ಇಬ್ಬರು ಹೆಂಡತಿಯರಿಗೆ ಪತಿ ತಲಾ ಮೂರು ದಿನ ಹಂಚಿಕೆ, ಒಂದು ದಿನ ರಜಾ
ಪಾಟ್ನಾ, ಮೇ 29: ಸಿನಿಮಾಗಳು ನಿಜ ಜೀವನದಲ್ಲಿ ಹೇಗೆಲ್ಲ ನೆನಪಾಗುತ್ತದೆ ಅನ್ನೋದಿಕ್ಕೆ ಈ ವರದಿ ಸಾಕ್ಷಿ. ಎಸ್ ನಾರಾಯಣ್ ಡೈರೆಕ್ಟರ್, ವಿಷ್ಣುವರ್ಧನ್ ಹೀರೋ. ಅದರಲ್ಲಿ ವಿಷ್ಣು ಪಾತ್ರದ ಹೆಸರು ಬೆಟ್ಟಪ್ಪ. ಆ ಸಿನಿಮಾದ ಆರಂಭದ ದೃಶ್ಯದಲ್ಲೇ ಒಬ್ಬ ವ್ಯಕ್ತಿ ತಾನು ಎರಡನೇ ಮದುವೆ ಆಗಬೇಕು ಅಂತ ಬಂದಾಗ, ಊರ ಯಜಮಾನ ತೀರ್ಪು ಕೊಡ್ತಾರೆ.
ಇಬ್ಬರೂ ಹೆಂಡತಿಯರ ಮನೆಯಲ್ಲಿ ಮೂರು-ಮೂರು ದಿನ ಇರು ಅಂತ. ಡಿಟ್ಟೋ ಇದೇ ಥರ ತೀರ್ಮಾನವೊಂದು ಬಿಹಾರದ ಪಾಟ್ನಾದಲ್ಲಿ ಕೊಟ್ಟಿದ್ದಾರೆ. ಪಾಟ್ನಾದ ಅರುಣ್ ಕುಮಾರ್ ಗಾಗಿ ಆತನ ಇಬ್ಬರು ಪತ್ನಿಯರು ಜಗಳ ಮಾಡುತ್ತಿದ್ದಾಗ ಪರಿಹಾರ ರೂಪದಲ್ಲಿ ನೀಡಿದ ರಾಜೀಸೂತ್ರ ಇದು.
ಇಬ್ಬರೂ ಪತ್ನಿಯರು ಕಾನೂನು ಪ್ರಕಾರ ಮದುವೆ ಆಗಿದ್ದೇವೆ ಎಂದಿದ್ದಾರೆ. ಇಬ್ಬರೂ ಮಹಿಳೆಯರ ಅಹವಾಲು ಆಲಿಸಿದ ಪೊಲೀಸರು, ವಾರದಲ್ಲಿ ಮೂರು ದಿನ ಒಬ್ಬ ಹೆಂಡತಿ ಜತೆ, ಇನ್ನು ಮೂರು ದಿನ ಮತ್ತೊಂಬ ಹೆಂಡತಿ ಜತೆ ಇರಬೇಕು ಎಂದು ಸಂಧಾನ ಸೂತ್ರವೊಂದನ್ನು ಮುಂದಿಟ್ಟಿದ್ದಾರೆ.[ಸುಷ್ಮಾ ಗೆ ಹೈದರಾಬಾದ್ ದಂಪತಿ ಮೊರೆ, ಇದು ಮತ್ತೊಂದು ಉಜ್ಮಾ ಪ್ರಕರಣ]
ಮೀನಾ ಹಾಗೂ ಪೂಜಾ ಪತಿಯ ವಿಚಾರದಲ್ಲಿ ಜಗಳವಾಡಿ ಫುಲ್ ವಾರಿಶರೀಫ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹನ್ನೊಂದು ಗಂಟೆಗಳ ಸುದೀರ್ಘ ಚರ್ಚೆ ನಂತರ ಇಂಥದ್ದೊಂದು ಘನಂದಾರಿ ಸಂಧಾನ ಮಾಡಿಸಿದ್ದಾರೆ ಪೊಲೀಸರು. ಅರುಣ್ ಒಂದು ನರ್ಸಿಂಗ್ ಹೋಮ್ ನಡೆಸುತ್ತಾನೆ.
ಎರಡನೇ ಮದುವೆ ಆಗೋದು ಕಾನೂನಿನ ಪ್ರಕಾರ ಅಪರಾಧ. ಈ ಬಗ್ಗೆ ದೂರು ಕೊಡ್ತೀನಿ ಎಂದು ಮೊದಲ ಪತ್ನಿ ಬೆದರಿಸಿದ್ದಾರೆ. ಆಗ ಇಬ್ಬರನ್ನೂ ತಾನು ಮದುವೆ ಆಗಿರುವುದಾಗಿ ಅರುಣ್ ಒಪ್ಪಿದ್ದಾನೆ. ಕೊನೆಗೆ ಪೊಲೀಸರು, ಮೊದಲ ಮೂರು ದಿನ ಮೊದಲ ಹೆಂಡತಿ ಜತೆಗೆ, ನಂತರದ ಮೂರು ದಿನ ಎರಡನೇ ಹೆಂಡತಿ ಜತೆಗೂ ಕಳೆಯುವಂತೆ ಸೂಚಿಸಿದ್ದಾರೆ.['ಕೋಡ್ ಬ್ಲ್ಯೂ' ಘೋಷಣೆ ಮಾಡಿದ ಆ ಕ್ಷಣ ನಡೆದಿತ್ತು ಪವಾಡ!]
ಇನ್ನೊಂದು ದಿನ ಇದೆಯಲ್ಲಾ ಅಂತ ನೀವು ಕೇಳಬಹುದು. ಆ ದಿನ ಅರುಣ್ ಗೆ ಇಬ್ಬರು ಹೆಂಡತಿಯರಿಂದ ಬಿಡುವು. ಈ ಸೂತ್ರವನ್ನು ಅರುಣ್ ಹಾಗೂ ಆತನ ಇಬ್ಬರು ಪತ್ನಿಯರು ಒಪ್ಪಿದ್ದು, ಇದೀಗ ಇಡೀ ಪ್ರಹಸನ ಶುಭಂ ಅಂತಿದ್ದಾರೆ.