ಮಹಾರಾಷ್ಟ್ರ: ಮುಷ್ಕರ ನಿರತ 301 ವೈದ್ಯರ ಅಮಾನತು
ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದಾದ್ಯಂತ ನಡೆಯುತ್ತಿರುವ ವೈದ್ಯರ ಹರತಾಳ ತೀವ್ರ ಸ್ವರೂಪ ಪಡೆದುಕೊಂಡಿದ್ದು ಹತಾಶ ಸರಕಾರ 301 ವೈದ್ಯರನ್ನು ಅಮಾನತು ಮಾಡುವ ಕಠಿಣ ನಿರ್ಧಾರಕ್ಕೆ ಮುಂದಾಗಿದೆ.
ಮುಂಬೈ, ಮಾರ್ಚ್ 22: ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆಗೆ ಕೂತಿದ್ದರೆ ಪಕ್ಕದ ಮಹಾರಾಷ್ಟ್ರದಲ್ಲಿ ವೈದ್ಯರು ಮುಷ್ಕರ ಹೂಡಿದ್ದಾರೆ.
ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದಾದ್ಯಂತ ನಡೆಯುತ್ತಿರುವ ವೈದ್ಯರ ಹರತಾಳ ತೀವ್ರ ಸ್ವರೂಪ ಪಡೆದುಕೊಂಡಿದ್ದು ಹತಾಶ ಸರಕಾರ ಕಠಿಣ ನಿರ್ಧಾರಕ್ಕೆ ಮುಂದಾಗಿದೆ.[ಮುಂಬೈ: ತಮ್ಮ ಮೇಲಿನ ದಾಳಿ ವಿರುದ್ಧ ತಿರುಗಿ ಬಿದ್ದ ವೈದ್ಯರು]
ನಾಗ್ಪುರದ ಸರಕಾರ ಮೆಡಿಕಲ್ ಕಾಲೇಜಿನ ಡೀನ್ 301 ವೈದ್ಯರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಳಿಗ್ಗೆ ಮಾಧ್ಯಮಗಳ ಜತೆ ಮಾತನಾಡಿದ್ದ ಮಹಾರಾಷ್ಟ್ರ ಆರೋಗ್ಯ ಸಚಿವ ಗಿರೀಶ್ ಮಹಾಜನ್, ಕೆಲಸಕ್ಕೆ ವಾಪಸಾಗದಿದ್ದರೆ ವೈದ್ಯರ 6 ತಿಂಗಳ ಸಂಬಳ ಕಟ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇವತ್ತು ರಾತ್ರಿ 8 ಗಂಟೆ ಮೊದಲು ಕೆಲಸಕ್ಕೆ ವಾಪಸಾಗುವಂತೆ ಅವರು ಗಡುವು ನೀಡಿದ್ದರು.
ಇನ್ನು ಇಂದು ಬೆಳಗ್ಗೆಯಿಂದ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಮುಷ್ಕರ ನಿರತ ವೈದ್ಯರನ್ನು ಕೆಲಸದಿಂದ ತೆಗೆದು ಹಾಕುವ ನಿರ್ಧಾರಕ್ಕೆ ಚಾಲನೆ ನೀಡಲಾಗಿತ್ತು. ಇವೆಲ್ಲದರ ಮಧ್ಯೆ ನಾಗ್ಪುರ ಕಾಲೇಜಿನ ಡೀನ್ 301 ವೈದ್ಯರನ್ನು ಅಮಾನತು ಮಾಡಿಯೇ ಬಿಟ್ಟಿದ್ದಾರೆ.
ಇದೇ ವೇಳೆ ಕೆಲಸಕ್ಕೆ ಹಾಜರಾಗುವಂತೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ 500 ವೈದ್ಯರಿಗೆ ನೊಟೀಸ್ ನೀಡಿದೆ. ನಾಳೆ ಕಿರಿಯ ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ವಿಚಾರಣೆಯನ್ನೂ ಕೈಗೆತ್ತಿಕೊಳ್ಳಲಿದೆ.