ನಟ ದಿಲೀಪ್ ಗೆ ಬೆದರಿಕೆ, ನಟಿಗೆ ಲೈಂಗಿಕ ಕಿರುಕುಳ ಕೇಸಿಗೆ ಟ್ವಿಸ್ಟ್
ತಿರುವನಂತಪುರಂ, ಜೂನ್ 25: ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಸ್ಟಾರ್ ನಟನಿಗೆ ಬೆದರಿಕೆ ಕರೆಗಳು ಬರತೊಡಗಿವೆ. ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಮುಖ ಆರೋಪಿ ಪಲ್ಸರ್ ಸುನಿಯ ಸಹಚರನಿಂದ ನಟ ದಿಲೀಪ್ ಗೆ ಬೆದರಿಕೆ ಕರೆ ಬಂದಿದೆ.
ಮಲಯಾಳಂ ನಟಿ ಲೈಂಗಿಕ ದೌರ್ಜನ್ಯ : ಆ ಮೆಗಾಸ್ಟಾರ್ ಯಾರು?
ಸದ್ಯ ಜೈಲಿನಲ್ಲಿರುವ ಪಲ್ಸರ್ ಸುನಿಯ ಆಪ್ತ ವಿಷ್ಣು ಎಂಬಾತ ಬೆದರಿಕೆ ಕರೆ ಮಾಡಿದ್ದಾನೆ. ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನಟ ದಿಲೀಪ್ ಹೆಸರು ಹೇಳಬಾರದು ಎಂದಾದರೆ 1.5 ಕೋಟಿ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ನಟ ದಿಲೀಪ್ ಅವರ ಆಪ್ತ, ನಿರ್ದೇಶಕ ನಾದಿರ್ ಶಾ ಆರೋಪಿಸಿದ್ದಾರೆ.
ನಟಿ ಮೇಲೆ ಕಿರುಕುಳ, ನನ್ನ ಪಾತ್ರವಿಲ್ಲ ಎಂದ ಸ್ಟಾರ್ ನಟ
ವಿಷ್ಣು ಜೊತೆಗಿನ ಈ ಸಂಭಾಷಣೆಯನ್ನು ನಾದಿರ್ ಶಾ ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ಆಡಿಯೋ ಸಂಭಾಷಣೆ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದ ನಟಿ ಅಪಹರಣ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು. ಭಾವನಾರಿಂದ ಹೇಳಿಕೆ ಪಡೆಯಲು ಪೊಲೀಸರು ತೀರ್ಮಾನಿಸಿದ್ದಾರೆ.
ನನ್ನ ಕೈವಾಡವಿಲ್ಲ ಎಂದ ದಿಲೀಪ್
ನಟಿಯನ್ನು ಕಿಡ್ನಾಪ್ ಮಾಡಿ, ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಹೆಸರು ಮುಂಚಿನಿಂದಲೂ ಕೇಳಿ ಬಂದಿದೆ. ಆದರೆ, ಕೆಲ ಮಾಧ್ಯಮಗಳು ನನ್ನನ್ನು ಟಾರ್ಗೆಟ್ ಮಾಡುತ್ತಿವೆ. ಫೆಬ್ರವರಿ 17ರಂದು ನಡೆದ ಘಟನೆಗೂ ನನಗೂ ಸಂಬಂಧವಿಲ್ಲ ಎಂದು ಮತ್ತೊಮ್ಮೆ ದಿಲೀಪ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ನಟಿ ಕಾವ್ಯ ಮಾಧವನ್ ಅವರನ್ನು ವರಿಸಿದ ದಿಲೀಪ್ ಅವರು ಮಾತನಾಡಿ, ಈ ಪ್ರಕರಣದ ಆರೋಪಿಗಳ ಜತೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಬಿಐ ತನಿಖೆಗೆ ಹೆಚ್ಚಿನ ಒತ್ತಡ
ಆರೋಪಿಗಳಿಂದ ದಿನಕ್ಕೊಂದು ಹೊಸ ಹೆಸರು ಕೇಳಿ ಬರುತ್ತಿದ್ದು, ಈ ಪ್ರಕರಣದಲ್ಲಿ ಸ್ಟಾರ್ ನಟ, ನಿರ್ದೇಶಕರ ಕೈವಾಡ ಇರುವ ಶಂಕೆ ಇದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕಾಂಗ್ರೆಸ್ ಶಾಸಕ ಪಿ.ಟಿ ಥಾಮಸ್ ಆಗ್ರಹಿಸಿದ್ದಾರೆ, ಈ ಬಗ್ಗೆ ಸಿಎಂ ಪಿಣರಾಯಿ ಅವರಿಗೆ ಪತ್ರ ಬರೆದಿದ್ದಾರೆ. ಪಲ್ಸರ್ ಸುನಿ, ಮಾರ್ಟಿನ್,ವಿಘ್ನೇಶ್ ಸೇರಿದಂತೆ 6 ಮಂದಿಯನ್ನು ಬಂಧಿಸಿ ಜೈಲಿಗೆ ದೂಡಲಾಗಿದೆ.
