2017ರ ವೇತನ ಮಸೂದೆ ತಿದ್ದುಪಡಿ ಕುರಿತ ಸುಗ್ರೀವಾಜ್ಞೆಗೆ ಲೋಕಸಭೆ ಒಪ್ಪಿಗೆ
ಕಾರ್ಮಿಕ, ಶ್ರಮಿಕ ವರ್ಗದ ಮೇಲಿನ ಶೋಷಣೆ ತಡೆಯಲು ಕೇಂದ್ರ ಸರ್ಕಾರದಿಂದ ಕ್ರಮ ಎಂದು ತಿಳಿಸಿದ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಬಂಡಾರು ದತ್ತಾತ್ರೇಯ.
ನವದೆಹಲಿ, ಫೆಬ್ರವರಿ 8: ಅಸಂಘಟಿತ ನೌಕರರಿಗೆ ನೀಡಲಾಗುವ ವೇತನವನ್ನು ಸಂಬಂಧಪಟ್ಟ ಸಂಸ್ಥೆಗಳು ಚೆಕ್ ಅಥವಾ ಇ-ಪೇಮೆಂಟ್ ಮೂಲಕವೇ ನೀಡಬೇಕೆಂಬ ಸುಗ್ರೀವಾಜ್ಞೆಗೆ ಲೋಕಸಭೆ ಬುಧವಾರ ಧ್ವನಿಮತದ ಒಪ್ಪಿಗೆ ನೀಡಿದೆ.
ಇದರಿಂದಾಗಿ, ಅಸಂಘಟಿತ ಕಾರ್ಮಿಕರು ಕಾರ್ಯ ನಿರ್ವಹಿಸುವ ಸಂಸ್ಥೆಗಳ ಪ್ರತ್ಯೇಕ ಪಟ್ಟಿಯನ್ನು ಕೇಂದ್ರವು ತಯಾರಿಸಲು ಅನುವು ಮಾಡಿಕೊಟ್ಟಂತಾಗಿದೆ. ಅಲ್ಲದೆ, ಆ ಸಂಸ್ಥೆಗಳು ಪ್ರತಿ ಮಾಸದ ಆರಂಭದಲ್ಲಿ ತನ್ನಲ್ಲಿ ಸೇವೆ ಸಲ್ಲಿಸುವ ಕಾರ್ಮಿಕರಿಗೆ ಚೆಕ್ ನೀಡುವಿಕೆ ಅಥವಾ ಬ್ಯಾಂಕ್ ಖಾತೆಗಳಿಗೆ ಸಂದಾಯ ಮಾಡುವ ಮೂಲಕ ವೇತನ ನೀಡುವುದು ಕಡ್ಡಾಯವಾಗಲಿದೆ.
ಸುಗ್ರೀವಾಜ್ಞೆ ತಿದ್ದುಪಡಿಗೆ ಲೋಕಸಭೆಯಲ್ಲಿ ಒಪ್ಪಿಗೆ ಸಿಕ್ಕ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಬಂಡಾರು ದತ್ತಾತ್ರೇಯ, ''ನೂತನ ಸುಗ್ರೀವಾಜ್ಞೆಯಿಂದ ವಿವಿಧ ಸ್ತರಗಳಲ್ಲಿ ದುಡಿಯುತ್ತಿರುವ ಶ್ರಮಿಕ ವರ್ಗವನ್ನು ಶೋಷಣೆಗೊಳಪಡಿಸುವ ಪದ್ಧತಿಗಳಿಗೆ ಕಡಿವಾಣ ಬೀಳಲಿದೆ'' ಎಂದು ತಿಳಿಸಿದರು. ಅಲ್ಲದೆ, ''ಈ ಸುಗ್ರೀವಾಜ್ಞೆ ಮೂೂಲಕ ಭೀಮ್ ರಾವ್ ಅಂಬೇಡ್ಕರ್ ಅವರಿಗೆ ಗೌರವ ಸಮರ್ಪಿಸಿದಂತೆ'' ಎಂದು ತಿಳಿಸಿದರು.