ಮಲಿನ ನಗರಿ ದೆಹಲಿ ಜನರ ಬದುಕು, ಬವಣೆ ಕೇಳಿಸಿಕೊಳ್ಳಿ..
ಅಲ್ಲಿನ ಗಾಳಿ ಗಲೀಜಾಗಿದೆ. ಅದರ ವಾಸನೆಯಿಂದ ಗೊತ್ತಾಗುತ್ತದೆ. ಮಾಲಿನ್ಯ ಪ್ರಮಾಣ ಅಳೆಯುವುದಕ್ಕೆ ಒಂದು ಮಾನದಂಡ ಇದೆ. ಸರಕಾರವೇ ನಿಗದಿ ಮಾಡಿದ್ದಕ್ಕಿಂತ ದೆಹಲಿಯು ಹನ್ನೆರಡರಷ್ಟು ಹೆಚ್ಚು ಮಲಿನವಾಗಿದೆ.
ದೆಹಲಿಗೆ ಈಗ ತನ್ನ ಕಿರೀಟದ ಮೇಲೊಂದು ಮುಳ್ಳಿನ ತಂತಿ ಸಿಕ್ಕಿಕೊಂಡಿದೆ. ಅದೇನಂತೀರಾ, ಜಗತ್ತಿನ ಅತಿ ಮಾಲಿನ್ಯ ನಗರಗಳ ಸಾಲಿನಲ್ಲಿ ದೆಹಲಿಯೂ ಒಂದು ಎಂದು ಸ್ಥಾನ ಪಡೆದಿದೆ. ಕಳೆದ ವಾರ ದೇಶದ ರಾಜಧಾನಿ ಈ ವಿಚಾರದಲ್ಲಿ ಹೊಸ ದಾಖಲೆಯನ್ನೂ ಬರೆದಿದೆ. ಸರಕಾರಿ ದಾಖಲೆಗಳೇ ಹೇಳುತ್ತವೆ: ಕಳೆದ ಬುಧವಾರದಂದು ಹದಿನೇಳು ವರ್ಷದಲ್ಲೇ ಅತಿ ಹೆಚ್ಚು ಮಾಲಿನ್ಯ ಕಂಡಿದೆಯಂತೆ ದಿಲ್ಲಿ.
ಅಲ್ಲಿನ ಗಾಳಿ ಗಲೀಜಾಗಿದೆ. ಅದರ ವಾಸನೆಯಿಂದ ಗೊತ್ತಾಗುತ್ತದೆ. ಇನ್ನು ಕಂದು ಬಣ್ಣದ ಹೊಗೆ ಆರೋಗ್ಯಕ್ಕೆ ಖಂಡಿತಾ ಮಾರಕ. ಮಾಲಿನ್ಯ ಪ್ರಮಾಣ ಅಳೆಯುವುದಕ್ಕೆ ಒಂದು ಮಾನದಂಡ ಇದೆ. ಸರಕಾರವೇ ನಿಗದಿ ಮಾಡಿದ್ದಕ್ಕಿಂತ ದೆಹಲಿಯು ಹನ್ನೆರಡರಷ್ಟು ಹೆಚ್ಚು ಮಲಿನವಾಗಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಮಾಡಿದ್ದಕಿಂತ ಎಪ್ಪತ್ತರಷ್ಟು ಹೆಚ್ಚು ಮಲಿನವಾಗಿದೆ ದೆಹಲಿ.
ದೆಹಲಿಯ ಚಳಿಗಾಲ ಅಂದರೆ ಅದೊಂದು ಸೊಗಸು ಎಂಬ ಕಾಲವಿತ್ತು. ಶುಭ್ರ, ಸುಂದರ ಹಗಲುಗಳು ರಜೆ ಕಳೆಯಲು ಸೂಕ್ತವಾದುದು ಎಂದು ಪ್ರವಾಸಿಗರು ಹುಡುಕಿಕೊಂಡು ಹೋಗುತ್ತಿದ್ದ ದಿನಗಳು. ವಾರಾಂತ್ಯಗಳನ್ನು ಉದ್ಯಾನಗಳಲ್ಲಿ ಕಳೆಯಲು ಜನರು ಬಯಸುತ್ತಿದ್ದ ಸಮಯವದು. ಈಗ ವರ್ಷದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಕಾಲ ಇದಾಗಿದೆ.