ಫೆಬ್ರವರಿ 17ರ ರಾತ್ರಿ
ಫೆಬ್ರವರಿ 17ರ ರಾತ್ರಿಯಂದು, ಚಿತ್ರೀಕರಣ ಮುಗಿಸಿಕೊಂಡು ತನ್ನ ಕಾರು ಚಾಲಕನೊಂದಿಗೆ ಮಲಯಾಳಂ ಮೂಲದ ಬಹುಭಾಷಾ ನಟಿ ಮರಳುತ್ತಿದ್ದಾಗ, ಯೋಜನೆಯಂತೆ ಅವರ ಕಾರಿಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆ. ಜಗಳವಾಡುವ ನಾಟಕವಾಡಿ ಮಲಯಾಳಂ ನಟಿಯನ್ನು ಅಪಹರಿಸಲಾಗಿದೆ. ಆಗ ಚಲಿಸುತ್ತಿದ್ದ ಕಾರಿನಲ್ಲಿ ಮಲಯಾಳಂ ನಟಿಯ ಮೇಲೆ ಸತತ ಎರಡು ಗಂಟೆ ದೌರ್ಜನ್ಯ ನಡೆದಿತ್ತು.
ಮಂಜು ವಾರಿಯರ್
ಈ ಮಲಯಾಳಂ ನಟಿಯ ಸ್ನೇಹಿತೆ ಮಂಜು ವಾರಿಯರ್ ಅವರು ನಟಿಯ ಅಪಹರಣ ಮತ್ತು ದೌರ್ಜನ್ಯದ ಹಿಂದೆ ಹಲವಾರು ಖ್ಯಾತನಾಮರ ಕೈವಾಡವಿದೆ ಎಂದು ಮಾಧ್ಯಮದ ಮುಂದೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇಡೀ ಚಿತ್ರರಂಗದಲ್ಲಿ ನಟಿಯರ ಸುರಕ್ಷತೆಯ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ದಿಲೀಪ್ ಅವರು ಮಂಜು ವಾರಿಯರ್ ಅವರಿಗೆ ವಿವಾಹ ವಿಚ್ಛೇದನ ನೀಡಿದ್ದಾಗ ಈ ಮಲಯಾಳಂ ನಟಿ ವಿರೋಧಿಸಿದ್ದರು.
ದಿಲೀಪ್ ವಿರುದ್ಧ ನಟಿಯರು
ಸಂಯುಕ್ತಾ, ಶ್ವೇತಾ, ಗೀತು ಪೂರ್ಣಿಯಾ ಹಾಗೂ ಈಗ ಹಲ್ಲೆಗೊಳಗಾದ ನಟಿಯರು 2014ರಲ್ಲಿ ದಿಲೀಪ್ ರಿಂದ ವಿಚ್ಛೇದನ ಪಡೆದ ಸ್ಟಾರ್ ನಟಿ ಮಂಜು ವಾರಿಯರ್ ಬೆಂಬಲಕ್ಕೆ ನಿಂತಿದ್ದರು. ಆದರೆ, ಇದರಿಂದ ದಿಲೀಪ್ ಕೋಪಗೊಂಡಿದ್ದರು, ಈಗ ಹಲ್ಲೆಗೊಳಗಾದ ನಟಿ ಮೇಲೆ ಚಿತ್ರರಂಗ ನಿಷೇಧ, ನಿರ್ಬಂಧ ಹೇರಲು ಪರೋಕ್ಷವಾಗಿ ಕಾರಣರಾಗಿದ್ದರು ಎಂಬ ಸುದ್ದಿ ಹಬ್ಬಿತ್ತು. ಆದರೆ, ಮಂಜು ಇದಕ್ಕೆಲ್ಲ ಸ್ಪಷ್ಟನೆ ನೀಡಿದ್ದರು.