ಸಾಲ ಮಾಡಿಯಾದ್ರೂ ತುಪ್ಪ ತಿನ್ನುವವರಿಗೆ ಅರುಣ್ ಜೇಟ್ಲಿ ನೀಡಿದ ಶಾಕ್
ಉದ್ದೇಶಪೂರ್ವಕ ಸುಸ್ಥಿದಾರರ ಆಸ್ತಿ ಜಪ್ತಿ ಮಾಡಿಕೊಳ್ಳುವಂತಹ ಹೊಸ ಕಾನೂನನ್ನು ಸರಕಾರ ಜಾರಿಗೆ ತರಲಿದೆ ಎಂದು 2017-18ರ ಕೇಂದ್ರ ಆಯವ್ಯಯ ಮಂಡನೆಯ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನವದೆಹಲಿ, ಫೆ 1: ಊರೆಲ್ಲಾ ಸಾಲ ಮಾಡಿಕೊಂಡು, ದೇಶ ಬಿಟ್ಟು ಹೋಗಿರುವ ಉದ್ದೇಶಪೂರ್ವಕ ಸುಸ್ಥಿದಾರರ ಆಸ್ತಿ ಜಪ್ತಿ ಮಾಡಿಕೊಳ್ಳುವಂತಹ ಹೊಸ ಕಾನೂನನ್ನು ಸರಕಾರ ಜಾರಿಗೆ ತರಲಿದೆ ಎಂದು 2017-18ರ ಕೇಂದ್ರ ಆಯವ್ಯಯ ಮಂಡನೆಯ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನ್ಯಾಯಾಂಗ ಬಂಧನಕ್ಕೆ ಒಳಗಾಗುವ ತನಕ, ಕಾನೂನು ಕಣ್ತಪ್ಪಿಸಿ ವಿದೇಶದಲ್ಲಿ ನೆಲೆಸಿರುವ ಸುಸ್ಥಿದಾರರ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳುವ ಮಹತ್ವದ ನಿರ್ಧಾರವನ್ನು ಸರಕಾರ ಸದ್ಯದಲ್ಲೇ ಪ್ರಕಟಿಸಲಿದೆ ಎಂದು ಜೇಟ್ಲಿ ಬಜೆಟ್ ಮಂಡನೆಯ ವೇಳೆ ತಿಳಿಸಿದ್ದಾರೆ. (ಬಜೆಟ್ 2017: ಯಾವ್ದು ಏರಿಕೆ, ? ಯಾವ್ದು ಇಳಿಕೆ)
ಆರ್ಥಿಕ ಅಪರಾಧಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಕಾನೂನು ಜಾರಿಗೆ ತರುವುದು ಅತ್ಯವಶ್ಯಕವಾಗಿದೆ ಎಂದು ಜೇಟ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂಬಂಧ ಹೊಸ ಕಾನೂನು ಅಥವಾ ಈಗಿರುವ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಹೇಳಿರುವ ಹಣಕಾಸು ಸಚಿವ ಜೇಟ್ಲಿ, ಪರೋಕ್ಷವಾಗಿ ಮದ್ಯದ ದೊರೆ ವಿಜಯ್ ಮಲ್ಯಗೆ ಶಾಕ್ ನೀಡಿದ್ದಾರೆ.
ಲಂಡನ್ ನಲ್ಲಿರುವ ವಿಜಯ್ ಮಲ್ಯರಿಂದ ಸಾಲ ಹಿಂಪಡೆಯಲು ಬ್ಯಾಂಕುಗಳು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದ್ದು, ಸಾಲ ಕೊಟ್ಟು ಹೈರಾಣವಾಗಿರುವ ಬ್ಯಾಂಕುಗಳಿಗೆ ಈ ಹೊಸ ಕಾನೂನು ಸಂಜೀವಿನಿಯಾಗುವ ಸಾಧ್ಯತೆಯಿದೆ.
ಮಾರ್ಚ್ ಎರಡರಂದು ಭಾರತ ಬಿಟ್ಟು ಹೋಗಿರುವ ವಿಜಯ್ ಮಲ್ಯ, ವಿವಿಧ ಬ್ಯಾಂಕುಗಳಿಗೆ ನೀಡಬೇಕಾಗಿರುವ ಒಟ್ಟು ಸಾಲದ ಮೊತ್ತ ಬರೋಬ್ಬರಿ ಒಂಬತ್ತು ಸಾವಿರ ಕೋಟಿ. ಇದರಲ್ಲಿ ಜಪ್ತಿ ಮಾಡಿಕೊಂಡಿರುವ ಮಲ್ಯ ಆಸ್ತಿಯ ಮೊತ್ತ 8041 ಕೋಟಿ.