಿಕ ದೌರ್ಜನ್ಯ ನಡೆಸಿದ್ದಕ್ಕೆ ಸಾಕ್ಷಿಯಾಗಿ ಇದ್ದ ಮೊಬೈಲನ್ನು ಹುಡುಕುವಲ್ಲಿ ಕೂಡ ಪೊಲೀಸರು ಸೋತಿದ್ದಾರೆ. ಇದೆಲ್ಲದರಿಂದ ಬೇಸತ್ತಿರುವ ಪೊಲೀಸರು ಈಗ ಪಲ್ಸರ್ ಸುನಿ ಮತ್ತು ಮತ್ತೊಬ್ಬ ಆರೋಪಿ ವಿಜೀಶ್ ನನ್ನು ಸುಳ್ಳು ಪರೀಕ್ಷೆಗೆ ಒಳಪಡಿಸಬೇಕೆಂದು ಕೋರ್ಟನ್ನು ಕೋರಿದ್ದಾರೆ.
ಮೊಬೈಲಲ್ಲಿ ದೌರ್ಜನ್ಯದ ಚಿತ್ರೀಕರಣ
ಕನ್ನಡದಲ್ಲಿಯೂ ನಟಿಸಿರುವ ಆ ನಟಿಯ ಮೇಲೆ ಚಲಿಸುತ್ತಿರುವ ವಾಹನದಲ್ಲಿ ಲೈಂಗಿಕ ದೌರ್ಜನ್ಯ ಎಸಗುವಾಗ ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದ ಆ ಕ್ರಿಯೆಗಳನ್ನೆಲ್ಲ ಮೊಬೈಲಲ್ಲಿ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಆ ಪೋಟೋ ಮತ್ತು ವಿಡಿಯೋಗಳಿರುವ ಮೊಬೈಲ್ ಎಲ್ಲೋ ಎಸೆದಿದ್ದೇನೆ ಎಂದು ಸುನಿ ಪೊಲೀಸರ ಕಿವಿಯ ಮೇಲೆ ಹೂವಿಡುತ್ತಿದ್ದಾನೆ. [ಮಲಯಾಳಂ ನಟಿ ದೌರ್ಜನ್ಯದ ಹಿಂದೆ ಕೊಟೇಷನ್ ಮಾಫಿಯಾ?]
ಚರಂಡಿಯಲ್ಲಿ ಮೊಬೈಲ್ ಎಸೆದಿದ್ದೆ ಎಂದಿದ್ದ ಸುನಿ
ಪಲ್ಸರ್ ಸುನಿ ನೀಡಿದ ಹೇಳಿಕೆಯನ್ನು ಆಧರಿಸಿ ಆತನನ್ನು ಇಡುಕ್ಕಿಯ ವೆಗಮಾನ್ ಗೆ ಕರೆದುಕೊಂಡು ಪೊಲೀಸರು ಹೋಗಿದ್ದರು. ಅಲ್ಲಿ ಚರಂಡಿಯಲ್ಲೆಲ್ಲೋ ಮೊಬೈಲ್ ಎಸೆದಿದ್ದಾಗಿ ಆತ ಹೇಳಿದ್ದ. ಆತನ ಮಾತನ್ನು ನಂಬಿ ಎಲ್ಲೆಡೆ ಹುಡುಕಿದ್ದಾಯಿತು. ಮೊಬೈಲ್ ಮಾತ್ರ ಪೊಲೀಸರಿಗೆ ಸಿಕ್ಕಿಲ್ಲ. ಇನ್ನಾರಿಗೆ ಸಿಕ್ಕಿದೆಯೋ?
ಪ್ರತಿಬಾರಿ ಹೇಳಿಕೆ ಬದಲಿಸುತ್ತಿರುವ ಸುನಿ
ಕೊಚ್ಚಿಯಲ್ಲಿ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮೇಲೆ ಪಲ್ಸರ್ ಸುನಿ ಕೊಯಮತ್ತೂರಿಗೆ ಮತ್ತು ನಂತರ ವೆಗಮಾನ್ ಗೆ ತೆರಳಿದ್ದ. ಅಲ್ಲಿಯೇ ಚರಂಡಿಯಲ್ಲಿ ಎಸೆದಿದ್ದೆ ಎಂದು ಮೊದಲಿಗೆ ಹೇಳಿಕೆ ನೀಡಿದ್ದ. ನಂತರ ಹೇಳಿಕೆ ಬದಲಿಸಿದ ಸುನಿ ಕೊಚ್ಚಿಯ ಗೋಶ್ರೀ ಕೆರೆಯಲ್ಲಿ ಎಸೆದಿರುವುದಾಗಿ ಹೇಳಿ ಪೊಲೀಸರನ್ನು ಗೊಂದಲಕ್ಕೀಡು ಮಾಡಿದ್ದಾನೆ. ಪ್ರತಿಬಾರಿಯೂ ಹೇಳಿಕೆ ಬದಲಿಸುತ್ತಿರುವ ಸುನಿ ಪೊಲೀಸರಿಗೆ ಭಾರೀ ತಲೆನೋವಾಗಿದ್ದಾನೆ. [ಮಲಯಾಳಂ ನಟಿ ಲೈಂಗಿಕ ದೌರ್ಜನ್ಯದ ಹಿಂದೆ ಕಾಣದ ಕೈಗಳ ಸಂಚು?]
ನಟಿಯ ಧೈರ್ಯವನ್ನು ಮೆಚ್ಚಲೇಬೇಕು
ಈ ನಡುವೆ, ಲೈಂಗಿಕ ದೌರ್ಜನ್ಯಕ್ಕೊಳಗಾಗಿ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರೂ ಆ ನಟಿ ಧೈರ್ಯದಿಂದ ಬದುಕನ್ನು ಎದುರಿಸುತ್ತಿದ್ದಾರೆ. ಈ ಆಘಾತದಿಂದ ಹೊರಬಂದಂತಿರುವ ಅವರು ಚಿತ್ರೀಕರಣದಲ್ಲೂ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಏನೇ ಆಗಲಿ ಈ ಪ್ರಕರಣದಲ್ಲಿ ಅಡಗಿರುವ ಹಲವಾರು ಸತ್ಯಗಳು ಹೊರಬರಬೇಕಿದೆ. ಇದರಲ್ಲಿ ಕೆಲ ಖ್ಯಾತನಾಮರ ಹೆಸರು ಕೂಡ ಕೇಳಿಬಂದಿದೆ.