ಹತ್ತಾರು ಲಕ್ಷ ಜನ ಕೆಮ್ಮು, ಕಣ್ಣುರಿಯಂಥ ಸಮಸ್ಯೆ ಎದುರಿಸುತ್ತಿದ್ದಾರೆ. ಹಲವು ಶಾಲೆಗಳಿಗೆ ರಜೆ ಕೊಡಲಾಗಿದೆ. ಅಥವಾ ಶಾಲೆ ಹೊರಗಿನ ಚಟುವಟಿಕೆಗಳನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಮಾಲಿನ್ಯ ಹೆಚ್ಚಾಗಿರುವ ದಿನಗಳಲ್ಲಿ ಮನೆಯೊಳಗೆ ಉಳಿದುಬಿಡಿ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.
ವಾಯು ಮಾಲಿನ್ಯದ ಬಗ್ಗೆ ಚರ್ಚಿಸುವುದಕ್ಕೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತುರ್ತು ಸಭೆಯೊಂದನ್ನು ಶನಿವಾರ ಕರೆದಿದ್ದಾರೆ ಅಂದರೆ ದಿಲ್ಲಿಯ ಸ್ಥಿತಿ ಹೇಗಿರಬಹುದು ಅಂತ ಊಹಿಸಿಕೊಳ್ಳಿ.
ಜನರಿಗೆ ಕಾಳಜಿ ಇಲ್ಲ
ದೆಹಲಿಯ ಮಾಲಿನ್ಯ ಕಡಿಮೆ ಅಗಲಿ ಎಂಬ ಉದ್ದೇಶವೇ ಅಲ್ಲಿನ ಜನರಿಗೆ ಇದ್ದಂತಿಲ್ಲ. ದೀಪಾವಳಿಯಲ್ಲಿ ಪಟಾಕಿ ಸದ್ದು ನಿಂತಿಲ್ಲ. ಕಸಕ್ಕೆ ರಾತ್ರಿಯಿಡೀ ಬೆಂಕಿ ಹೊತ್ತಿಸುವುದನ್ನು ನಿಲ್ಲಿಸಿಲ್ಲ. ನಿರ್ಮಾಣ ಕಾಮಗಾರಿಯಿಂದ ಹೊರಸೂಸುವ ದೂಳೂ ಕಡಿಮೆಯಾಗಿಲ್ಲ.
ಭತ್ತದ ಹುಲ್ಲು ಸುಡ್ತಾರೆ
ಚಳಿಗಾಲದ ಆರಂಭದಲ್ಲಿ ದೆಹಲಿಯ ಗಡಿ ಭಾಗದ ರೈತರು ಭತ್ತದ ಹುಲ್ಲು ಸುಡಲು ಆರಂಭಿಸುತ್ತಾರೆ. ಅವರಿಗೆ ಕೃಷಿ ಭೂಮಿ ಸಪಾಟಾಗಬೇಕು. ಆನಂತರ ಗೋಧಿ ಬೆಳೆಯುವುದಕ್ಕೆ ಶುರು ಮಾಡುತ್ತಾರೆ. ತಜ್ಞರೊಬ್ಬರ ಪ್ರಕಾರ, ದೆಹಲಿ ಕಡೆಗೆ ಎಲ್ಲ ದಿಕ್ಕಿನಿಂದಲೂ ಗಾಳಿ ಒಳಬರುತ್ತಿದೆ. ಅದರಲ್ಲೂ ಪಂಜಾಬ್, ಹರಿಯಾಣದಿಂದ. 'ದೊಡ್ಡ ಪ್ರಮಾಣದಲ್ಲಿ ಬೆಳೆಗೆ ಬೆಂಕಿ ಹೊತ್ತಿಕೊಳ್ಳುವುದನ್ನು ಇವತ್ತಿಗೂ ಗಮನಿಸಬಹುದು'. ಕಳೆದ ಕೆಲವು ದಿನಗಳಿಂದ ದೆಹಲಿ ಮತ್ತು ಹೊರವಲಯದಲ್ಲಿ ವಿಪರೀತ ಅನ್ನೋಷ್ಟು ಹೆಚ್ಚಾಗಿದೆ.
ಸರಕಾರದ ಕ್ರಮಗಳು
ಕಳೆದ ಎರಡು ವರ್ಷದಲ್ಲಿ ಸರಕಾರ ಕೂಡ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮಾಲಿನ್ಯ ಪ್ರಮಾಣ ತಗ್ಗಿಸಲು ಯತ್ನಿಸುತ್ತಿದೆ. ಕಾರುಗಳ ಹೊಗೆ ಪರೀಕ್ಷೆ ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡಿದೆ. ನಗರ ಪ್ರವೇಶಿಸುವ ಡೀಸೆಲ್ ಟ್ರಕ್ ಗಳಿಗೆ ತೆರಿಗೆ ಹಾಕಲಾಗುತ್ತಿದೆ. ಇನ್ನು ಚಳಿಗಾಲದಲ್ಲಿ ನವದೆಹಲಿಯಲ್ಲಿ ಕಾರಿನ ಸಂಖ್ಯೆ ನಿಯಮಿತಗೊಳಿಸಿ, ಸಮ-ಬೆಸ ಸಂಖ್ಯೆ ನಿಯಮವನ್ನು ಕೂಡ ಜಾರಿಗೆ ತಂದಿತು.
