ರಿಸರ್ವ್ ಬ್ಯಾಂಕಿಗೆ ನೂತನ ಗವರ್ನರ್: ರೇಸ್ ನಲ್ಲಿರುವ 6 ಪ್ರಮುಖರು
ಎರಡನೇ ಅವಧಿಗೆ ಗವರ್ನರ್ ಆಗಿ ಮುಂದುವರಿಯುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಹಾಲಿ ಗವರ್ನರ್ ರಘುರಾಮ್ ರಾಜನ್ ಹೇಳಿಕೆ ನೀಡಿರುವುದರಿಂದ, ಅವರ ಉತ್ತರಾಧಿಕಾರಿ ಹುಡುಕಾಟದಲ್ಲಿ ಕೇಂದ್ರ ಸರಕಾರ ತೊಡಗಿದೆ.
ರಾಜನ್ ಉತ್ತರಾಧಿಕಾರಿ ಕುರಿತ ನಿರ್ಧಾರ ಶೀಘ್ರವೇ ಹೊರಬೀಳಲಿದೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದು, 2016ರ ಸೆಪ್ಟೆಂಬರ್ 4ರಂದು ಗವರ್ನರ್ ಆಗಿ ರಾಜನ್ ಅಧಿಕಾರದ ಅವಧಿ ಮುಗಿಯಲಿದೆ. (2ನೇ ಅವಧಿಗೆ ಮುಂದುವರಿಯದಿರಲು ರಘುರಾಮ್ ರಾಜನ್ ನಿರ್ಧಾರ)
ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿಯವರಿಂದ ಸಾಕಷ್ಟು ವಾಗ್ದಾಳಿಗೆ ಒಳಗಾಗಿದ್ದ ರಘುರಾಮ್ ರಾಜನ್, ಎರಡನೇ ಅವಧಿಗೆ ಮುಂದುವರಿಯದೇ ಇರುವ ಅಚ್ಚರಿಯ ನಿರ್ಧಾರಕ್ಕೆ ಬಂದಿದ್ದರು.
ನನ್ನ ಅವಧಿ ಮುಗಿದ ನಂತರ ನನಗೆ ಅಚ್ಚುಮೆಚ್ಚಿನ ಶೈಕ್ಷಣಿಕ ಕ್ಷೇತ್ರಕ್ಕೆ ಮರಳುತ್ತೇನೆ. ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಮುಂದುವರಿಯಲಿದ್ದೇನೆಂದು ತನ್ನ ಸಹೋದ್ಯೋಗಿಗಳಿಗೆ ಬರೆದಿರುವ ವಿದಾಯ ಪತ್ರದ ಮೂಲಕ ಶನಿವಾರ (ಜೂ 18) ರಾಜನ್ ತಿಳಿಸಿದ್ದರು.
ದೇಶದ ಈ ಪ್ರತಿಷ್ಠಿತ ಹುದ್ದೆಗೆ ಆರು ಜನರ ಹೆಸರು ಕೇಳಿ ಬರುತ್ತಿದ್ದು, ಕೇಂದ್ರ ಸರಕಾರ ಜುಲೈ ಮೊದಲ ವಾರದೊಳಗೆ ಆರ್ಬಿಐ ಗವರ್ನರ್ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. (ಆರ್ ಬಿಐ ಬಡ್ಡಿ ದರ ಯಥಾಸ್ಥಿತಿ, ಸಾರ್ವಜನಿಕ ಹೂಡಿಕೆಗೆ ಉತ್ತೇಜನ)
ಗವರ್ನರ್ ಹುದ್ದೆಗೆ ಮಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರುಗಳು, ಸ್ಲೈಡಿನಲ್ಲಿ
ಆರುಂಧತಿ ಭಟ್ಟಾಚಾರ್ಯ
ಭಾರತ ಸರಕಾರ ಸ್ವಾಮ್ಯದ ಸಾರ್ವಜನಿಕ ವಲಯದ ಅತಿದೊಡ್ಡ ಸಮೂಹ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕಿನ ಮುಖ್ಯಸ್ಥೆ ಆರುಂಧತಿ ಭಟ್ಟಾಚಾರ್ಯ ಅವರ ಹೆಸರು ಆರ್ಬಿಐ ಗವರ್ನರ್ ಹುದ್ದೆಗೆ ಕೇಳಿ ಬರುತ್ತಿರುವ ಹೆಸರಿನಲ್ಲಿ ಮಂಚೂಣಿಯಲ್ಲಿದೆ. ಕೊಲ್ಕತ್ತಾ ಮೂಲದ ಆರುಂಧತಿ 1977ರಲ್ಲಿ ಎಸ್ ಬಿ ಐಗೆ ಸೇರಿದ್ದರು.
