ಸೇನಾ ಜೀಪಿಗೆ ಕಟ್ಟಿಸಿಕೊಂಡ ವ್ಯಕ್ತಿಯಿಂದ ಮಾನವ ಹಕ್ಕು ಆಯೋಗಕ್ಕೆ ದೂರು
ಶ್ರೀನಗರ (ಜಮ್ಮು- ಕಾಶ್ಮೀರ), ಮೇ 25: ಜಮ್ಮು ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಯ ವೇಳೆ ತಮ್ಮನ್ನು ಭಾರತೀಯ ಸೇನೆಗೆ ಜೀಪ್ ಗೆ ಕಟ್ಟಿದ್ದ ಮೇಜರ್ ವಿರುದ್ಧ ಜಮ್ಮು ಕಾಶ್ಮೀರದ ಯುವಕ ಫಾರೂಕ್ ದಾರ್, ಜಮ್ಮು ಕಾಶ್ಮೀರದಲ್ಲಿರುವ ಮಾನವ ಹಕ್ಕುಗಳ ಆಯೋಗದ ಕಚೇರಿಗೆ ದೂರು ನೀಡಿದ್ದಾನೆ.
ಕಾಶ್ಮೀರದಲ್ಲಿ ಕಳೆದು ತಿಂಗಳು ನಡೆದಿದ್ದ ಗಲಭೆಯ ವೇಳೆ, ಫಾರೂಕ್ ದಾರ್ ತನ್ನ ಸಹಚರರಿದ್ದ ಗುಂಪಿನಲ್ಲಿ ತಾನೂ ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದ. ಆ ವೇಳೆ, ಸ್ಥಳಕ್ಕೆ ಧಾವಿಸಿದ್ದ ಮೇಜರ್ ಗೊಗೊಯ್, ಕಲ್ಲು ತೂರಾಟದ ಗುಂಪಿನ ನಾಯಕನಾಗಿದ್ದ ಫಾರೂಕ್ ನನ್ನು ಸೇನಾ ಜೀಪಿನ ಮುಂದಿನ ಬಂಪರ್ ಗೆ ಕಟ್ಟಿ ಹಾಕಿ ಆತನನ್ನೇ ಗುರಾಣಿಯಾಗಿಸಿಕೊಂಡು ಸೇನಾ ಜೀಪ್ ಅನ್ನು ಮುನ್ನಡೆಸಿಕೊಂಡು ಹೋಗಿದ್ದರಲ್ಲದೆ, ಅಂದು ತಮ್ಮೊಂದಿಗಿದ್ದ ಇತರ ಸೈನಿಕರು ಗಾಯಗೊಳ್ಳುವ ಸಂಭಾವ್ಯತೆಯಿಂದ ರಕ್ಷಿಸಿದ್ದರು.
ಅವರ ಈ ಸಮಯ ಪ್ರಜ್ಞೆಯನ್ನು ಮೆಚ್ಚಿದ ಭಾರತೀಯ ಸೇನೆಯು ಅವರನ್ನು ಇತ್ತೀಚೆಗೆ ಸನ್ಮಾನಿಸಿತು.
ಇದರಿಂದ ಅಸಮಾಧಾನಗೊಂಡಿರುವ ಫಾರೂಕ್, ತನ್ನನ್ನು ಅಪಮಾನಿಸಿದರಿಗೆ ಸನ್ಮಾನಿಸಿದ ಭಾರತೀಯ ಸೇನೆಯ ಕ್ರಮ ಎಷ್ಟರ ಮಟ್ಟಿಗೆ ಸರಿ? ಎಂದು ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಕೇಳಿದ್ದಾರೆ.