'ಚೇಂಜ್ ದ ಏರ್' ಎಂಬ ಮೊಬೈಲ್ ಅಪ್ಲಿಕೇಷನ್
ಕಳೆದ ತಿಂಗಳು 'ಚೇಂಜ್ ದ ಏರ್' ಎಂಬ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದ್ದು, ಮಾಲಿನ್ಯದ ಮೂಲವನ್ನು ಫೋಟೋ ತೆಗೆದು ದೂರು ಸಲ್ಲಿಸುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲೆಗಳನ್ನು, ಕಸವನ್ನು ಸುಡುತ್ತಿದ್ದರೆ, ದೂಳು ನಿಯಂತ್ರಣಕ್ಕೆ ಕ್ರಮ ಅನುಸರಿಸದೆ ಕಟ್ಟಡ ನಿರ್ಮಾಣ ಮಾಡುತ್ತಿದ್ದರೆ ಅವುಗಳ ಫೋಟೋ ತೆಗೆದು, ಕಳಿಸಬಹುದು. ಅದರೆ ಇದನ್ನು ಜಾರಿಗೆ ತರೋದೇ ಸಮಸ್ಯೆಯಾಗಿದೆ.
ದುಬಾರಿ ಬಾಬ್ತು
ಭತ್ತದ ಹುಲ್ಲು ಸುಡುವ ರೈತರಿಗೆ ದಂಡ ವಿಧಿಸಬೇಕು ಎಂಬುದು ನಿಯಮವಾದರೂ ಅದನ್ನು ಜಾರಿಗೆ ತರೋದಿಕ್ಕೆ ಅಗ್ತಿಲ್ಲ. ಯಾಕೆಂದರೆ, ಕೂಲಿಯವರನ್ನು ಇಟ್ಟು ಅವುಗಳನ್ನು ಕಟಾವು ಮಾಡಿಸೋದು ರೈತರಿಗೆ ದುಬಾರಿ ಬಾಬ್ತು. ಆ ಕಾರಣಕ್ಕೆ ಬೆಂಕಿ ಇಟ್ಟುಬಿಡ್ತಾರೆ. ಆದರೆ ರೈತರ ವಾದವೇ ಬೇರೆ. ನಮ್ಮದೇನಿದ್ದರೂ ಒಂದು ತಿಂಗಳ ಕೆಲಸ. ವರ್ಷವಿಡೀ ಡೀಸೆಲ್ ಕಾರುಗಳು ಓಡಾಡ್ತವಲ್ಲಾ, ಅದಕ್ಕೇನು ಮಾಡ್ತೀರಿ ಅಂತಾರೆ.
ಕತ್ತರಿಸಲು ಮಾಡುವ ಖರ್ಚು ದಂಡ
ಕೃಷಿ ಭೂಮಿಯಲ್ಲಿ ಇರುವ ಹುಲ್ಲಿನಿಂದ ಯಾವ ಪ್ರಯೋಜನವೂ ಇಲ್ಲದಿರುವಾಗ ಅದನ್ನು ಕತ್ತರಿಸೋದಿಕ್ಕೆ ಕೂಲಿ ಎಲ್ಲಿ ತರಲಿ ಅನ್ನೋದು ರೈತರ ವಾದ. ಇದಕ್ಕೆ ಪರ್ಯಾಯವಾಗಿ ಸರಕಾರವೇ ಏನಾದರೂ ಯೋಚನೆ ಮಾಡಿ ರೈತರ ನೆರವಿಗೆ ಬಂದರೆ ಒಳ್ಳೆಯದು ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಸಲಹೆ
ಎಲ್ಲದರ ಕೊಡುಗೆ ಇದು
ದೆಹಲಿಯಲ್ಲಿ ವಾಹನಗಳ ಮಾಲಿನ್ಯ, ಕಟ್ಟಡಗಳ ದೂಳು, ಕಸಕ್ಕೆ ಇಡುವ ಬೆಂಕಿ ಹೀಗೆ ರಾಶಿ ಸಮಸ್ಯೆಗಳಿವೆ. ಇದರ ಜೊತೆಜೊತೆಗೆ ಬೆಳೆಗೆ ಬೆಂಕಿ ಇಡುವುದರಿಂದ ಆಗುವ ಮಾಲಿನ್ಯವೂ ಸೇರಿ ಇಂಥ ಪರಿಸ್ಥಿತಿ ಬಂದಿದೆ.