ಸುಬೀರ್ ಗೋಕರ್ನ್
ಖ್ಯಾತ ಅರ್ಥಶಾಸ್ತ್ರಜ್ಞರಾಗಿರುವ ಸುಬೀರ್ ವಿತ್ತಲ್ ಗೋಕರ್ನ್, ರಿಸರ್ವ್ ಬ್ಯಾಂಕಿನಲ್ಲಿ ಈ ಹಿಂದೆ ಡೆಪ್ಯುಟಿ ಗವರ್ನರ್ ಆಗಿ ಕೆಲಸ ನಿರ್ವಹಿಸಿದ್ದರು. ಐಜಿಐಡಿಆರ್, ಇಂಡಸ್ಟ್ರಿಯಲ್ ಫೈನಾನ್ಸ್ ಕಾರ್ಪೋರೇಶನ್ ಮುಂತಾದ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವನ್ನು ಹೊಂದಿರುವ ಸುಬೀರ್, ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಯಲ್ಲಿ ಕೂಡಾ ಕೆಲಸ ಮಾಡಿದ್ದಾರೆ.
ಅರವಿಂದ್ ಸುಬ್ರಮಣಿಯನ್
ಪ್ರಸಕ್ತ ಭಾರತ ಸರಕಾರದ ಮುಖ್ಯ ಹಣಕಾಸು ಸಲಹಕಾರರಾಗಿ ಕೆಲಸ ನಿರ್ವಹಿಸುತ್ತಿರುವ ಅರವಿಂದ್ ಸುಬ್ರಮಣಿಯನ್ ಹೆಸರು ಕೂಡಾ ಆರ್ಬಿಐ ಗವರ್ನರ್ ಹುದ್ದೆಯ ಹೆಸರಿನಲ್ಲಿ ಕೇಳಿ ಬರುತ್ತಿದೆ. ಐಎಂಎಫ್ ನಲ್ಲಿ ಕೆಲಸ ಮಾಡಿರುವ ಅರವಿಂದ್, 2014ರಿಂದ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.
ಉರ್ಜಿತ್ ಪಟೇಲ್
ಪ್ರಸಕ್ತ ಆರ್ಬಿಐನಲ್ಲಿ ಡೆಪ್ಯುಟಿ ಗವರ್ನರ್ ಆಗಿ ಕೆಲಸ ನಿರ್ವಹಿಸುತ್ತಿರುವ ಉರ್ಜಿತ್ ಪಟೇಲ್ ಪಿಎಚ್ಡಿ ಪದವೀಧರರು. ದೇಶದ ಹಣದುಬ್ಬರ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉರ್ಜಿತ್, ಐಎಂಎಫ್ ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ನಲ್ಲೂ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಅರವಿಂದ್ ಪಂಗಾರಿಯಾ
ನಿತಿ ಆಯೋಗದ ಉಪ ಮುಖ್ಯಸ್ಥರಾಗಿರುವ ಅರವಿಂದ್ ಪಂಗಾರಿಯಾ ಪಿಎಚ್ದಿ ಪದವೀಧರರು. ಕೊಲಂಬಿಯಾ ವಿವಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿರುವ ಅರವಿಂದ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನಲ್ಲೂ ಕೆಲಸ ನಿರ್ವಹಿಸಿದ್ದರು.
ಕೌಶಿಕ್ ಬಸು
ವರ್ಲ್ಡ್ ಬ್ಯಾಂಕಿನ ಸಲಹಕಾರರಾಗಿ ಕೆಲಸ ನಿರ್ವಹಿಸಿರುವ ಕೌಶಿಕ್ ಬಸು, 2012ರ ತನಕ ಭಾರತ ಸರಕಾರದ ಪ್ರಮುಖ ಹಣಕಾಸು ಸಲಹಕಾರರಾಗಿದ್ದರು. ಇವರ ಹೆಸರೂ ಆರ್ಬಿಐ ಗವರ್ನರ್ ಹುದ್ದೆಯ ಹೆಸರಿಗೆ ಕೇಳಿ ಬರುತ್ತಿದೆ.